ಹಬ್ಬಗಳು ಶಾಂತಿ-ಸೌಹಾರ್ಧತೆ ಸಾಬೀತುಪಡಿಸಲು ಇರುವ ಅವಕಾಶ ; ಡಾ|| ಆರ್.ಸೆಲ್ವಮಣಿ

0 38

ಶಿವಮೊಗ್ಗ : ಪ್ರಸಕ್ತ ಮಾಹೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂದವರು ಆಚರಿಸುವ ಗಣೇಶೋತ್ಸವ ಹಾಗೂ ಈದ್‌ಮಿಲಾದ್ ಹಬ್ಬಗಳು ಶಾಂತಿ ಸೌಹಾರ್ದತೆಯಿಂದ ನಡೆದು ರಾಜ್ಯಕ್ಕೆ ಮಾದರಿಯಾಗಿರುವ ಸಂದೇಶ ಸಾರುವಲ್ಲಿ ಎಲ್ಲಾ ಧರ್ಮದ ಮುಖಂಡರು ವಿಶೇಷ ಗಮನಹರಿಸುವಂತೆ ಡಿಸಿ ಡಾ|| ಆರ್ ಸೆಲ್ವಮಣಿ ಅವರು ಮನವಿ ಮಾಡಿದರು.

ಅವರು ಇಂದು ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ವಧರ್ಮ ಸಮನ್ವಯದ ಸಂದೇಶ ಸಾರಲು, ಸರ್ವರೂ ಸಂಭ್ರಮ ಹಂಚಿಕೊಳ್ಳಲು ಸುಸಂದರ್ಭ ಇದಾಗಿದೆ ಎಂದವರು ನುಡಿದರು.

ಜಿಲ್ಲೆಯಲ್ಲಿ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಿಗಾವಹಿಸಲು ಪೊಲೀಸ್ ಇಲಾಖೆಯಿಂದ ನಿರಂತರ ಸಭೆಗಳನ್ನು ಆಯೋಜಿಸಲಾಗುತ್ತಿದೆ ಅಲ್ಲದೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತಿದೆ ಎಂದ ಅವರು, ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಬಿಗಿಬಂದೋಬಸ್ತ್ ಕೈಗೊಳ್ಳಲು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಅಲ್ಲದೇ ಅಗತ್ಯವಿರುವಲ್ಲಿ ಸಿಸಿ. ಕ್ಯಾಮರಾಗಳನ್ನು ಅಳವಡಿಸಲು ಸೂಚಿಸಲಾಗಿದೆ. ಅಹಿತಕರ ಘಟನೆಗಳಿಗೆ ಕಾರಣವಾಗುವ ಪುಂಡರನ್ನು ಗುರುತಿಸಿ, ಕ್ರಮಕೈಗೊಳ್ಳಲು ವಿಶೇಷ ಗಮನಹರಿಸಲಾಗಿದೆ ಎಂದರು.


ಈ ಅವಧಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿನ ಜವಾಬ್ದಾರಿಯುತ ಅಧಿಕಾರಿಗಳು ಕೇಂದ್ರಸ್ಥಾನದಿAದ ಹೊರಹೋಗದಂತೆ ಹಾಗೂ ಕೇಂದ್ರಸ್ತಾನದಲ್ಲಿದ್ದು, ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಪರಿಸರಕ್ಕೆ ಮಾರಕವಾಗುವ ಪ್ಲೆಕ್ಸ್ಗಳ ಅಳವಡಿಕೆಗೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ ಬ್ಯಾನರ್ ಅಳವಡಿಸಲು ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕ ಸಭೆ, ಮೆರವಣಿಗೆಯಲ್ಲಿ ಡಿ.ಜೆ.ಸೌಂಡ್ಸ್ ಬಳಸುವುದನ್ನು ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿದೆ ಎಂದವರು ನುಡಿದರು.


ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಧರ್ಮದ ಸಭೆ-ಸಮಾರಂಭಗಳು ಶಾಂತಿಯುತವಾಗಿ ನಡೆಯುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಾದ್ಯಂತ 3000ಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ, ಶಿವಮೊಗ್ಗ ನಗರ ಒಂದರಲ್ಲಿಯೇ 500ಕ್ಕೂ ಹೆಚ್ಚಿನ ಗಣೇಶ ಪ್ರತಿಷ್ಠಾಪನೆಗೊಳ್ಳಲಿದೆ ಅಂತೆಯೇ ಈದ್‌ಮಿಲಾದ್ ಹಿನ್ನೆಲೆಯಲ್ಲಿ ಮೆರವಣಿಗೆಗಳೂ ಆಯೋಜನೆಗೊಳ್ಳಲಿವೆ ಎಂದ ಅವರು, ಪ್ರಸ್ತುತ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್-ಭಂಟಿಂಗ್‌ಗಳ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ ಮುಂದಿನ ಎರಡು ವರ್ಷಗಳಿಗೂ ಮುಂದುವರೆಯಲಿದೆ ಎಂದವರು ನುಡಿದರು.


ನಡೆಯುವ ಸಭೆ-ಸಮಾರಂಭ-ಮೆರವಣಿಗೆಗಳ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಲು ವಿದ್ಯುತ್, ಪೊಲೀಸ್, ಕಂದಾಯ, ಸ್ಥಳೀಯ ಸಂಸ್ಥೆಗಳು ಹಾಗೂ ತಹಶೀಲ್ದಾರರನ್ನೊಳಗೊಂಡ ಏಕಗವಾಕ್ಷಿ ಪದ್ದತಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ಆಸಕ್ತರು ತಮ್ಮ ಕಾರ್ಯಕ್ರಮಗಳಿಗಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಜಿಲ್ಲೆಯ ಎಲ್ಲಾ ತಾಲೂಕು ಹೋಬಳಿ ಕೇಂದ್ರಗಳು ಸೇರಿದಂತೆ ಅಗತ್ಯವಿರುವಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನೂ ಕ್ಯಾಮರಾಗಳನ್ನು ಅಳವಡಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ ವಿಡಿಯೋ, ಫೋಟೋಗ್ರಫಿ ಮತ್ತು ಡ್ರೋಣ್ ಮೂಲಕ ಕಾರ್ಯಕ್ರಮ ಹಾಗೂ ಮೆರವಣಿಗೆಗಳ ಚಿತ್ರೀಕರಣ ನಡೆಸಲಾಗುವುದು ಎಂದರು.


ಜಿಲ್ಲೆಯಲ್ಲಿ ಶಾಂತಿಭಂಗ ಮಾಡುವವರ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಸಮಾಜ ಕಂಟಕರಿಗೆ ಕ್ರಮ ಅನಿವಾರ್ಯವಾಗಲಿದೆ. ಅಂತೆಯೇ ಸಾರ್ವಜನಿಕರ ರಕ್ಷಣೆಯೂ ಪರಮಗುರಿಯಾಗಿದೆ ಎಂದ ಅವರು, ಉಭಯ ಧರ್ಮಗಳ ಪ್ರಮುಖರು ತಮ್ಮ ಕಾರ್ಯಕ್ರಮಗಳ ಯಶಸ್ಸಿಗೆ ಸ್ವಯಂಸೇವಕರನ್ನು ನಿಯೋಜಿಸುವುದು ಉತ್ತಮ. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಕೂಡ ಉತ್ತಮ ವಿಧಾನವಾಗಿದೆ ಎಂದರು.
ಶಾಸಕ ಎನ್.ಎನ್. ಚನ್ನಬಸಪ್ಪ ಅವರು ಮಾತನಾಡಿ, ಎರಡೂ ಧರ್ಮದವರು ಹೆಬ್ಬಗಳನ್ನು ಸಂಭ್ರಮ ಸಡಗರಗಳಿಂದ ಅದ್ಧೂರಿಯಾಗಿ ಶಾಂತಿಗೆ ಭಂಗ ಬರದಂತೆ ಆಚರಿಸೋಣ. ಈ ಹಬ್ಬಗಳು ಮನಸ್ಸುಗಳನ್ನು ಅರಳಿಸುವ ಕೆಲಸ ಮಾಡಲಿ. ಅಗತ್ಯವಿದ್ದಲ್ಲಿ ಒಂದೆಡೆ ಕುಳಿತು ಚರ್ಚಿಸಬಹುದಾಗಿದೆ ಎಂದರು.


ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್ ಸೇರಿದಂತೆ ಎಲ್ಲಾ ಧರ್ಮಗಳ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


35 ವಾರ್ಡ್‌ಗಳಲ್ಲಿ ಶಾಂತಿಸಭೆ ನಡೆಸಿ. ಸಿ.ಸಿ.ಕ್ಯಾಮೆರಾ ಅಳವಡಿಸಿ. ಗಣಪತಿ ಪ್ರತಿಷ್ಠಾಪನೆಗೆ ನಿರ್ಬಂಧ ಬೇಡ.
– ಶೇಷಾದ್ರಿ, ಕಾಂಗ್ರೆಸ್ ಮುಖಂಡರು.


ಭಂಟಿಂಗ್-ಬ್ಯಾನರ್‌ಗಳ ಅಳವಡಿಕೆಗೆ ನಿರ್ಬಂಧವಿರಲಿ. ಉಭಯ ಧರ್ಮಗಳವರು ಆಚರಿಸುವ ದಿನಾಂಕಗಳಲ್ಲಿ ಹೊಂದಾಣಿಕೆ ನೋಡಿಕೊಳ್ಳಿ.
– ಶ್ರೀಪಾಲ್ ಕೆ.ಪಿ.


ಅಹಿತಕರ ಘಟನೆಗಳು ಅಭಿವೃದ್ಧಿಗೆ ಹಿನ್ನೆಡೆಯಾಗಲಿದೆ. ಅಹಿತಕರ ಘಟನೆಗಳು ಆಗದಂತೆ ಗಮನಹರಿಸಿ. ಪ್ರಚೋದನೆ ನಿಲ್ಲಿಸಿ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಅಗತ್ಯ. ನಗರದಲ್ಲೆಡೆ ಪೊಲೀಸ್ ಪಥಸಂಚಲನ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಅನಿವಾರ್ಯ ಎಂಬ ಸಂದೇಶ ರವಾನಿಸಿ. ಸರ್ವ ಧರ್ಮದವರ ಸಹಕಾರ ಅಗತ್ಯ.
– ಹೆಚ್.ಆರ್.ಬಸವರಾಜಪ್ಪ, ರೈತಮುಖಂಡ.

ಚಂದ್ರದರ್ಶನವಾಗದ ಹೊರತಾಗಿ ಹಬ್ಬದ ದಿನಾಂಕ ನಿಗದಿ ಕಷ್ಟಸಾಧ್ಯ. ಪೊಲೀಸ್ ಇಲಾಖೆಯವರು ಜಿಲ್ಲೆಗೆ ಕಪ್ಪುಚುಕ್ಕೆ ಬರದಂತೆ ಕ್ರಮ ವಹಿಸಿ.
– ಫರ್ವೇಜ್, ಮುಸ್ಲಿಂ ಮುಖಂಡರು.

ಗಣೇಶೋತ್ಸವ ರಾಷ್ಟ್ರೀಯತೆಯ ಹಬ್ಬ. ಎಲ್ಲರಲ್ಲೂ ಸಂಭ್ರಮವಿರಲಿ.
– ರಮೇಶ್ ಹೆಗಡೆ, ಕಾರ್ಪೋರೇಟರ್.

Leave A Reply

Your email address will not be published.

error: Content is protected !!