ಬಿಜೆಪಿ ಸೋಲಿನ ಭೀತಿಯಿಂದ ಜಾತಿ ಸಂಘರ್ಷ ನಡೆಸಲು ಹುನ್ನಾರ

0 130


ಹೊಸನಗರ: ಬಿಜೆಪಿ ಕಾರ್ಯಕರ್ತ ಚಿಕ್ಕಮಣತಿ ಅಭಿಲಾಷ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ಸಣ್ಣಕ್ಕಿ ಮಂಜು ಹಾಗೂ ಅವರ ಸ್ನೇಹಿತರು ಇತ್ತೀಚೆಗೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಕಾಂಗ್ರೆಸ್ ಪಕ್ಷದ ತಾಲೂಕು ಪ್ರಚಾರ ಉಸ್ತುವಾರಿ ಹರತಾಳು ಜಯಶೀಲಪ್ಪಗೌಡ ಸ್ಪಷ್ಟನೆ ನೀಡಿದ್ದಾರೆ.


ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಹಲ್ಲೆ ನಡೆಸಲು ಮುಂದಾಗಿದ್ದು, ವೀರಶೈವ ಲಿಂಗಾಯತ ಎಂದು ಜಾತಿ ಹೆಸರು ಬಳಸಿ ನಿಂದನೆ ಮಾಡಿದ್ದಾರೆ ಎಂದು ಅಭಿಲಾಷ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಇದಕ್ಕೆ ತಾಲೂಕು ವೀರಶೈವ ಪರಿಷತ್‌ ಖಂಡನೆ ವ್ಯಕ್ತಪಡಿಸಿದೆ. ಆದರೆ ಇದೆಲ್ಲವೂ ಬಿಜೆಪಿಯ ಚುನಾವಣಾ ಪ್ರಚಾರದ ತಂತ್ರವಾಗಿದೆ. ಕ್ಷೇತ್ರದಲ್ಲಿ ಯಾವುದೇ ರೀತಿಯ ಜಾತಿ ವೈಷಮ್ಯ ಇಲ್ಲ. ಈಗ ಅದನ್ನು ಹುಟ್ಟು ಹಾಕಲು ಬಿಜೆಪಿ ಯತ್ನ ನಡೆಸುತ್ತಿದೆ ಎಂದು ದೂರಿದರು.


ಈ ಬಾರಿ ಕ್ಷೇತ್ರದ ಶೇ.70ಕ್ಕೂ ಹೆಚ್ಚು ವೀರಶೈವ ಲಿಂಗಾಯತರು ಬಿಜೆಪಿ ಪಕ್ಷವನ್ನು ವಿರೋಧಿಸಿದ್ದಾರೆ. ಬಿಜೆಪಿ ಪಕ್ಷ ವಿರೋಧಿಸುವುದಕ್ಕಿಂತ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪನವರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಇದರಿಂದ ಬಿಜೆಪಿ ಅಭ್ಯರ್ಥಿಗೆ ಸೋಲಿನ ಭಯಕಾಡುತ್ತಿದೆ. ಹತಾಶೆಯನ್ನು ತಡೆಯಲಾಗದೆ ಲಿಂಗಾಯತ ಮತಗಳನ್ನು ಸೆಳೆಯಲು ಕೀಳುಮಟ್ಟದ ಪ್ರಚಾರ ತಂತ್ರಗಳನ್ನು ಬಳಸುತ್ತಿದ್ದಾರೆ. ಸಮುದಾಯವನ್ನು ಒಡೆದು ಅಥವಾ ಜಾತಿಗಳ ನಡುವೆ ವಿಷಬೀಜ ಬಿತ್ತಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.


ಸುದೀಪ್ ಪಟೇಲ್‌ ಬ್ರಹ್ಮೇಶ್ವರ ಮಾತನಾಡಿ, ಅಭಿಲಾಷ್ ಅವರು ರೌಡಿ ಶೀಟರ್ ಆಗಿದ್ದು, ಈಗಾಗಲೇ ಹತ್ತಾರು ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸುವ ಇಂತಹವರನ್ನು ಗಡಿಪಾರು ಮಾಡಬೇಕು ಹಾಗೂ ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂದು ಪ್ರಜ್ಞಾವಂತ ಜನತೆ ಇದನ್ನು ಅರಿಯಬೇಕು ಎಂದರು.


