ಶೆಟ್ಟರ್ ಅಥವಾ ಸವದಿ ಮುಂದಿನ ಸಿಎಂ ಎಂದು ಘೋಷಿಸುವ ತಾಕತ್ತು ಕಾಂಗ್ರೆಸ್ಗೆ ಇದ್ಯಾ ? ಸಿ.ಟಿ.ರವಿ ಪ್ರಶ್ನೆ
ಚಿಕ್ಕಮಗಳೂರು: ‘ಕಾಂಗ್ರೆಸ್ ಪಕ್ಷವು ವಿರೇಂದ್ರ ಪಾಟೀಲ್ ನಂತರ ವೀರಶೈವ ಮುಖಂಡರಿಗೆ ಅಧಿಕಾರ ಕೊಟ್ಟಿದೆಯೇ? ಜಗದೀಶ ಶೆಟ್ಟರ್ ಅಥವಾ ಲಕ್ಷ್ಮಣ ಸವದಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಘೋಷಿಸುವ ತಾಕತ್ತು ಇದ್ಯಾ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಗದೀಶ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ದುರದೃಷ್ಟಕರ. ಕಾಂಗ್ರೆಸ್ ಪಕ್ಷವು ಕೋಮಾ ಸ್ಥಿತಿಯಲ್ಲಿದೆ, ಐಸಿಯುನಲ್ಲಿದೆ ಎಂದು ಅವರೇ ಹೇಳಿದ್ದರು. ಆ ಪಕ್ಷವನ್ನೇ ಸೇರಿದ್ದಾರೆ. ಜನಸಂಘ, ಬಿಜೆಪಿ ಮನೆತನದವರೆಂಬ ಹೆಗ್ಗಳಿಕೆ ಕಳೆದುಕೊಂಡಿದ್ದಾರೆ’ ಎಂದು ಕುಹಕವಾಡಿದರು.
‘ಬಿಜೆಪಿ ತೊರೆದವರಿಗೆ ನಷ್ಟ. ಪಕ್ಷ ಸವಾಲುಗಳನ್ನು ಎದುರಿಸಿದೆ. ಹಿಂದುತ್ವ ಮತ್ತು ದೇಶದ ಹಿತದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿದೆ. ಪಕ್ಷದ ಬೆಳವಣಿಗೆ ಯಾರೂ ತಡೆಯಲು ಆಗಲ್ಲ’ ಎಂದು ಪ್ರತಿಕ್ರಿಯಿಸಿದರು.