ಕಾಂಗ್ರೆಸ್‌ನ ಗ್ಯಾರಂಟಿ ಪ್ರಣಾಳಿಕೆ ಈಡೇರಿಕೆ ಕುರಿತು ಅನುಮಾನ ಬೇಡ ; ಬೇಳೂರು

0 48


ಹೊಸನಗರ : ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಗ್ಯಾರಂಟಿಗಳನ್ನು ಈಡೇರಿಸುವುದು ನಿಶ್ಚಿತ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.


ಅವರು ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿದೆ. ಕೊಟ್ಟಿರುವ ಭರವಸೆಗಳನ್ನು ಈಡೇರಿಸಲಿದೆ. ಅಗತ್ಯ ಅನುದಾನಗಳ ರೂಪು-ರೇಷೆಗಳು ಸಿದ್ದವಾಗುತ್ತಿವೆ. ಈ ಬಗ್ಗೆ ಶೀಘ್ರದಲ್ಲಿಯೇ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.


ಹಿಂದೆ ತಾವು ಶಾಸಕನಾಗಿದ್ದ ಅವಧಿಯಲ್ಲಿ ಹೊಸನಗರದ ತಾಲೂಕು ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೆ. ಹೊಸನಗರ ತಾಲೂಕನ್ನು ಯಾವ ಕಾರಣಕ್ಕೂ ಕಡೆಗಣನೆ ಮಾಡುವುದಿಲ್ಲ. ಸಾಗರ ಮತ್ತು ಹೊಸನಗರ ಕ್ಷೇತ್ರದ ನನ್ನ ಎರಡು ಕಣ್ಣುಗಳಿದ್ದಂತೆ. ಹೊಸನಗರ ಪಟ್ಟಣದಲ್ಲಿ ಪ್ರತಿ ವರ್ಷ ಉಂಟಾಗುತ್ತಿರುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.


ಹಿಂದಿನ ಅವಧಿಯಲ್ಲಿ ಬಿಜೆಪಿ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ. ಆ ಕಾರಣದಿಂದ ಹಿಂದಿನ ಸರ್ಕಾರ ಅನುಮೋದನೆ ಮಾಡಿದ್ದ ಕೆಲವು ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ. ಆದರೆ ಜನರಿಗೆ ಅಗತ್ಯವಿರುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ನಿರ್ವಹಿಸಲಾಗುವುದು ಎಂದರು.


ಕಳೆದ ಅವಧಿಯಲ್ಲಿ ನೆನೆಗುದಿಗೆ ಬಿದ್ದಿರುವ ಬಗರ್‌ಹಕುಂ ಅರ್ಜಿಗಳ ವಿಲೇ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಲಾಗುವುದು. ರಾಜ್ಯ ಸರಕಾರ ಮಂತ್ರಿ ಮಂಡಲ ರಚನೆ ಕಾರ‍್ಯ ಸಂಪೂರ್ಣಗೊಂಡ ನಂತರ ತುರ್ತು ಕಾಮಗಾರಿಗಳು ಹಾಗೂ ಭವಿಷ್ಯದ ದೃಷ್ಠಿಯಿಂದ ಆಗಬೇಕಿರುವ ಕಾರ‍್ಯಗಳ ಕುರಿತು ಚರ್ಚೆ ನಡೆಸಲಿದ್ದೇನೆ ಎಂದರು.


ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಾವು ಸಹ ಸಚಿವ ಸ್ಥಾನ ಪಡೆಯಲು ಆಕಾಂಕ್ಷಿ ಹೊಂದಿದ್ದೇನೆ. ಅನುಭವದ ಆಧಾರದಲ್ಲಿ ತಮಗೆ ಖಾತೆ ಸಿಗುವ ವಿಶ್ವಾಸವಿದೆ. ಆದರೆ ಪಕ್ಷವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿ, ಜನಪರ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಪತ್ರಿಕಾಘೋಷ್ಠಿಯಲ್ಲಿ ಸಣ್ಣಕ್ಕಿ ಮಂಜು, ಜಯನಗರ ಗೋಪಿ, ಬಸವರಾಜ್ ಗಗ್ಗ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!