ಹೊಸನಗರ : ತಾಲ್ಲೂಕಿನ ನಿಟ್ಟೂರು ಸಮೀಪದ ಬೇಳೂರು ಗ್ರಾಮದಲ್ಲಿ ತಡರಾತ್ರಿ ಶಿಕಾರಿಪುರದಿಂದ ಮಂಗಳೂರಿಗೆ ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿಯೊಂದರಲ್ಲಿ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು, ಮುಂಭಾಗ ಸಂಪೂರ್ಣವಾಗಿ ಸುಟ್ಟ ಕರಕಲಾದ ಘಟನೆ ನಡೆದಿದೆ.
ಈ ಘಟನೆ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ನಡೆದಿದ್ದು, ಲಾರಿಯ ಚಾಲಕ ಮಹಮ್ಮದ್ ಹುಸೇನ್ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಸುರಕ್ಷಿತವಾಗಿ ಹೊರಬಂದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಸ್ಥಳೀಯರು ಕೂಡ ತಕ್ಷಣವೇ ಬೆಂಕಿ ನಂದಿಸಲು ನೆರವು ನೀಡಿದ್ದು, ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣದಲ್ಲಿ ತಂದಿದ್ದಾರೆ. ಲಾರಿಯ ಮುಂಭಾಗ ಸಂಪೂರ್ಣವಾಗಿ ಬೆಂಕಿಗಾಹುತಿಯಾದರೂ, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ.

ಪ್ರಾಥಮಿಕ ತನಿಖೆಯಲ್ಲಿ ಇಂಜಿನ್ನ ECM (ಎಲೆಕ್ಟ್ರಾನಿಕ್ ಕಂಟ್ರೋಲ್ ಮಡ್ಯೂಲ್) ದೋಷದಿಂದಾಗಿ ಬೆಂಕಿ ಹತ್ತಿದ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಆದರೆ ಬೆಂಕಿಗೆ ನಿಖರ ಕಾರಣವನ್ನು ಪರಿಶೀಲನೆ ನಂತರವೇ ಖಚಿತಪಡಿಸುವುದಾಗಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಕೋಳಿವಾಡ್ ಹೇಳಿದ್ದಾರೆ.

