ರಿಪ್ಪನ್ಪೇಟೆ : ರಿಪ್ಪನ್ಪೇಟೆಯ ವಿನಾಯಕ ವೃತ್ತದ ನಾಲ್ಕು ತಾಲ್ಲೂಕು, ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯ ಭಾಗದಂತಿದ್ದು ಮಾದರಿ ಸರ್ಕಲ್ ಅನ್ನಾಗಿ ಮಾಡುವ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸರ್ಕಾರದಿಂದ ಹೆಚ್ಚಿನ ಅನುದಾನ ಹಣವನ್ನು ಬಿಡುಗಡೆ ಮಾಡಿಸಿ ಕಾಮಗಾರಿಯು ಭರದಿಂದ ಸಾಗಿರುವಾಗ ಇಂದು ಬೆಳಗ್ಗೆ ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಕಾಮಗಾರಿಯನ್ನು ತಡೆದು ಜೆಸಿಬಿ ಯಂತ್ರ ಏರಿ ರಸ್ತೆ ಚನ್ನಾಗಿದ್ದರೂ ಅದನ್ನು ಕಿತ್ತು ಮಾಡುವ ಔಚಿತ್ತ ಏನು ಎಂದು ಪ್ರಶ್ನಿಸಿ, ‘ಹೇಳುವುದು ವೇದ, ಹಾಕೋದು ಗಾಳ’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಕಳೆದ ಒಂದು ವಾರದಿಂದ ಶಿವಮೊಗ್ಗ-ಹೊಸನಗರ ಸಂಪರ್ಕದ ವಿನಾಯಕ ವೃತ್ತದಿಂದ ತಲಾ ಒಂದು ಕಿ.ಮೀ.ದೂರದ ರಸ್ತೆ ಅಗಲೀಕರಣ ಮತ್ತು ಒಳಚರಂಡಿ, ಪಾದಚಾರಿಗಳಿಗೆ ಓಡಾಡುವ ರಸ್ತೆಯ ಇಕ್ಕೆಲಗಳಲ್ಲಿ ಇಂಟರ್ಲಾಕ್ ಅಳವಡಿಕೆ ಸೇರಿದಂತೆ ಕಾಮಗಾರಿ ಭರದಿಂದ ಸಾಗಿದ್ದು ಇಂದು ಶಿವಮೊಗ್ಗ ರಸ್ತೆಯಲ್ಲಿ ಆರಂಭಗೊಂಡಿರುವ ಕಾಮಗಾರಿಗೆ ಜೆಸಿಬಿ ಯಂತ್ರದಿಂದ ಕೆಲಸ ಮಾಡುವ ಸಂದರ್ಭದಲ್ಲಿ ಏಕಾಂಗಿ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಯಂತ್ರವನ್ನು ಏರಿ ಪ್ರತಿಭಟನೆ ನಡೆಸಿದರು.
ಈ ಹಿಂದೆ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಗ್ರಾಮೀಣಾಭಿವೃದ್ದಿ ಪಂಚಾಯಿತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಲ್ಲಿನ ಪೊಲೀಸ್ ವಸತಿ ಗೃಹಗಳಿಗೆ ತೆರಳುವ ಸಂಪರ್ಕ ರಸ್ತೆಯ ಅಭಿವೃದ್ದಿಗಾಗಿ ಉದ್ಯೋಗಖಾತ್ರಿ ಯೋಜನೆಯಡಿ ರಸ್ತೆ ಅಭಿವೃದ್ದಿ ಪಡಿಸುವಂತೆ ಆದೇಶಿಸಲಾಗಿದ್ದರೂ ಕೂಡಾ ಈವರೆಗೂ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ ಎಂದು ಆರೋಪಿಸಿ ಉತ್ತಮವಾಗಿರುವ ಸಂಪರ್ಕ ರಸ್ತೆಯನ್ನು ಕಿತ್ತು ಹಾಕಿ ಅಗಲೀಕರಣ ಮಾಡುತ್ತಿದ್ದೀರಾ? ಹಾಗಾದರೆ ರಕ್ಷಣೆ ಮಾಡುವ ರಕ್ಷಕರ ರಸ್ತೆಯನ್ನು ಮಾಡದೆ ನಿರ್ಲಕ್ಷ್ಯ ವಹಿಸಿರುವುದನ್ನು ವಿರೋಧಿಸಿ ಏಕಾಂಗಿಯಾಗಿ ಈ ಹೋರಾಟ ನಡೆಸುತ್ತಿರುವುದಾಗಿ ಟಿ.ಆರ್.ಕೃಷ್ಣಪ್ಪ ಮಾಧ್ಯಮದವರಲ್ಲಿ ತಮ್ಮ ಹೋರಾಟದ ಕುರಿತು ಹೇಳಿ, ಜಿಲ್ಲಾ ಪಂಚಾಯಿತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





