ನಾನೇನು ಮುಖ್ಯಮಂತ್ರಿ ಆಗಿ ಮೆರೆಯಬೇಕೆಂದು ಓಟು ಕೇಳುತ್ತಿಲ್ಲ ; ಹೆಚ್‌ಡಿಕೆ

0 44

ತೀರ್ಥಹಳ್ಳಿ : ನಾಡಿನ ಜನತೆಗೆ ಹಲವಾರು ಸಮಸ್ಯೆ ಇದೆ. ಅದರ ಪರಿಹಾರಕ್ಕೆ ಈ ಪಂಚರತ್ನ ರಥ ಯಾತ್ರೆ. ಕಷ್ಟಗಳಿಂದ ಬಳಲುತ್ತಿರುವ ಬಡ ಜನರ ಸಮಸ್ಯೆ ಪರಿಹಾರಕ್ಕೆ ಪಂಚರತ್ನ ಎಂಬ 5 ಯೋಜನೆಯನ್ನು ತರುತ್ತಿದ್ದೇವೆ. ಈ ಪಂಚರತ್ನ
ರಥಯಾತ್ರೆ ನವೆಂಬರ್ 7ಕ್ಕೆ ಕುರುಡುಮಲೆ ಗಣಪತಿ ದೇವಸ್ಥಾನದಿಂದ ಹೊರಟು ಇವತ್ತು 73 ನೇ ಕ್ಷೇತ್ರ ತೀರ್ಥಹಳ್ಳಿಗೆ ಬಂದಿದ್ದೇವೆ.ಪಂಚರತ್ನ ಯೋಜನೆ ಆರ್ಥಿಕ ತಜ್ಞರು ಕೊಟ್ಟಿದ್ದಲ್ಲ. ಬಡತನದಿಂದ ಬಳಲುತ್ತಿರುವ ತಾಯಂದಿರು, ರೈತರು ನನ್ನ ಬಳಿ ಬರುತ್ತಿದ್ದರು. ಈ ಕಾರಣಕ್ಕೆ 5 ಯೋಜನೆಗೆ ಚಾಲನೆ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ರೋಡ್ ಶೋ ನಡೆಸಿ ನಂತರ ಸುವರ್ಣ ಸಹಕಾರಿ ಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಪಂಚರತ್ನದ 5 ಯೋಜನೆಗಳು ಕೂಡ ಬಡವರಿಗೆ ಸಹಕರಿಯಾಗಲಿದೆ. ಪ್ರತಿಯೊಬ್ಬರಿಗೂ ಉಚಿತವಾಗಿ ದೊರಕಬೇಕು ಅನ್ನುವುದೇ ಈ ಯೋಜನೆಯ ಆಶಯ. ನೀವೆಲ್ಲರೂ ಈ ಬಾರಿ 123 ಸ್ಥಾನ ಕೊಡದೇ ಇದ್ದರೆ ನಿಮ್ಮ ಕಷ್ಟಕ್ಕೆ ಸ್ಪಂದಿಸಲು ಆಗುವುದಿಲ್ಲ. ಹಾಗಾಗಿ ಈ ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ. ಹಾಗೆಯೇ ನಾನೇನು ಮುಖ್ಯಮಂತ್ರಿ ಆಗಿ ಮೆರೆಯಬೇಕು ಎಂದು ಕೇಳುತ್ತಿಲ್ಲ, ನಿಮ್ಮಲ್ಲರ ಕಷ್ಟಕ್ಕೆ ಸ್ಪಂದಿಸಲು ಕೇಳುತ್ತಿದ್ದೇನೆ ಎಂದರು.

ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದವರ ಜೊತೆ ಹೋದರೆ ಈ ಯಾವುದೇ ಯೋಜನೆ ಫಲಕಾರಿ ಆಗುವುದಿಲ್ಲ. ಹಾಗಾಗಿ 123 ಸೀಟ್ ಅನ್ನು ಕೊಟ್ಟು ಮುಖ್ಯಮಂತ್ರಿ ಮಾಡಿ. ಬಿಜೆಪಿ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಈಗಾಗಲೇ ನೋಡಿದ್ದೀರಾ ಹಾಗಾಗಿ ಈ ಬಾರಿ ಜೆಡಿಎಸ್ ಗೆ ಮತ ನೀಡಿ. ರಾಜಾರಾಂ ನಿಮ್ಮ ಅಭ್ಯರ್ಥಿ ಅಲ್ಲ ಕುಮಾರಸ್ವಾಮಿ ನಿಮ್ಮ ಅಭ್ಯರ್ಥಿ ಎಂದು ಮತವನ್ನು ನೀಡಿ. ಈ ಬಾರಿ 100ಕ್ಕೆ 100 ರಷ್ಟು ಯಡೂರು ರಾಜಾರಾಂ ಗೆಲ್ಲಲಿದ್ದಾರೆ ಎಂದರು.

