ಡಿಕೆಶಿ ರವರ ಹೇಳಿರುವ ಲಿಂಗಾಯತರ ಡ್ಯಾಂ ಒಡೆದಿದೆ ಎಂದರೆ, ನಿಮ್ಮ ಒಗ್ಗಟ್ಟನ್ನು ಒಡೆದಿದ್ದೇವೆ ಎಂದರ್ಥ ; ಸಿ.ಟಿ. ರವಿ

0 43

ಚಿಕ್ಕಮಗಳೂರು: ಲಿಂಗಾಯತರ ಡ್ಯಾಂ ಒಡೆದಿದೆ ಎಂದು ಡಿ. ಕೆ. ಶಿವಕುಮಾರ್ ಹೇಳಿರುವ ಮಾತಿನ ಅರ್ಥ ಲಿಂಗಾಯತರನ್ನು ಪ್ರಸಂಶೆ ಮಾಡಿದ್ದಲ್ಲ. ನಿಮ್ಮ ಒಗ್ಗಟ್ಟನ್ನು ಒಡೆದಿದ್ದೇವೆ ಎಂದರ್ಥ. ಇಡೀ ಲಿಂಗಾಯತರನ್ನು ಮಹಾ ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದರು ಇದೆಲ್ಲವನ್ನೂ ಪಕ್ಷದ ವೀರಶೈವ-ಲಿಂಗಾಯತ ಸಮಾಜಕ್ಕೆ ಮನವರಿಕೆ ಮಾಡಬೇಕು ಎಂದು ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಕರೆ ನೀಡಿದರು.


ಪಕ್ಷದ ಜಿಲ್ಲಾ ಕಚೇರಿಯಲ್ಲಿ ವೀರಶೈವ- ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‌ವೀರಶೈವ, ಲಿಂಗಾಯತ ಎಂದು ಒಡೆದಾಳುವ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಇದೆಲ್ಲವೂ ಮುನ್ನೆಲೆಗೆ ಬರಬೇಕು. ಇದರ ಜೊತೆಗೆ ಕ್ಷೇತ್ರದಲ್ಲಿ ನಾವು ಮಾಡಿದ ಅಭಿವೃದ್ಧಿ ವಿಚಾರಗಳನ್ನೂ ಜನರ ಮುಂದಿಡಬೇಕು ಎಂದು ತಿಳಿಸಿದರು.


ಯಡಿಯೂರಪ್ಪ ವಿಜಯ ಸಂಕಲ್ಪ ಯಾತ್ರೆಗೆ ಬರುವುದೇ ಇಲ್ಲ ಎಂದು ಕಾಂಗ್ರೆಸ್‍ನವರು ಪ್ರಚಾರ ಮಾಡಿದರು. ಆದರೆ ಅವರು ಬಂದರು. ಐದಕ್ಕೆ ಐದೂ ಕ್ಷೇತ್ರವನ್ನು ಗೆಲ್ಲಿಸ ಬೇಕು ಎಂದು ಯಡಿಯೂರಪ್ಪ ಕರೆ ನೀಡಿದರೆ, ಇದೇ ಕಾಂಗ್ರೆಸಿಗರು ಯಾರ ಹೆಸರನ್ನೂ ಅವರು ಹೇಳಲೇ ಇಲ್ಲ ಎಂದು ಕೊಂಕು ಮಾತನಾಡಿದರು. ಆದರೆ ಅಂದು ಯಾರು ಅಭ್ಯರ್ಥಿ ಎನ್ನುವುದು ಇನ್ನು ತೀರ್ಮಾನವೇ ಆಗಿರಲಿಲ್ಲ. ಯಡಿಯೂರಪ್ಪ ಅವರು ಪಾರ್ಲಿಮೆಂಟರಿ ಬೋರ್ಡ್ ಸದಸ್ಯರು ಅವರು ನನ್ನ ಹೆಸರೊಂದನ್ನೇ ಹೇಳಲು ಸಾಧ್ಯವಿಲ್ಲ. ಹಾಗೆ ಹೇಳಿದ್ದರೆ ಅದನ್ನೂ ವಿವಾದ ಮಾಡುತ್ತಿದ್ದರು ಎಂದರು.


ವಿಜಯೇಂದ್ರ ಅವರು ಬಂದು ಬಿಜೆಪಿಯನ್ನು ಗೆಲ್ಲಿಸಿ ಎಂದು ಹೇಳಿದರು. ಅವರು‌ ನಮ್ಮ ಮಾರ್ಗದರ್ಶಕರು ಎಂದು ಹೇಳಿದರು. ನಮ್ಮ ಅವರ ನಡುವೆ ಉತ್ತಮ ಸಂಬಂಧಗಳಿವೆ. ಆದರೂ ಕಾಂಗ್ರೆಸ್‍ನವರು ಸುಳ್ಳು ಪ್ರಚಾರ ಮಾಡುವ ಪ್ರಯತ್ನ ನಡೆಸಿದ್ದಾರೆ. ಇಂತಹ ಪ್ರಯತ್ನಗಳಿಂದ ಬಿಜೆಪಿ ಮತಗಳಿಗೆ ತೊಂದರೆ ಕೊಡಲು ಸಾಧ್ಯವಿಲ್ಲ ಎಂದರು.


ಬಿಜೆಪಿ ವೀರಶೈವ-ಲಿಂಗಾಯತ ಮುಖಂಡ ಬೀಕನಹಳ್ಳಿ ಸೋಮಶೇಖರ್ ಮಾತನಾಡಿ, ಚುನಾವಣೆ ಘೋಷಣೆ ಆರಂಭದಲ್ಲಿ ಇದ್ದ ಸಣ್ಣ ಗೊಂದಲ ಈಗ ತಿಳಿಯಾಗಿದೆ. ಮುಂದಿನ ಹತ್ತು ದಿನಗಳ ಕಾಲ ನಮ್ಮ ಜವಾಬ್ದಾರಿ ದೊಡ್ಡದಿದೆ. ಕೆಳ ಹಂತದಿಂದ ಕೆಲಸ ಮಾಡ ಬೇಕು ಎಂದು ಕರೆ ನೀಡಿದರು.

Leave A Reply

Your email address will not be published.

error: Content is protected !!