ಕಾರ್ಯಕರ್ತರ ಪರಿಶ್ರಮವೇ ನನ್ನ ಗೆಲುವಿನ ಶ್ರೀರಕ್ಷೆ ; ಶಾಸಕ ಆರಗ ಜ್ಞಾನೇಂದ್ರ

0 47


ಹೊಸನಗರ : ಸಚ್ಚಾರಿತ್ರ್ಯ, ಅಭಿವೃದ್ದಿ ಪರ ಚಿಂತನೆ ಹಾಗೂ ಕಾರ್ಯಕರ್ತರ ಪರಿಶ್ರಮವೇ ನನ್ನ ಗೆಲುವಿನ ಶ್ರೀರಕ್ಷೆ ಆಗಿದೆ ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.


ಶಾಸಕರಾಗಿ ಆಯ್ಕೆಯಾದ ಬಳಿಕ ಹೊಸನಗರ ತಾಲೂಕಿನ ಮೇಲಿನಬೆಸಿಗೆ, ವಾರಂಬಳ್ಳಿ, ರಾಮಚಂದ್ರಾಪುರ, ವಸವೆ ಮತಗಟ್ಟೆಗಳ ಮೇಲಿನಬೆಸಿಗೆ ಬಿಜೆಪಿ ಶಕ್ತಿ ಕೇಂದ್ರದ ಮತದಾರರನ್ನು ಭೇಟಿ ನೀಡಿ ಮತದಾರರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.


ಮೇಲಿನಬೆಸಿಗೆ ಗ್ರಾಮ ಪಂಚಾಯ್ತಿ ಒಂದರಲ್ಲೆ ಮೂರು ನೂರು ಮತಗಳ ಲೀಡ್ ಬಿಜೆಪಿಗೆ ದೊರೆತಿರುವುದು ಪಕ್ಷದ ಕಾರ್ಯಕರ್ತರ ಗೆಲುವಾಗಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್‌ಗಳೇ ಈ ಬಾರಿ ಗುಪ್ತ ಮತಗಳಾಗಿ ಪರಿವರ್ತನೆ ಆಗಿವೆ. ರಾಜ್ಯದಲ್ಲಿ ಸುಮಾರು 50 ಮಂದಿ ಬಿಜೆಪಿ ಅಭ್ಯರ್ಥಿಗಳು ಐದು ಸಾವಿರ ಮತಗಳ ಅಂತರದಲ್ಲಿ ಈ ಬಾರಿ ಸೋಲು ಅನುಭವಿಸಲು ಈ ಗ್ಯಾರಂಟಿ ಕಾರ್ಡ್ ಸದ್ದಿಲ್ಲದೆ ಕೆಲಸ ಮಾಡಿರುವುದೇ ಕಾರಣ ಎಂದರು.


ಬಡ ಹೆಣ್ಣುಮಕ್ಕಳು ಈ ಕಾರ್ಡ್‌ಅನ್ನೆ ಚೆಕ್ ಎಂದು ನಂಬಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿರುವುದು ದುರಂತ. ಈಗಾಗಲೇ ಈ ಕುರಿತ ರಾಜ್ಯ ವ್ಯಾಪ್ತಿ ಅಪಸ್ವರದ ದನಿ ಎದ್ದಿದೆ. ಆದರೆ, ಈ ಗ್ಯಾರಂಟಿಗಳ ಅನುಷ್ಠಾನ ಸರ್ಕಾರಕ್ಕೆ ಮುಂದೆ ತಲೆ ನೋವಾಗಿ ಪರಿಣಮಿಸಲಿದೆ ಎಂಬ ಅಭಿಪ್ರಾಯಪಟ್ಟರು.


5ನೇ ಬಾರಿಗೆ ಶಾಸಕನಾಗಿ ಆಯ್ಕೆ ಆಗಲು ಮತನೀಡಿ ಸಹಕರಿಸಿದ ಕ್ಷೇತ್ರದ ಮತದಾರರಿಗೆ ಅಭಿನಂದೆನೆ ಸಲ್ಲಿಸಿದ ಅವರು ಕ್ಷೇತ್ರ ಅಭಿವೃದ್ದಿಗಾಗಿ ಜಾತಿ, ಮತ, ಪಕ್ಷಬೇಧ ತೊರೆದು ಶ್ರಮಿಸುವುದಾಗಿ ತಿಳಿಸಿದರು.


ಈ ವೇಳೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಡೂರು ನವೀನ್, ತಾ.ಪಂ. ಸದಸ್ಯ ಮಾಜಿ ಸದಸ್ಯ ಸೋಮಶೇಖರ, ಜಿ.ಪಂ. ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಶಕ್ತಿಕೇಂದ್ರದ ಅಧ್ಯಕ್ಷ ಲಕ್ಷಣ ಗೌಡ, ಪ್ರಮುಖರಾದ ಪ್ರಹ್ಲಾದ್ ಜಯನಗರ, ಮಂಜುನಾಥ್, ಆಟೋ ಸುರೇಶ್ ಆಚಾರ್ಯ, ಕಣಿವೆಬಾಗಿಲು ಸುಬ್ರಹ್ಮಣ್ಯ, ನರ‍್ಲೆ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!