ಚಿಕ್ಕಮಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರ ಶಾಸಕ ಸಿ.ಟಿ. ರವಿಗೆ ಅನಾರೋಗ್ಯ ಉಂಟಾಗಿದ್ದು, ಈ ಹಿನ್ನೆಲೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಶಾಸಕ ಸಿ.ಟಿ.ರವಿ ಗೈರಿನಲ್ಲಿ ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ವೀರಶೈವ ಸಮಾವೇಶದಲ್ಲಿ ಅವರ ಪತ್ನಿ ಭಾಗಿಯಾಗಿದ್ದಾರೆ. ಈ ವೇಳೆ ಅವರು ಭಾವುಕರಾಗಿದ್ದಾರೆ.
ರವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಕೂಡಲೇ ಬಿಜೆಪಿ ಕಚೇರಿಯಿಂದ ಆಶ್ರಯ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ. ಈ ಸಂದರ್ಭದಲ್ಲಿ ಕಿಡ್ನಿಯಲ್ಲಿ 12 ಎಂ.ಎಂ. ಕಲ್ಲು ಇರುವುದಾಗಿ ವೈದ್ಯರ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವೈದ್ಯರು ಮಾತನಾಡಿ, ಸ್ಟಂಟ್ ಮೂಲಕ ಕಲ್ಲುಗಳ ರವಾನೆ ಮಾಡಲಾಗುವುದು. ಇಂದು ಒಂದು ದಿನ ವಿಶ್ರಾಂತಿಯಲ್ಲಿರಲು ಸಿ.ಟಿ ರವಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ಸಿನ ಮಾಜಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಅವರ ಆಶ್ರಯ ಆಸ್ಪತ್ರೆಯಲ್ಲಿ ಸಿ.ಟಿ ರವಿ ದಾಖಲಾಗಿದ್ದಾರೆ.
ಈ ಕಾರಣಕ್ಕಾಗಿ ಶಾಸಕ ಸಿ.ಟಿ.ರವಿ ಗೈರಿನಲ್ಲಿ ವೀರಶೈವ ಸಮಾವೇಶಕ್ಕೆ ಬಂದಿರುವ ಅವರ ಪತ್ನಿ ಪಲ್ಲವಿ ರವಿ ವೇದಿಕೆ ಮೇಲೆ ಭಾವುಕರಾಗಿದ್ದಾರೆ. ವೀರಶೈವ ಸಮಾವೇಶದ ವೇದಿಕೆ ಮೇಲೆ ಸಿ.ಟಿ.ರವಿ ಗೈರಿನಲ್ಲಿ ಅವರ ಸ್ಥಾನ ತುಂಬಿದ ಪಲ್ಲವಿ ಸಿ.ಟಿ. ರವಿ ಅವರು ಐದು ನಿಮಿಷ ಅವರನ್ನು ಕಳಿಸಿ ಅಂತ ವೈದ್ಯರಿಗೆ ಮನವಿ ಮಾಡಿದೆ. ಆದರೆ, ಇನ್ಫೆಕ್ಷನ್ ಆಗುತ್ತೆ ಬೇಡವೇ ಬೇಡ ಅಂತ ವೈದ್ಯರು ಹೇಳಿದ್ರು.
ವೀರಶೈವ ಲಿಂಗಾಯತ ಸಮಾಜ ಒಂದು ಸಮಾಜ ಅಲ್ಲ, ಅದು ಶಕ್ತಿ. ದೇಶದ ಉದ್ಧಗಲಕ್ಕೂ ತನ್ನದೇ ಆದ ಛಾಪು ಮೂಡಿಸಿರೋ ಸಹೃದಯಿ ಸಮುದಾಯ. ಸಿ.ಟಿ. ರವಿ ಅವರು ಬರಲು ಆಗಿಲ್ಲ, ಅದಕ್ಕೆ ಕ್ಷಮೆ ಕೇಳ್ತೀನಿ. ನಿಮ್ಮ ಪ್ರೀತಿ ಮಗನಿಗೆ ಮತ ಹಾಕಿ ಉನ್ನತ ಸ್ಥಾನಕ್ಕೇರಿಸಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಪಲ್ಲವಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರ ದಿನಚರಿ ಬೆಳಗ್ಗೆ 4.30ಕ್ಕೆ ಆರಂಭವಾಗುತ್ತದೆ. ಇನ್ನು, ರಾತ್ರಿ 12ಕ್ಕೆ ಅವರು ಮಲಗುತ್ತಾರೆ. ನಾನು ಅವರನ್ನ ನೋಡೋದೇ ತಿಂಗಳಿಗೆ 2 – 3 ಬಾರಿ ಅಷ್ಟೇ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರ ಪತ್ನಿ ಪಲ್ಲವಿ ರವಿ ಹೇಳಿಕೊಂಡಿದ್ದಾರೆ.