ಶಿವಮೊಗ್ಗ ; ಅಡಿಕೆ ಬೇಯಿಸುವಾಗ ಆಕಸ್ಮಿಕವಾಗಿ ಕುದಿಯುವ ಚೊಗರಿದ್ದ ಹಂಡೆಗೆ ಬಿದ್ದು ತೀವ್ರ ಗಾಯಗೊಂಡಿದ್ದ ವಡ್ಡಿನಕೊಪ್ಪದ ನಿವಾಸಿಯೊಬ್ಬರು ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ರುದ್ರಪ್ಪ ಅವರ ಮಗ ಜೇನುಕುಮಾರ್ ಮೃತಪಟ್ಟ ವ್ಯಕ್ತಿ. ಸೆಪ್ಟೆಂಬರ್ 8ರಂದು ಮನೆ ಸಮೀಪದ ಶೆಡ್ನಲ್ಲಿ ಅಡಿಕೆ ಬೇಯಿಸುವ ಕೆಲಸದಲ್ಲಿ ತೊಡಗಿದ್ದ ಇವರು, ಬೆಂದ ಅಡಿಕೆಯನ್ನು ಹೊರಗೆ ತೆಗೆದ ನಂತರ ಹಂಡೆಯಲ್ಲಿದ್ದ ಚೊಗರು ತೆಗೆಯಲು ಪಕ್ಕದ ಕಟ್ಟೆಯನ್ನೇರಿದ್ದರು. ಈ ಸಂದರ್ಭದಲ್ಲಿ ಆಯ ತಪ್ಪಿ ನೇರವಾಗಿ ಕುದಿಯುವ ಹಂಡೆಯೊಳಗೆ ಬಿದ್ದಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಮೂವರು ಕಾರ್ಮಿಕರು ತಕ್ಷಣವೇ ಅವರನ್ನು ಹೊರಗೆಳೆದಿದ್ದಾರೆ. ಬಳಿಕ ತೀವ್ರ ಉರಿಯಿಂದಾಗಿ ಹೊರಗೆ ಓಡಿಬಂದು ಶರ್ಟ್ ಕಳಚಿದ ಜೇನುಕುಮಾರ್, ಮತ್ತೆ ಶೆಡ್ಗೆ ಮರಳುವಷ್ಟರಲ್ಲಿ ದೇಹದ ಬಹುಭಾಗ ತೀವ್ರವಾಗಿ ಸುಟ್ಟುಹೋಗಿತ್ತು.
ತಕ್ಷಣವೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಪರಿಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸೂಚನೆಯಂತೆ ಉಡುಪಿಯ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಭೀಕರ ದೃಶ್ಯ ಶೆಡ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

