ಎನ್.ಆರ್ ಪುರ: ಮಾಗುಂಡಿ ಸಮೀಪ ಭದ್ರಾ ನದಿಯಲ್ಲಿ ಮುಳುಗಿ ತಂದೆ-ಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದ ಲೋಕೇಶ್ (40) ಮತ್ತು ಅವರ ಮಗ ಸಾತ್ವಿಕ್(13) ಎಂದು ಗುರುತಿಸಲಾಗಿದೆ.
ಮಾಗುಂಡಿ ಸಮೀಪದ ಹುಯಿಗೆರೆ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮನೆಗೆ ಸುಗ್ಗಿ ಹಬ್ಬಕ್ಕೆಂದು ಲೋಕೇಶ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ತೆರಳಿದ್ದರು. ಶನಿವಾರ ಸಂಜೆ ಇವರು ಸಂಬಂಧಿಕರ ಜೊತೆ ಮನೆಯ ಸಮೀಪದಲ್ಲೇ ಹರಿಯುತ್ತಿರುವ ಭದ್ರಾ ನದಿ ತೀರಕ್ಕೆ ತೆರಳಿದ್ದಾರೆ. ನದಿಯಲ್ಲಿ ಬಂಡೆಯೊಂದರ ಮೇಲೆ ನಿಂತಿದ್ದ ಸಾತ್ವಿಕ್ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ಈ ವೇಳೆ ಮಗನನ್ನು ರಕ್ಷಿಸಲು ತಂದೆ ಲೋಕೇಶ್ ಸಹ ನದಿಗೆ ಹಾರಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಕುಟುಂಬದವರ ಕಣ್ಣೆದುರೆ ಇಬ್ಬರು ನೀರಿನಲ್ಲಿ ಮುಳುಗಿದ್ದು, ಅವರನ್ನು ರಕ್ಷಿಸಲು ಸಂಬಂಧಿಕರು ನಡೆಸಿದ ಪ್ರಯತ್ನ ವಿಫಲವಾಗಿದೆ.
ಮೃತದೇಹಗಳನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿ ಹಂಡುಗುಳಿ ಗ್ರಾಮಕ್ಕೆ ತರಲಾಗಿದೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.