ಕಾಂಗ್ರೆಸ್ ನೀಡಿದ ಡೂಪ್ಲಿಕೇಟ್ ಕಾರ್ಡ್ ಜನ್ರನ್ನ ದಾರಿ ತಪ್ಪಿಸ್ತು ; ಆರಗ ಜ್ಞಾನೇಂದ್ರ

0 39

ಹೊಸನಗರ : ಕಾಂಗ್ರೆಸ್ ನೀಡಿದ ಅನುಷ್ಟಾನ ಯೋಗ್ಯವಲ್ಲದ ಡೂಪ್ಲಿಕೇಟ್ ಕಾರ್ಡ್ ಜನರನ್ನು ದಾರಿ ತಪ್ಪಿಸಿತು. ಸತ್ಯದ ಅರಿವಾದ ಮೇಲೆ ಜನರು ಈಗ ಪಶ್ಚಾತ್ತಾಪ ಪಡುವಂತಾಗಿದೆ. ಕಾಂಗ್ರೆಸ್ ಸರ್ಕಾರ ಇರೋತನಕ ಜನರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂದು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ನಿಟ್ಟೂರು ಸಮೀಪದ ಮಂಜಗಳಲೆ ಗ್ರಾಮದ ಕುಂಬಳೆಯಲ್ಲಿ ಗುರುವಾರ ಆಯೋಜಿಸಿದ್ದ ಮತದಾರರಿಗೆ ಅಭಿನಂದನೆ ಸಭೆ ಉದ್ಧೇಶಿಸಿ ಮಾತನಾಡಿ, ಕಬ್ಬಿಣವನ್ನು ತಂದು ಬಂಗಾರ ಎಂದು ಹೇಳಿ ಮೋಸ ಮಾಡಿದಂತವರನ್ನು ಜೊತೆ ಇಟ್ಟುಕೊಂಡು ನಾವೇ ಜೋಡೆತ್ತು ಎಂದು ಹೇಳಿ ತೀರ್ಥಹಳ್ಳಿಯ ಜನರನ್ನು ದಿಕ್ಕು ತಪ್ಪಿಸಲು ಯತ್ನ ಮಾಡಿದವರಿಗೆ ಇಲ್ಲಿನ ಜನರು ಸರಿಯಾದ ಶಾಸ್ತಿ ಮಾಡಿದ್ದಾರೆ. ಕಳೆದ ಅವಧಿಯಲ್ಲಿ ಕ್ಷೇತ್ರಕ್ಕೆ 3254 ಕೋಟಿ ಹಣ ತಂದು ಹಳ್ಳಿ ಹಳ್ಳಿಗಳ ಅಭಿವೃದ್ಧಿ ನಡೆಸಿದ್ದೇನೆ, ಅದೇ ಅಭಿವೃದ್ಧಿ ಕಾರ್ಯಗಳು ಮತಗಳಾಗಿ ಪರಿವರ್ತನೆಯಾಗಿ ನನ್ನ ಗೆಲುವಿಗೆ ಕಾರಣವಾಗಿದೆ. ನನ್ನ ಗೆಲುವುಗಾಗಿ ಹಗಲು ಇರಳು ಶ್ರಮಿಸಿದ ಕಾರ್ಯಕರ್ತರು ಮತ್ತು ನನ್ನ ಮೇಲೆ ವಿಶ್ವಾಸ ಇಟ್ಟು ಮತ ಹಾಕಿದ ಮತದಾರರಿಗೆ ತುಂಬು ಹೃದಯದ ಧನ್ಯವಾದಗಳು. ನೀವು ನನ್ನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಅತ್ಯಂತ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರ ಸಮಸ್ಯೆ ದೂರ ಮಾಡಲು ಕೇಂದ್ರ ಸರ್ಕಾರದ ಸಹಾಯದೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.


ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಹೆದ್ದೂರು ಮಾತನಾಡಿ, ಜ್ಞಾನೇಂದ್ರ ಅವರ ಗೆಲುವು ಕಾರ್ಯಕರ್ತರ ಗೆಲುವಾಗಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಇದ್ದಾಗಲೂ ಸಹ ತೀರ್ಥಹಳ್ಳಿಯಲ್ಲಿ ದೊಡ್ಡ ಅಂತರದಿಂದ ಜ್ಞಾನೇಂದ್ರ ಅವರನ್ನು ಗೆಲ್ಲಿಸಿರುವುದು ದೊಡ್ಡ ಸಾಧನೆಯಾಗಿದೆ. ಬಿಜೆಪಿ ಪಕ್ಷವು ಸದಾ ಕಾಲ ಜನರ ಸಂಕಷ್ಟಗಳಿಗೆ ಸ್ಪಂದಿಸಲಿದೆ. ಕಾಂಗ್ರೆಸ್ ನವರ ಸುಳ್ಳು ಭರವಸೆಗಳು ಹೆಚ್ಚು ಕಾಲ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದರು.


ಮಂಜಗಳಲೆ ಗ್ರಾಮಸ್ಥರು ನೂತನವಾಗಿ ಶಾಸಕರಾಗಿ ಆಯ್ಕೆಯಾದ ಜ್ಞಾನೇಂದ್ರರವರನ್ನು ಶಾಲು ಹೊದೆಸಿ ಅಭಿನಂದನೆ ಸಲ್ಲಿಸಿದರು.
ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್ ವೈ ಸುರೇಶ್, ಕಾರ್ಯದರ್ಶಿ ರಮಾಕಾಂತ್ ಮತ್ತಿಮನೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುಬ್ರಹ್ಮಣ್ಯ ಮತ್ತಿಮನೆ, ನಿಟ್ಟೂರು ಗ್ರಾಪಂ ಸದಸ್ಯ ಅಶೋಕ್ ಕುಂಬಳೆ, ನಿಟ್ಟೂರು ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಪ್ರಮುಖರಾದ ಅಪ್ಪಣ್ಣ ಹರಿಮನೆ, ಚಂದೊಳ್ಳಿ ಸೋಮಶೇಖರ ಇತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!