ಮಾ. 5ರಂದು ನಾಡಿನಾದ್ಯಂತ
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲು ಶ್ರೀ ರಂಭಾಪುರಿ ಜಗದ್ಗುರುಗಳ ಕರೆ

0 62

ಎನ್. ಆರ್ ಪುರ: ಬದುಕಿ ಬಾಳುವ ಮನುಷ್ಯನಿಗೆ ಧರ್ಮದ ಅರಿವು ಮತ್ತು ಆಚರಣೆ ಮುಖ್ಯ. ಮೌಲ್ಯಗಳ ಸಂರಕ್ಷಣೆ ಮತ್ತು ಪರಿಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮದ ಮೂಲ ಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ನಾಡಿನಾದ್ಯಂತ ಮಾರ್ಚ 5ರಂದು ಆಚರಿಸಬೇಕೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಕರೆ ಕೊಟ್ಟರು.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಭೇಟಿಯಾದ ಪತ್ರಕರ್ತರೊಂದಿಗೆ ಕಾರ್ಯಕ್ರಮದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು.
ಪರಶಿವನ ಸದ್ಯೋಜಾತ ಮುಖದಿಂದ ಅವತರಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಲನಪಾಕ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಆವಿರ್ಭವಿಸಿದರು. ಸಕಲ ಜಾತಿ ಜನಾಂಗದ ಜನತೆಗೆ ಆಧ್ಯಾತ್ಮದ ಅರಿವು ನೀಡಿ ಸಮಾಜದಲ್ಲಿ ಅತ್ಯುತ್ತಮ ಕಾರ್ಯ ಮಾಡಿದರು. ಇಂಥ ಮಹಾಪುರುಷರ ಜಯಂತಿಯನ್ನು ಕರ್ನಾಟಕ ಸರ್ಕಾರ ಕಳೆದ ವರ್ಷ 16ರಂದು ಆಚರಿಸಲು ನಿರ್ಧಾರ ಕೈಗೊಂಡಿತ್ತು. ಫಾಲ್ಗುಣ ಶುದ್ಧ ತ್ರಯೋದಶಿಯಂದು ಜಯಂತಿ ಇರುವುದರಿಂದ ಪ್ರತಿ ವರುಷ ಇದೇ ಮಿತಿಗೆ ಆಚರಿಸಬೇಕಾಗುತ್ತದೆ. ಸರ್ಕಾರ ತಿದ್ದುಪಡಿ ಮಾಡಿ ಫಾಲ್ಗುಣ ಶುದ್ಧ ತ್ರಯೋದಶಿಯಂದು ಆಚರಿಸಲು ನಿರ್ಧಾರ ಕೈಗೊಂಡು ಮರು ಆದೇಶ ನೀಡಿದ್ದು ಸರ್ವರಿಗೂ ಸಂತೋಷ ತಂದಿದೆ.

ಈ ವರುಷ ಮಾರ್ಚ್ 5ರಂದು ಆಚರಿಸಲು ನಿಧಾರ ಪ್ರಕಟಿಸಿದ ಸರ್ಕಾರದ ಆದೇಶಾನುಸಾರ ಎಲ್ಲೆಡೆಯಲ್ಲೂ ಧರ್ಮಾಭಿಮಾನಿಗಳು ಸೇರಿ ಜಯಂತಿ ಆಚರಣೆ ಮಾಡಬೇಕೆಂದು ಭಕ್ತ ಸಮುದಾಯಕ್ಕೆ ಕರೆಯಿತ್ತರು.
ಮಹಾಪೀಠದಲ್ಲಿ ಜಯಂತಿ ಜಾತ್ರಾ ವೈಶಿಷ್ಟತೆ – ಸೃಷ್ಠಿ ಸೌಂದರ್ಯದ ಮಡಿಲಲ್ಲಿರುವ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜಯಂತಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ಆಚರಿಸಲಾಗುವುದು. ಮಾರ್ಚ 3ರಿಂದ 7ರ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಮಾರ್ಚ 4ರಂದು ಶನಿವಾರ ಶ್ರೀ ವೀರಭದ್ರಸ್ವಾಮಿ ವಿಜಯೋತ್ಸವ ಹಾಗೂ ಜಾನಪದ ಹಬ್ಬದ ಉದ್ಘಾಟನೆಯನ್ನು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದಾರೆ. ಮಾರ್ಚ 5ರಂದು ಮುಖ್ಯ ಕಾರ್ಯಕ್ರಮ. ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಸಮಾರಂಭವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ 51ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾ ಮಂಗಳ ಮೂರ್ತಿ ಕಾರ್ಯಾಚರಣೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದು ಅವರೇ ಮೂಲ ಪೀಠದ ನವೀಕರಣದ ಮಹತ್ವಪೂರ್ಣ ಕಾರ್ಯಾಚರಣೆಗೆ ಚಾಲನೆ ಕೊಡುತ್ತಿದ್ದಾರೆ.

ಮಾರ್ಚ್ 6ರಂದು ಸೋಮವಾರ ನೇಗಿಲಯೋಗಿಯ ನೆನಹು ನಾಮಾಂಕಿತ ಸಮಾರಂಭವನ್ನು ಮಾಜಿ ಉಪಮುಖ್ಯಮಂತ್ರಿ-ಶಾಸಕ ಕೆ.ಎಸ್.ಈಶ್ವರಪ್ಪ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ, ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಸಂಸದ ಬಿ.ವೈ.ರಾಘವೇಂದ್ರ, ಸಕ್ಕರೆ ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕನ್ನಡ ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ ಹಾಗೂ ಅನೇಕ ಶಾಸಕರೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಾಡಿನೆಲ್ಲೆಡೆಯಿಂದ ಸಕಲ ಸದ್ಭಕ್ತರು ಪಾಲ್ಗೊಂಡು ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.

Leave A Reply

Your email address will not be published.

error: Content is protected !!