ಭದ್ರಾವತಿ

ಫಾರಂ ಹೌಸ್‌ನಿಂದ ನಾಯಿ ಹೊತ್ತೊಯ್ದ ಚಿರತೆ !

ಭದ್ರಾವತಿ : ಕೂಡ್ಲಿಗೆರೆ ಗ್ರಾಮದಲ್ಲಿನ ಎಪಿಎಂಸಿ ಮಾಜಿ ನಿರ್ದೇಶಕಿ ಸುಜಾತ ಅವರ ಟಿವಿಎಸ್ ಫಾರಂನಲ್ಲಿ ಭಾನುವಾರ ರಾತ್ರಿ ಚಿರತೆಯೊಂದು ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ನಡೆದಿದೆ. ಇದಕ್ಕೂ ಮುನ್ನ, ಸುಮಾರು ಆರೇಳು ತಿಂಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದೆ. ಇದರಿಂದಾಗಿ ಸ್ಥಳೀಯರು ಹಾಗೂ ಮನೆಯವರು ಭಯಭೀತರಾಗಿದ್ದಾರೆ.

ಸುಜಾತ ಅವರ ಫಾರಂನಲ್ಲಿ ನಾಯಿಗಳನ್ನು ರಕ್ಷಣೆಗಾಗಿ ಸಾಕಲಾಗಿತ್ತು. ಆದರೆ, ಭಾನುವಾರ ಬೆಳಗ್ಗೆ ವಾಕಿಂಗ್‌ಗೆ ಹೊರಟಾಗ ನೋಡುವಂತೆ ಎರಡು ಮರಿನಾಯಿಗಳು ಮಾತ್ರ ಇದ್ದವು. ಅನುಮಾನಗೊಂಡು ಸಿಸಿ ಕ್ಯಾಮೆರಾ ಫೂಟೇಜ್ ಪರಿಶೀಲಿಸಿದಾಗ, ಬೆಳಗಿನಜಾವ 2:03ಕ್ಕೆ ಚಿರತೆಯೊಂದು ಬಂದು ಹೆಣ್ಣು ಕರಿ ನಾಯಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೊತ್ತೊಯ್ಯುವ ದೃಶ್ಯ ಕಂಡುಬಂದಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/195S3Xpt6v/

ಸ್ಥಳೀಯರು ಅರಣ್ಯ ಇಲಾಖೆ ಬೋನುಗಳ ಮೂಲಕ ಚಿರತೆ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದರೂ, ಈ ರೀತಿಯ ಘಟನೆಗಳು ಇನ್ನೂ ಮತ್ತೆ ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಮತ್ತು ಸ್ಥಳೀಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂ ಪಶುಪಾಲಕರು ಒತ್ತಾಯಿಸಿದ್ದಾರೆ.

ಈ ಘಟನೆ ಸ್ಥಳೀಯರ ನಡುವೆ ಭೀತಿಯನ್ನೂ, ಜಾಗೃತಿ ಅಗತ್ಯವಿರುವುದನ್ನೂ ಹೆಚ್ಚಿಸಿದೆ. ಭದ್ರಾವತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಗಳ ಪ್ರಭಾವ ಹೆಚ್ಚುತ್ತಿರುವುದರಿಂದ, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

Leave a Comment