ಪಂಚರತ್ನ ರಥ ಯಾತ್ರೆಯ ವಿಶೇಷತೆ ಏನು ?

ಶಿಕ್ಷಣಕ್ಕೆ ಮೊದಲ ಆದ್ಯತೆ

ಪ್ರತಿ ಗ್ರಾಮಪಂಚಾಯಿತಿ ಕೇಂದ್ರದಲ್ಲಿ ಎಲ್ ಕೆ ಜಿ – ದ್ವಿತೀಯ ಪಿಯುಸಿ ವರೆಗೆ ಶಾಲೆ ಪ್ರಾರಂಭ ಆಗಲಿದೆ. ಉಚಿತವಾಗಿ ಪ್ರತಿ ಹಳ್ಳಿಗಳಲ್ಲಿ ಶಿಕ್ಷಣ ದೊರಕಬೇಕು ಹಾಗಾಗಿ ಶಿಕ್ಷಣಕ್ಕೆ ಮೊದಲ ಆದ್ಯತೆ ಎಂದರು.

ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ

30 ಬೆಡ್ ಇರುವಂತಹ ಆಸ್ಪತ್ರೆಯನ್ನು ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಬೇಕು. ಆ ಆಸ್ಪತ್ರೆಯಲ್ಲಿ 3 ವೈದ್ಯರಿರಬೇಕು. ಮಧ್ಯರಾತ್ರಿ ಕೂಡ ಸೇವೆ ದೊರಕಬೇಕು. ಈಗಾಗಲೇ ಯಶಸ್ವಿನಿ ಯೋಜನೆಯಡಿಯಲ್ಲಿ ಸರಿಯಾಗಿ ಹಣ ಬರುತ್ತಿಲ್ಲ.
ಕಿಡ್ನಿ ಸಮಸ್ಯೆ ಸೇರಿ ಹಲವು ದೊಡ್ಡ ದೊಡ್ಡ ರೋಗಗಳಿಗೆ ತುಂಬಾ ಹಣ ಬೇಕಾಗುತ್ತದೆ ಹಾಗಾಗಿ ಈ ಪಂಚರತ್ನದ ಆರೋಗ್ಯ ಯೋಜನೆಯಲ್ಲಿ 35 ಲಕ್ಷದ ಇನ್ಸೂರೆನ್ಸ್ ಕೊಡಬೇಕು ಎಂಬುದು ನಮ್ಮ ಧ್ಯೇಯ ಎಂದರು.

ರೈತ ಚೈತನ್ಯ

ಮಲೆನಾಡಿನಲ್ಲಿ ರೈತರ ಪರಿಸ್ಥಿತಿ ಹೇಳ ತೀರಾದಾಗಿದೆ. ರೈತರು ಸಾಲಗಾರರು ಆಗಬೇಕಿಲ್ಲ.
ಮಲೆನಾಡಿನಲ್ಲಿ ಅಡಕೆಗೆ ಬಂದಿರುವ ಕಾಯಿಲೆ ವಾಸಿ ಆದರೆ ನಿಮ್ಮನು ಹಿಡಿದು ನಿಲ್ಲಿಸಲಾಗುವುದಿಲ್ಲ. ಈಗಿರುವ ಸರ್ಕಾರ ಎಲೆ ಚುಕ್ಕೆ ರೋಗಕ್ಕೆ ಏನು ಮಾಡಿಲ್ಲ. ನಾವು ಬಂದರೆ ಖಂಡಿತ ಅದರ ಪರಿಹಾರಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆ. ಅಡಿಕೆಯ ಜೊತೆ ಉತ್ತಮವಾದ ಬೆಳೆಯನ್ನು ಬೆಳೆಯಲು ಯೋಜನೆಯನ್ನು ರೂಪಿಸುವೆ. ಇನ್ನು ಮುಂದೆ ರೈತರು ಬ್ಯಾಂಕ್ ಬಳಿ ಸಾಲ ತೆಗೆದುಕೊಳ್ಳಬೇಕಿಲ್ಲ. ಪ್ರತಿ 10 ಎಕರೆಗೆ 10 ಸಾವಿರದಂತೆ 10 ಎಕರೆವರೆಗೆ 1 ಲಕ್ಷದವರೆಗೆ ಹಣವನ್ನು ನಮ್ಮ ಸರ್ಕಾರ ಬಂದರೆ ಕೊಡುತ್ತೇವೆ. ಆ ಹಣವನ್ನು ವಾಪಾಸ್ ಕೊಡಬೇಕಿಲ್ಲ. ಪ್ರತಿ ಮಳೆಗಾಲದಲ್ಲಿ ಹಣ ಬಂದು ನಿಮ್ಮ ಅಕೌಂಟ್ ಗೆ ಬೀಳಲಿದೆ ಎಂದರು.

