ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗುವವರೆಗೂ ಆಯುಧಗಳ ಠೇವಣಿಗೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ

0 34


ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023 ರ ನೀತಿ ಸಂಹಿತೆ ಅನುಗುಣವಾಗಿ ಮತ್ತು ಭಾರತ ಶಸ್ತ್ರಾಸ್ತ್ರ ಕಾಯ್ದೆ – 1959ರ ಅಧಿಕಾರದ ಮೇರೆಗೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಾದ 123-ಶೃಂಗೇರಿ, 124-ಮೂಡಿಗೆರೆ, 125-ಚಿಕ್ಕಮಗಳೂರು, 126-ತರೀಕೆರೆ, 127-ಕಡೂರು, ವಿಧಾನಸಭಾ ವ್ಯಾಪ್ತಿಯಲ್ಲಿನ ಲೈಸೆನ್ಸ್‌ದಾರರು ಹೊಂದಿರುವ ಆಯುಧಗಳನ್ನು ಜೊತೆಗಿಟ್ಟುಕೊಂಡು ತಿರುಗಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಕೆ.ಎನ್. ರಮೇಶ್ ಅವರು ಆದೇಶಿಸಿದ್ದಾರೆ.


ಶಾಂತಿ ಭಂಗ ಮತ್ತು ದುರುಪಯೋಗವಾಗದಂತೆ ಮುಂಜಾಗೃತ ಕ್ರಮವಾಗಿ ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗುವವರೆಗೆ ತಮ್ಮ ತಮ್ಮ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಅಥವಾ ಆಯುಧಗಳನ್ನು ಡಿಪಾಸಿಟ್ ಮಾಡಿಕೊಳ್ಳಲು ಅಧಿಕೃತವಾಗಿ ಪರವಾನಗಿಗಳನ್ನು ಹೊಂದಿರುವ ಠೇವಣಿದಾರರಲ್ಲಿ ಠೇವಣಿ ಮಾಡಿ ಸ್ವೀಕೃತಿ ಪತ್ರ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.


ಚುನಾವಣೆ ಪ್ರಕ್ರಿಯೆಯು ಮುಗಿದು ಫಲಿತಾಂಶ ಹೊರಬಿದ್ದ ಒಂದು ವಾರದ ನಂತರ ಆಯುಧಗಳನ್ನು ಸಂಬಂಧಿಸಿದವರಿಗೆ ನೀಡಲು ಆರಕ್ಷಕ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಈ ಆದೇಶವು ಧಾರ್ಮಿಕ ಸಂಸ್ಥೆಗಳು ಬ್ಯಾಂಕುಗಳು, ಸರ್ಕಾರಿ, ಅರೇ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಭದ್ರತೆಗಾಗಿ ಆಯುಧಗಳನ್ನು ಹೊಂದಿರುವವರು ಆಯುಧಗಳನ್ನು ತಮ್ಮಲ್ಲಿಯೇ ಇಟ್ಟು ಕೊಳ್ಳುವ ಅನಿವಾರ್ಯತೆಗಳು ಇದ್ದಲ್ಲಿ ಅಂತಹ ಶಸ್ತ್ರ ಪರವಾನಗಿದಾರರು ತಮ್ಮ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿ ಸಕಾರಣದೊಂದಿಗೆ ವೈಯಕ್ತಿಕವಾಗಿ ವಿನಾಯತಿ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.


ಬಂದೂಕು ಪರವಾನಗಿ ನವೀಕರಣಕ್ಕಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಹಲವು ಅರ್ಜಿಗಳು ಸ್ವೀಕೃತಿಯಾಗಿದ್ದು, ಈ ಪೈಕಿ ಕೆಲವು ಬಂದೂಕು ಪರವಾನಗಿಗಳು ನವೀಕರಣಕ್ಕಾಗಿ ಬಾಕಿ ಉಳಿದಿದ್ದು, ಅಂತಹ ಪ್ರಕರಣಗಳಲ್ಲಿ ಬಂದೂಕು ಪರವಾನಗಿದಾರರಿಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ನೀಡಲಾಗುವ ಸ್ವೀಕೃತಿ ಪ್ರತಿಯ ಆಧಾರದ ಮೇಲೆ ಬಂದೂಕುಗಳನ್ನು ಡಿಪಾಸಿಟ್ ಮಾಡಿಕೊಳ್ಳುವಂತೆ ಹಾಗೂ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾ ಸ್ಕ್ರೀನಿಂಗ್ ಕಮಿಟಿಯ ಸದಸ್ಯ ಕಾರ್ಯದರ್ಶಿಗಳಾದ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೂಕ್ತ ದಿನಾಂಕವನ್ನು ನಿಗಧಿ ಪಡಿಸಿಕೊಂಡು ಸದರಿ ಅರ್ಜಿಗಳನ್ನು ಕಮಿಟಿ ಮುಂದೆ ಮಂಡಿಸಿ ಅರ್ಜಿಗಳ ಅರ್ಹತೆಯ ಮೇರೆಗೆ ಪರಿಶೀಲಿಸಿ ಸಮಿತಿ ನಿರ್ಣಯದಂತೆ ವಿನಾಯಿತಿ ನೀಡಲು ಕ್ರಮ ವಹಿಸತಕ್ಕದೆಂದು ಆದೇಶದಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!