ಆ ಸಂದರ್ಭದಲ್ಲಿ ಚಿಕ್ಕಮಗಳೂರು ಹೆಸರು ಕೇಳಿದ್ದೆ ; ರಾಹುಲ್ ಗಾಂಧಿ

0 55

ಚಿಕ್ಕಮಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಂಗಳವಾರ ಸುಡು ಬಿಸಿಲಿನಲ್ಲಿ ರೋಡ್‌ ಶೋ ನಡೆಸಿದರು. ಪುಷ್ಪಾಲಂಕೃತ ತೆರೆದ ವಾಹನದಲ್ಲಿ ಅಭ್ಯರ್ಥಿಗಳ ಜತೆ ನಿಂತು ಜನರತ್ತ ಕೈಬೀಸಿ ಸಂತಸಪಟ್ಟರು.

ಹನುಮಂತಪ್ಪ ವೃತ್ತದಿಂದ ಎಂ.ಜಿ.ರಸ್ತೆ ಮಾರ್ಗವಾಗಿ ಆಜಾದ್‌ ಪಾರ್ಕ್ ವೃತ್ತದವರೆಗೆ ಸಾಗಿ ಸಂಪನ್ನಗೊಂಡಿತು. ಬೆಂಬಲಿಗರು ಪಕ್ಷದ ಧ್ವಜಗಳು ಹಿಡಿದು ಜಯ ಘೋಷ ಹಾಕಿದರು. ಅಭಿಮಾನಿಗಳು, ಕಾರ್ಯಕರ್ತರು ಮಾರ್ಗದ ಇಕ್ಕೆಲಗಳ ಕಟ್ಟಡಗಳಲ್ಲಿ ನಿಂತು ಗುಲಾಬಿ, ಸೇವಂತಿ ಪುಷ್ಷಗಳನ್ನು ಎರಚಿ ಸಂಭ್ರಮಿಸಿದರು.

ಆಜಾದ್‌ ಪಾರ್ಕ್ ವೃತ್ತದಲ್ಲಿ ರಾಹುಲ್‌ ಮಾತನಾಡಿ, ಅಜ್ಜಿ ಇಂದಿರಾಗಾಂಧಿ ಈ 1978ರಲ್ಲಿ ಈ ಜಿಲ್ಲೆಯಲ್ಲಿ ಸ್ಪರ್ಧಿಸಿದ್ದರು, ಆಗ ನಾನಿನ್ನೂ ಬಹಳ ಚಿಕ್ಕವನು. ಆ ಸಂದರ್ಭದಲ್ಲಿ ಚಿಕ್ಕಮಗಳೂರಿನ ಹೆಸರು ಕೇಳಿದ್ದೆ’ ಎಂದು ನೆನಪಿಸಿಕೊಂಡರು.

‘ಕರ್ನಾಟಕದಲ್ಲಿ ಈಗ ಚುನಾವಣೆ ಇದೆ. ಪ್ರಚಾರಕ್ಕಾಗಿ ಇಲ್ಲಿಗೆ ಭೇಟಿ ನೀಡುವ ಪ್ರಧಾನಿ ಮೋದಿ ಅವರು ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ಕರ್ನಾಟಕದ ರೈತರು, ಯುವಜನರು, ಮಹಿಳೆಯರಿಗಾಗಿ ಏನು ಮಾಡಿದ್ದೇವೆ ಎಂದು ಹೇಳಲ್ಲ’ ಎಂದು ಕುಟುಕಿದರು.

‘ಪ್ರಧಾನಿ ಮೋದಿ ಅವರಿಗೆ ಭಾಷಣದಲ್ಲಿ ತಮ್ಮ ಬಗ್ಗೆಯೇ ಹೇಳಿಕೊಳ್ಳಲು ಬಹಳ ಖುಷಿ. ಕಾಂಗ್ರೆಸ್‌ ನಾಯಕರು ತಮ್ಮನ್ನು ಬೈಯುತ್ತಾರೆ ಎಂದು ಅವರು ಭಾಷಣದಲ್ಲಿ ಶೇ. 70 ಭಾಗ ಹೇಳಿದರೂ ನಮ್ಮ ತಕರಾರಿಲ್ಲ. ಆದರೆ, ಶೇ. 30 ಭಾಗವಾದರೂ ಕರ್ನಾಟಕದ ಬಗ್ಗೆ ಮಾತನಾಡಬೇಕು’ ಎಂದು ಒತ್ತಾಯಿಸಿದರು.

ಚಿಕ್ಕಮಗಳೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ, ತರೀಕೆರೆ ಕ್ಷೇತ್ರ ಜಿ.ಎಚ್.ಶ್ರೀನಿವಾಸ್, ಶೃಂಗೇರಿ ಕ್ಷೇತ್ರ ಟಿ.ಡಿ.ರಾಜೇಗೌಡ, ಮೂಡಿಗೆರೆ ಕ್ಷೇತ್ರದ ನಯನಾ ಮೋಟಮ್ಮ, ಕಡೂರು ಕ್ಷೇತ್ರದ ಕೆ.ಎಸ್.ಆನಂದ್, ಮುಖಂಡರಾದ ಬಿ.ಎಲ್.ಶಂಕರ್, ಮಾಜಿ ಸಚಿವೆ ಮೋಟಮ್ಮ, ಮಾಜಿ ಎಮ್ಮೆಲ್ಸಿ ಗಾಯತ್ರಿಶಾಂತೇಗೌಡ, ಡಾ.ಕೆ.ಪಿ.ಅಂಶುಮಂತ್, ಗಾಯತ್ರಿ ಶಾಂತೇಗೌಡ ಮತ್ತಿತರರು ರೋಡ್ ಶೋ ವೇಳೆ ರಾಹುಲ್‍ಗಾಂಧಿಗೆ ಸಾಥ್ ನೀಡಿದ್ದರು.

‘ಚಿಕ್ಕಮಗಳೂರು ಬಹಳ ಸುಂದರವಾದ ಜಿಲ್ಲೆ ಎಂದು ಅಜ್ಜಿ ಹೇಳಿದ್ದರು. ನನ್ನ ಅನುಭವದಲ್ಲಿ ಜಿಲ್ಲೆಗಿಂತ ಇಲ್ಲಿನ ಜನರು ಬಹಳ ಸುಂದರರು, ಒಳ್ಳೆಯವರು.’
– ರಾಹುಲ್ ಗಾಂಧಿ

Leave A Reply

Your email address will not be published.

error: Content is protected !!