ಎಷ್ಟೋ ಜನರು ಸಣ್ಣ ಸಣ್ಣ ಉದ್ಯೋಗ ಮಾಡುತ್ತೀರಾ. ಅಂತಹ ಯುವಕರಿಗೆ, ಹೆಣ್ಣು ಮಕ್ಕಳಿಗೆ ನಮ್ಮ ಸರ್ಕಾರ ಬಂದರೆ ಸರ್ಕಾರದಿಂದ 75000 ಹಣವನ್ನು ಸಬ್ಸಿಡಿ ರೂಪದಲ್ಲಿ ಕೊಡುತ್ತೇವೆ. ಆ ಹಣದಲ್ಲಿ ಹೊಸದಾಗಿ ಉದ್ಯೋಗ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬಹುದು. ಈ ರೀತಿಯಾದ ಹಲವಾರು ಯೋಜನೆಯನ್ನು ನಾವು ತರುತ್ತೇವೆ ಯಾರು ಕೂಡ ಕೆಲಸವಿಲ್ಲದೆ ಇರಬಾರದು. ಇನ್ನು ಮನೆ ಇಲ್ಲದವರಿಗೆ ಪ್ರತಿ ಗ್ರಾಮದಲ್ಲೂ ಹೊಸ ಬಡಾವಣೆ ಮಾಡಿ ಮನೆ ಕೊಡುವ ಕೆಲಸವು ನಾವು ಮಾಡುತ್ತೇವೆ ಎಂದರು.

ವಿಶೇಷವಾಗಿ 65 ವರ್ಷ ಮೇಲ್ಪಟ್ಟವರಿಗೆ ಅವರು ಬದುಕಿರುವವರೆಗೂ ಪ್ರತಿ ತಿಂಗಳು 5000 ಹಣ ಕೊಡುವ ಯೋಜನೆ ಮಾಡಲಿದ್ದೇವೆ. ವಿಧವಾ ವೇತನ ಯೋಜನೆ ಈಗ ಬರಿ 800 ರೂ ಗಳಿದ್ದು ಅದನ್ನು 2500 ರೂ ಗೆ ಹೆಚ್ಚಳ ಮಾಡುತ್ತೇವೆ. ಇನ್ನು ಹಲವು ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿ ಜೀವನ ಸಾಗಿಸುತ್ತಿರುವ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ತಂದಿದ್ದು ಸಂಘ ಸಂಸ್ಥೆಗಳಲ್ಲಿ ಇದ್ದಂತಹ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ ಎಂದರು. ಈ ಎಲ್ಲಾ ಯೋಜನೆಗಳಿಗಾಗಿ ಸರಿ ಸುಮಾರು 2 ಲಕ್ಷದ 50 ಸಾವಿರ ಕೋಟಿ ಬೇಕಿದೆ. ಹಾಗಾಗಿ ಮಿಷನ್ 123 ಸೀಟ್ ಅನ್ನು ಕೊಟ್ಟು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ.ನಿಮ್ಮೆಲ್ಲರ ಆಶೀರ್ವಾದ ನನಗೆ ನೀಡಿ ಎಂದು ಮನವಿ ಮಾಡಿದರು.

