ಉತ್ತರದಲ್ಲಿ ಕಾಶಿ ಇದ್ದರೆ ದಕ್ಷಿಣದಲ್ಲಿ ರಂಭಾಪುರಿ ಸುಕ್ಷೇತ್ರವಾಗಿ ಬೆಳಗುತ್ತಿದೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0 64

ಎನ್.ಆರ್ ಪುರ: ಉತ್ತರದಲ್ಲಿ ಕಾಶಿ ಇದ್ದರೆ ದಕ್ಷಿಣದಲ್ಲಿ ರಂಭಾಪುರಿ ಸುಕ್ಷೇತ್ರವಾಗಿ ಬೆಳಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನದ ಅಂಗವಾಗಿ ಜರುಗಿದ ಶಿವಾದ್ವೈತ ಧರ್ಮ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಗತ್ ಕಲ್ಯಾಣಕ್ಕಾಗಿ ಶಾಂತಿ ಸಾಮರಸ್ಯ ನಿರ್ಮಾಣಕ್ಕಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಲನುಪಾಕ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಆವಿರ್ಭವಿಸಿದ ಪುಣ್ಯ ದಿನ. ಪರಶಿವನ ಸದ್ಯೋಜಾತ ಮುಖದಿಂದ ಅವತರಿಸಿದ ಪರಮಾಚಾರ್ಯರು. ಮಹಾಮುನಿ ಅಗಸ್ತ್ಯರಿಗೆ ಶಿವಜ್ಞಾನವನ್ನು ಬೋಧಿಸಿ ಉದ್ಧರಿಸಿದವರು. ಜಾತಿ ಮತ ಪಂಥಗಳ ಗಡಿ ಮೀರಿ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ಶ್ರೀ ವೀರಭದ್ರಸ್ವಾಮಿಯು ದುಷ್ಟರ ನಿಗ್ರಹ ಶಿಷ್ಟರ ಪರಿಪಾಲನೆ ಮಾಡಿಕೊಂಡು ಬಂದಿದ್ದಾನೆ. ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಗೋತ್ರಪುರುಷನಾಗಿ ನೆಲೆಸಿದ್ದಾನೆ. ಇಂದು ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ. ತನ್ನಿಮಿತ್ಯ ಹಮ್ಮಿಕೊಂಡಿರುವ ಈ ಧರ್ಮ ಸಮಾರಂಭವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ರಂಭಾಪುರಿ ಪೀಠದ ಘೋಷ ವಾಕ್ಯ. ಮನುಷ್ಯ ಮತ್ತು ಮಾನವ ಇವೆರಡರಲ್ಲಿ ವ್ಯತ್ಯಾಸವಿದೆ. ಕಾಮ ಕ್ರೋಧಗಳಿಂದ ಒಡಗೂಡಿರುವುವವನು ಮನುಷ್ಯ. ಇವೆಲ್ಲವನ್ನು ಮೀರಿ ಧರ್ಮ ಮಾರ್ಗದಲ್ಲಿ ನಡೆಯುವವನು ಮಾನವ. ಆತ್ಮಸಾಕ್ಷಿಯಿಂದ ಸತ್ಯ ದಾರಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎನ್ನುವುದು ಶ್ರೀ ಜಗದ್ಗುರು ರೇಣುಕರು ಬೋಧಿಸಿದ ಸಿದ್ದಾಂತ ಶಿಖಾಮಣಿಯ ಸಾರ. ಸಿದ್ದಾಂತ ಶಿಖಾಮಣಿಯನ್ನು ಅಕ್ಷರಶಃ ಅರಿವಿನಿಂದ ಪಾಲಿಸಿದರೆ ಮನಸ್ಸುಗಳು ಹದವಾಗಿ ಬಾಳು ನಂದನವಾಗುತ್ತದೆ.

ಶ್ರೀ ರಂಭಾಪುರಿ ಜಗದ್ಗುರುಗಳು ಹಳ್ಳಿ ಪಟ್ಟಣ ಎನ್ನದೇ ನಿರಂತರ ಪ್ರವಾಸ ಮಾಡಿ ಶ್ರೀ ಪೀಠದಲ್ಲಿ ನಡೆದಿರುವ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕಂಡು ಸಂತಸವಾಗಿದೆ. ಹಿರಿಯರಾದ ಬಿ.ಎಸ್.ಯಡಿಯೂರಪ್ಪನವರಿಗೆ ಈ ವರ್ಷದ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಂತೋಷ ಮೂಡಿಸಿದೆ. ಭಕ್ತರ ಅಭ್ಯುದಯಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ರಾಜ್ಯ ಹೊರ ರಾಜ್ಯಗಳಲ್ಲಿ ಹಗಲಿರುಳೆನ್ನದೇ ನಿರಂತರ ಸಂಚರಿಸಿ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯ ಕೃಪೆಯಿಂದ ಶ್ರೀ ಜಗದ್ಗುರುಗಳವರ ಆಶೀರ್ವಾದದಿಂದ ಅವರ ಪೂಜೆಯ ಫಲದಿಂದ ನಾಡಿನ ಜನತೆಯ ಎಲ್ಲ ಸಂಕಷ್ಟಗಳು ದೂರವಾಗಲಿ ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನೆಗಳು ಜೀವನ ಶ್ರೇಯಸ್ಸಿಗೆ ಸೋಪಾನ :

ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಕಲರಿಗೂ ಒಳಿತನ್ನೇ ಬಯಸಿದ ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದುದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನೆಗಳು ಜೀವನ ಶ್ರೇಯಸ್ಸಿಗೆ ಸೋಪಾನವಾಗಿವೆ. ಜಾತಿ ಜಂಜಡಗಳನ್ನು ದೂರ ಮಾಡಿ ಶಿವಜ್ಞಾನದ ಮೂಲಕ ಜೀವ ಶಿವನಾಗುವ ಅಂಗ ಲಿಂಗವಾಗುವ ಪರಮ ರಹಸ್ಯವನ್ನು ಬೋಧಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಗಂಡು ಹೆಣ್ಣು ಬಡವ ಶ್ರೀಮಂತ ಮತ್ತು ಉಚ್ಛ ನೀಚ ತಾರತಮ್ಯ ನಿವಾರಿಸಿ ಷಟ್ಫಲ ಸಾಧನೆಯ ಮೂಲಕ ಉದಾತ್ತ ಭಾವನೆಗಳನ್ನು ಜಾಗೃತಗೊಳಿಸಿದ್ದನ್ನು ಮರೆಯಲಾಗದು. ಜಾತಿಗಿಂತ ನೀತಿ ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ ಬೋಧನೆಗಿಂತ ಸಾಧನೆ ದಾನಕ್ಕಿಂತ ದಾಸೋಹ ಚರಿತ್ರೆಗಿಂತ ಚಾರಿತ್ರ್ಯ ಬಹು ದೊಡ್ಡದೆಂದು ಸಾರಿದ ಅವರ ದೂರದೃಷ್ಟಿ ಮತ್ತು ವಿಶ್ವ ಬಂಧುತ್ವದ ವಿಚಾರ ಧಾರೆಗಳು ಅಂದಿಗಷ್ಟೇ ಅಲ್ಲ ಸರ್ವ ಕಾಲಕ್ಕೂ ಸಕಲ ಸಮುದಾಯಕ್ಕೂ ಅನ್ವಯಗೊಳ್ಳುತ್ತವೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳ ಪರಿಪಾಲನೆಯಿಂದ ಜೀವನದಲ್ಲಿ ಸರ್ವೋನ್ನತಿ ಪಡೆಯಲು ಸಾಧ್ಯವೆಂದು ಬೋಧಿಸಿದ್ದನ್ನು ಎಂದಿಗೂ ಮರೆಯಲಾಗದೆಂದರು. ಇಂದು ನಾಡಿನೆಲ್ಲೆಡೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸರ್ಕಾರದಿಂದ ಆಚರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇಂದಿನ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿದ್ದು ಹಾಗೂ ಬಿ.ಎಸ್.ಯಡಿಯೂರಪ್ಪನವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿರುವುದು ತಮಗೆ ಸಂತೋಷ ತಂದಿದೆ. ಇಂದು ನಾಡಿನೆಲ್ಲೆಡೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.


ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ:

2023ರ ಶ್ರೀ ಪೀಠದ ಅತ್ಯುನ್ನತ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ, ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ತಮಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿದ್ದರೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯ ಮಹಾರಥೋತ್ಸವದ ಪವಿತ್ರ ದಿನದಂದು ಸ್ವೀಕರಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಸಂತೋಷ ಮತ್ತು ಸಮಾಧಾನ ತಂದಿದೆ. ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ವಿವಿಧ ಅನುದಾನದ ಸದ್ಬಳಕೆ ಶ್ರೀ ಪೀಠದಲ್ಲಿ ಆಗಿದ್ದು ಸಮಾಧಾನ ಮೂಡಿಸಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಜಾತಿ ಮತ ಪಂಥವೆನ್ನದೇ ಅನುದಾನ ನೀಡಿದ್ದೇನೆ. ನಾನು ಚುನಾವಣಾ ರಾಜಕೀಯದಿಂದ ದೂರವಾಗಿದ್ದರೂ ನನ್ನ ಸಾಮಾಜಿಕ ಸೇವೆ ನಿರಂತರವಾಗಿರುತ್ತದೆ ಎಂದರು.

ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.


ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಇಲಾಖೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಮಾತನಾಡಿ, ನಮ್ಮ ದೇಶ ಆರ್ಥಿಕವಾಗಿಯೂ ಮೇಲ್ಮಟ್ಟಕ್ಕೆ ಸಾಗುತ್ತಿದ್ದರೆ ಆಧ್ಯಾತ್ಮಿಕತೆಯಿಂದ ಉನ್ನತ ಸ್ಥಾನದಲ್ಲಿದೆ. ಇಲ್ಲಿಯ ಜನ ಶಾಂತಿ ನೆಮ್ಮದಿಯಿಂದ ಪರಸ್ಪರ ವಿಶ್ವಾಸದಿಂದ ಇದ್ದಾರೆ. ರಾಜ್ಯವಾಗಲಿ ಕೇಂದ್ರವಾಗಲಿ ಮಠ ಮಾನ್ಯಗಳ ಅಭಿವೃದ್ಧಿಗಾಗಿ ಐತಿಹಾಸಿಕ ಧಾರ್ಮಿಕ ಸ್ಥಳಗಳ ಅಭಿವೃದ್ಧಿಯ ಬದ್ಧತೆ ಹೊಂದಿ ಕೆಲಸ ಮಾಡುತ್ತಿವೆ ಎಂದರು.

ಶಾಸಕ ಸಿ.ಟಿ.ರವಿ ರಂಭಾಪುರಿ ಬೆಳಗು ಬಿಡುಗಡೆ ಮಾಡಿ ಮಾತನಾಡಿದರು.
ಸಚಿವರಾದ ಸಿ.ಸಿ.ಪಾಟೀಲ ಮಾತನಾಡಿ, ಧರ್ಮ ಗುರುಗಳಲ್ಲಿ ನಂಬಿಗೆ ಇಟ್ಟು ತಾವು ನಡೆದಿದ್ದು ತಾವು ಬದುಕಿ ಉಳಿಯುವುದಿಲ್ಲ ಎನ್ನುವ ಸ್ಥಿತಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದದಿಂದ ಇಂದು ಇಲ್ಲಿ ನಿಂತಿದ್ದೇನೆ ಎಂದ ಅವರು ಶ್ರೀ ಪೀಠದ ಅಭಿವೃದ್ಧಿಗಾಗಿ ತಮ್ಮ ಕೈಲಾದ ಕೆಲಸವನ್ನು ತಾವು ಮಾಡುವುದಾಗಿ ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಶಾಸಕರಾದ ಡಿ.ಎಸ್.ಸುರೇಶ್, ಎಂ.ಪಿ.ಕುಮಾರಸ್ವಾಮಿ, ಡಾ.ಬೇಳೂರು ರಾಘವೇಂದ್ರ ಶೆಟ್ಟಿ, ಬಸಯ್ಯ ಕಾಡಯ್ಯ ಹಿರೇಮಠ ಭಾಗವಹಿಸಿದ್ದರು.


ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು.


ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ||ಕೃಷ್ಣಾರೆಡ್ಡಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ.ಗುಂಗೆ, ಪಿಡಬ್ಲುö್ಯಡಿ ಆಂತರಿಕ ಆರ್ಥಿಕ ಅಧಿಕಾರಿ ಸೋಮನಾಥ ಗೋರಟಾ ಇವರಿಗೆ ಗೌರವ ಗುರುರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.


ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಸಂಗಮೇಶ ಉತ್ತಂಗಿ ಇವರಿಂದ ಸಂಗೀತ, ದಿಗ್ವಿಜಯ ಚಾನೆಲ್‌ನ ಪ್ರಶಾಂತ ರಿಪ್ಪನ್‌ಪೇಟೆ ಇವರಿಂದ ಸ್ವಾಗತ, ಶಿವಮೊಗ್ಗದ ಕುಮಾರಿ ಕೆ.ಆರ್.ಭೂಮಿಕಾ ಇವರಿಂದ ಭರತ ನಾಟ್ಯ ಹಾಗೂ ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು.


ಇದಕ್ಕೂ ಮುನ್ನ ಶ್ರೀ ಪೀಠದಲ್ಲಿ ನಿರ್ಮಾಣಗೊಳ್ಳಲಿರುವ 51ಅಡಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿ ಕಾರ್ಯಾರಂಭದ ಶಿಲಾನ್ಯಾಸವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು, ಮೂಲ ಪೀಠದ ನವೀಕರಣದ ಶಿಲಾನ್ಯಾಸವನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೆರವೇರಿಸಿದರು. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಶ್ರೀ ಪೀಠದ ಮುಂಭಾಗದ ನೂತನ ರಸ್ತೆ ಉದ್ಘಾಟನೆ ಮಾಡಿದರು.


ರಾತ್ರಿ ಗಾನಗಂಧರ್ವ ಗುರುಸ್ವಾಮಿ ಕಲಕೇರಿ ಗದಗ ಸಂಗಡಿಗರಿಂದ ಭಕ್ತಿ ಗೀತೆಗಳ ಗಾನ ತರಂಗ ಕಾರ್ಯಕ್ರಮ ಜರುಗಿತು

Leave A Reply

Your email address will not be published.

error: Content is protected !!