ಶಿವಮೊಗ್ಗ : 1989ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಮೃಗವಧೆ ಗ್ರಾಮದ ಗುಡ್ಡೆಕೊಪ್ಪದಲ್ಲಿ ನಡೆದ ಡಕಾಯಿತಿ ಪ್ರಕರಣದ ಆರೋಪಿಯನ್ನು ಮಾಳೂರು ಪೊಲೀಸ್ ಠಾಣೆ ಸಿಬ್ಬಂದಿಗಳು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1989ರಲ್ಲಿ ನಡೆದ ಈ ಡಕಾಯಿತಿ ಪ್ರಕರಣದ ಆರೋಪಿ ಮಂಗಳೂರಿನ ಅಬ್ದುಲ್ ಖಾದರ್ ಅಲಿಯಾಸ್ ಮೊಣು (57) ಘಟನೆ ನಂತರದಿಂದ ಇವನು ಬರೋಬ್ಬರಿ 37 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಪೊಲೀಸರು ಕೇರಳದ ಮಂಜೇಶ್ವರ ತಾಲ್ಲೂಕಿನ ವರ್ಕಾಡಿ ಗ್ರಾಮದ ಪುರ ಸಂಗೋಡಿ, ಪಾಡಿ ಎಂಬ ಪ್ರದೇಶದಲ್ಲಿ ಈತ ವಾಸವಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ, ಅಲ್ಲಿಗೆ ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಶಿವಮೊಗ್ಗ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಪತ್ತೆ ಕಾರ್ಯದಲ್ಲಿ ಶಿವಮೊಗ್ಗ ಎಸ್ಪಿ ನಿಖಿಲ್ ಬಿ, ಎಎಸ್ಪಿ ಕಾರ್ಯಪ್ಪ ಎಜಿ, ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಚ್ಚಿ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಸಿಪಿಐ ರಾಜಶೇಖರ್ ಹಾಗೂ ಮಾಳೂರು ಪೊಲೀಸ್ ಠಾಣೆ ಪಿಎಸ್ಐ ಸುನಿಲ್ ಬಿ.ಸಿ. ನಿರ್ದೇಶನದಲ್ಲಿ ಠಾಣೆ ಸಿಬ್ಬಂದಿಗಳಾದ ಮೇಘರಾಜ್ ಮತ್ತು ಅಭಿಲಾಶ ಪಾಲ್ಗೊಂಡಿದ್ದರು.