ತೀರ್ಥಹಳ್ಳಿಯಲ್ಲಿ ರಾಜಾರಾಂ ಅಲ್ಲ ಕುಮಾರಸ್ವಾಮಿ ಅಭ್ಯರ್ಥಿ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರ್ ರಾಜಾರಾಂ ಮಾತನಾಡಿ, ತೀರ್ಥಹಳ್ಳಿಯಲ್ಲಿ ರಾಜಾರಾಂ ಅಲ್ಲ ಕುಮಾರಸ್ವಾಮಿ ಅಭ್ಯರ್ಥಿ ಎಂದು ಮತವನ್ನು ನೀಡಿ, ಕುಮಾರಸ್ವಾಮಿ ಮುಖ ನೋಡಿ ಮತನೀಡಿ ಕುಮಾರಣ್ಣನ ಬಹುದೊಡ್ಡ ಆಸೆಯಾಗಿರುವ
ಮಿಷನ್ 123 ಬರುವಂತೆ ಗೆಲ್ಲಿಸಿ, ಒಂದು ಬಾರಿ
ಬಡ ರೈತನ ಮಗನಿಗೆ ಅವಕಾಶ ಕೊಡಿ ಎಂದರು.

ರಾಜ್ಯದಲ್ಲೇ ಅತೀ ದೊಡ್ಡ ವಿಧಾನಸಭಾ ಕ್ಷೇತ್ರ ಎಂದರೆ ಅದು ತೀರ್ಥಹಳ್ಳಿ. ಇದು ಪ್ರಜ್ಞಾವಂತರ ಕ್ಷೇತ್ರ ಕೂಡ ಹೌದು. ಅದನ್ನು ನೀವೆಲ್ಲರೂ ಮಾಡಿ ತೋರಿಸಬೇಕು.ನಾಡಿನ ಎಲ್ಲ ಜನರು ಈ ಬಾರಿ ಹೇಳುತ್ತಾರೆ ಕುಮಾರಣ್ಣನೇ ಮುಂದಿನ ಮುಖ್ಯಮಂತ್ರಿ ಎಂದು ಹಾಗಾಗಿ ಕುಮಾರಸ್ವಾಮಿ ಅವರ ಮಿಷನ್ 123 ಸೀಟ್ ನಲ್ಲಿ ರಾಜಾರಾಂ ಕೂಡ ಓಬ್ಬರಾಗಿರಬೇಕಾಗಿದೆ ಎಂದರು.

ಜಾತಿ ರಾಜಕಾರಣವನ್ನು ಯಾವತ್ತೂ ಕುಮಾರಣ್ಣ ಮಾಡಿಲ್ಲ. ಈಗಿರುವ ಪಕ್ಷಗಳು ಜಾತಿ ರಾಜಕಾರಣ ಮಾಡುತ್ತಾ ಇದ್ದಾರೆ. ಹಾಗೂ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿ ಅಂದರೆ ಅದು ಕುಮಾರಣ್ಣ ಮಾತ್ರ. ಹಾಗಾಗಿ ಅವರನ್ನು ಈ ಬಾರಿ ಮುಖ್ಯಮಂತ್ರಿ ಮಾಡಬೇಕಾಗಿದೆ. ಅವರು ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದಾಗ 10,700 ಜನರ ಕುಟುಂಬದ ಸಾಲಮನ್ನಾ ಮಾಡಿದ್ದರು. ಅದರಲ್ಲಿ ಈ ಬಾರಿ ಪ್ರತಿಯೊಂದು ಮನೆಯಲ್ಲಿ 4 ಓಟು ಬಿದ್ದರು ಕೂಡ ಕುಮಾರಣ್ಣನನ್ನು ಮುಖ್ಯಮಂತ್ರಿ ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ಕಿರಣ್ ಪ್ರಭಾಕರ್, ಶ್ರೀಕಾಂತ್, ಭೋಜೇಗೌಡರು, ಗೋಪಾಲಗೌಡರು, ವರ್ತೆಶ್, ಚಾ,ಬು ಸಾಹೇಬ್, ಯೋಗೇಶ್ ಗೌಡ, ಗೀತಾ ಸತೀಶ್, ರಾಮಕೃಷ್ಣ, ಶೈಲಜಾ ನಾಗರಾಜ್, ತಲಬಿ ರಾಘವೇಂದ್ರ, ವಾರದರಾಜ್, ಶಿರಸಿ ಉಪೇಂದ್ರ ಪೈ ಸೇರಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ವರದಿ : ಅಕ್ಷಯ್ ಕುಮಾರ್

Leave A Reply

Your email address will not be published.

error: Content is protected !!