ಹಲಗೂರು ಬೃಹನ್ಮಠಕ್ಕೆ ಉತ್ತರಾಧಿಕಾರಿ ನಿಯುಕ್ತಿ
ಎನ್.ಆರ್ ಪುರ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶ್ರೀಮದ್ರಂಭಾಪುರಿ ಶಾಖಾ ಹಲಗೂರು ಬೃಹನ್ಮಠಕ್ಕೆ ವೈ.ಜೆ. ಶಿವಲಿಂಗಸ್ವಾಮಿ ಎಂಬ ವಟುವನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶನಿವಾರ ಹಲಗೂರು ಬೃಹನ್ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಹಾಗೂ ಹಲಗೂರು ಮಠದ ಶಿಷ್ಯ ಸದ್ಭಕ್ತ ಮಂಡಳಿಯವರು ಪರಸ್ಪರ ಸಮಾಲೋಚಿಸಿದ ನಂತರ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ ಗ್ರಾಮದ ವೇ.ಜಯದೇವ ಶಾಸ್ತ್ರಿ ಕಾತ್ಯಾಯಿನಿ ಇವರ ಸುಪುತ್ರರಾದ ವಿದ್ಯಾ ವಿನಯ ಸಂಪನ್ನರಾದ ಬಿ.ಎ.ಪದವೀಧರರಾಗಿರುವ, ವೇದ ಉಪನಿಷತ್ತುಗಳನ್ನು ಬಲ್ಲವರಾದ ವೈ.ಜೆ. ಶಿವಲಿಂಗಸ್ವಾಮಿ ಎಂಬ ವಟುವನ್ನು ನಿಯುಕ್ತಿಗೊಳಿಸಲಾಗಿದೆ. ವೀರಶೈವ ಧರ್ಮ ಪರಂಪರೆಯಂತೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಬರಲಿರುವ ಜೂನ್ 13 ಮತ್ತು 14ರಂದು ಶ್ರೀಮದ್ರಂಭಾಪುರಿ ಶಾಖಾ ಹಲಗೂರು ಬೃಹನ್ಮಠಕ್ಕೆ ಶ್ರೀ ಗುರು ಪಟ್ಟಾಧಿಕಾರ ನೆರವೇರಿಸಲು ತೀರ್ಮಾನಿಸಲಾಗಿದೆ. ಹಲಗೂರು ಮಠಾಧ್ಯಕ್ಷರಾದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳನ್ನು ನೆರವೇರಿಸುವ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಹನುಮಾಪುರದ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು, ಹಲಗೂರಿನ ವೀರಶೈವ ಸಮಾಜದ ಅಧ್ಯಕ್ಷ ರವಿ ನಾಗರಾಜಪ್ಪ ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.