ಹೀಲಗೋಡು ಅಶೋಕಗೌಡ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಪ್ರಚಾರಕ್ಕೆ ಹೋದ ವೇಳೆ ಮತದಾರರ ಅಭಿಪ್ರಾಯವನ್ನು ಗುಟ್ಟಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ. ಬಳಿಕ ಅದನ್ನು ಬಳಸಿಕೊಂಡು ಬ್ಲಾಕ್‌ಮೇಲ್ ಮಾಡುವುದು, ಅದನ್ನು ಜಾಲತಾಣಗಳಲ್ಲಿ ಹರಿಬಿಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮತದಾರರ ಮನಸ್ಸನ್ನು ಘಾಸಿಗೊಳಿಸುವ ಕೆಲಸ ನಡೆಯುತ್ತಿದೆ ಬಿಜೆಪಿ ಪಕ್ಷ ಎಷ್ಟೇ ಕುತಂತ್ರ ರಾಜಕರಣ ಮಾಡಿದರೂ ಬೇಳೂರು ಗೋಪಾಲಕೃಷ್ಣರವರ ಪರ ಕ್ಷೇತ್ರದ ಜನತೆಯಿದೆ ಹಾಗೂ ಲಿಂಗಾಯಿತ ಕುಟುಂಬ ಬೇಳೂರು ಗೋಪಾಲಕೃಷ್ಣರವರ ಬೆಂಬಲಕ್ಕೆ ನಿಂತಿದೆ ಎಂದರು.


ಗ್ರಾಮ ಪಂಚಾಯತಿ ಮಾಜಿ ಸದಸ್ಯ ರಾಜಶೇಖರಗೌಡ ಮಾತನಾಡಿ, ಲಿಂಗಾಯಿತ ಜಾತಿಯ ಬಗ್ಗೆ ಹಾಲಪ್ಪನವರ ಕಡೆಯವರು ಯಾವ ರೀತಿಯಲ್ಲಿ ಹಿಂಬದಿಯಿಂದ ಮಾತನಾಡುತ್ತಿದ್ದಾರೆ ಎಂಬುದು ವಿಡಿಯೋ ನಮ್ಮ ಬಳಿ ಇದೆ. ಈ ಲಿಂಗಾಯಿತ ಜಾತಿಯನ್ನು ಒಡೆಯುವ ಯತ್ನ ಮಾಡಿದರೆ ಬಿಜೆಪಿಗೆ ಲಿಂಗಾಯಿತರಿಂದ ಬೀಳುವ ಮತಕ್ಕೂ ಕಲ್ಲು ಹಾಕಿಕೊಳ್ಳುತ್ತಾರೆ. ಲಿಂಗಾಯಿತ ಕುಟುಂಬದ ಮನೆ ಒಡೆಯುವ ಕೆಲಸ ತಕ್ಷಣ ನಿಲ್ಲಿಸಬೇಕೆಂದರು.


ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ವಸ್ತುವಾರಿ ಜಯಶೀಲಪ್ಪ ಗೌಡ, ಬ್ರಹ್ಮೆಶ್ವರ ಸಂದೀಪ್ ಪಟೇಲ್, ರಾಜಶೇಖರ ಗೌಡ, ಅಶೋಕ ಗೌಡ, ಸಂತೋಷ, ವಕೀಲ ಬಸವರಾಜ ಗಗ್ಗ, ಜಯಣ್ಣಗೌಡ, ಶೇಖರಪ್ಪಗೌಡ, ಪ್ರಶಾಂತ, ಗಣೇಶ್ ಬಾಳೆಕೊಪ್ಪ, ವಿಜೇತಗೌಡ, ಗಣೇಶ ಹೆಬೈಲು, ರೋಹಿತ್, ಯೋಗೇಂದ್ರ, ಶೇಖರಪ್ಪ, ಡಿ.ಕೆ ಶಿವಕುಮಾರ್ ಬಳಗದ ಕಾರ್ಯದರ್ಶಿ ಗಣೇಶ್, ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!