ಬಾಳೆಹೊನ್ನೂರು ; ದಲಿತ ಹಿಂದುಳಿದ ಮಠಾಧೀಶರು ಸುದ್ದಿಗೋಷ್ಟಿ ಮಾಡಿ ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನು ಆಧರಿಸಿ ಭದ್ರಾವತಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದ್ದಾರೆಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಈ ಕೆಳಗಿನಂತೆ ಸ್ಪಷ್ಟನೆ ನೀಡಿದ್ದಾರೆ.
ಭದ್ರಾವತಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿ ತಾಲೂಕಾ ಘಟಕದಿಂದ ಜರುಗಿದ ಸಮಾರಂಭದಲ್ಲಿ ಜಾತಿಯ ಮಠಗಳಿಂದ ಕಲುಷಿತ ವಾತಾವರಣ ಈ ಹೇಳಿಕೆ ಹಿನ್ನೆಲೆಯಲ್ಲಿ ದಲಿತ ಹಿಂದುಳಿದ ಮಠಾಧೀಶರು ಸುದ್ದಿಗೋಷ್ಟಿ ಮಾಡಿರುವುದು ನೋವಿನ ಸಂಗತಿ. ವೀರಶೈವ ಲಿಂಗಾಯತ ಸಮುದಾಯದ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಕೃತಿ ಪರಂಪರೆ ಆದರ್ಶಗಳ ಬಗೆಗೆ ಮಾತನಾಡಿದ್ದೇವೆ ಹೊರತು ಅನ್ಯ ಬೇರೆ ಯಾವುದೇ ಜಾತಿ ಕುರಿತು ಯಾವುದೇ ಹೇಳಿಕೆ ಕೊಟ್ಟಿರುವುದಿಲ್ಲ. ದಲಿತ ಹಿಂದುಳಿದ ಮಠಾಧೀಶರು ತಪ್ಪು ಗ್ರಹಿಕೆ ಮಾಡಿಕೊಂಡು ಗೋಷ್ಠಿ ನಡೆಸಿರುವುದಕ್ಕೆ ವಿಷಾಧಿಸುತ್ತೇವೆ. ಅವರವರ ಸಮುದಾಯದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪವಾಗಲಿ ಅಲ್ಲ ಸಲ್ಲದ ಮಾತುಗಳಿಲ್ಲವೆಂಬುದನ್ನು ಸ್ಪಷ್ಟಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

