ಶಿಕಾರಿಪುರ : ತಾಲ್ಲೂಕಿನ ಅಮಟೆಕೊಪ್ಪ ಗ್ರಾಮದ ರೈತನೋರ್ವ ಮಳೆ ಕೊರತೆಯಿಂದ ಬೆಳೆ ನಷ್ಟದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ರುದ್ರಪ್ಪ (50) ಮೃತ ರೈತ. ಕಳೆದ ಹದಿನೈದು ದಿನಗಳ ಹಿಂದೆ ಮೆಕ್ಕೆಜೋಳದ ಬಿತ್ತನೆ ನಡೆಸಿದ್ದರು. ತಮ್ಮ ಸ್ವಂತ ಒಂದು ಎಕರೆ ಮತ್ತು ಗುತ್ತಿಗೆ ಪಡೆದುಕೊಂಡ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆ ಬೆಳೆಯಲು ಪ್ರಯತ್ನ ಮಾಡಿದ್ದರೂ, ಮಳೆ ಕೊರತೆಯಿಂದ ಬೆಳೆ ಹುಟ್ಟಿರಲಿಲ್ಲ. ಇದರಿಂದಾಗಿ ಆರ್ಥಿಕವಾಗಿ ತೊಂದರೆ ಎದುರಿಸಿದ ಅವರು, ಸಹಕಾರ ಸಂಘ, ಮಹಿಳಾ ಶಕ್ತಿ ಸಂಘ ಮತ್ತು ಖಾಸಗಿ ಮೂಲಗಳಿಂದ ಸುಮಾರು 4 ಲಕ್ಷ ರೂ.ಗಳಿಗೂ ಹೆಚ್ಚು ಸಾಲ ಪಡೆದಿದ್ದರು.
ಬಿತ್ತನೆ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಮನನೊಂದು ಶುಕ್ರವಾರ ಮನೆಯಿಂದ ಹೊರಗೆ ತೆರಳಿ ಕೆರೆ ಏರಿ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆರಂಭದಲ್ಲಿ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಂಡರೂ, ಸ್ಥಿತಿ ತೀವ್ರವಾದ ಕಾರಣ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ರುದ್ರಪ್ಪ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತರಿಗೆ ಮಳೆ ಕೊರತೆ ಮತ್ತು ಸಾಲದ ಬಾಧೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

