ಧಣಿದಿರುವ ಆರಗ, ಕಿಮ್ಮನೆಗೆ ವಿಶ್ರಾಂತಿ ಕೊಟ್ಟು ಯುವಕರಿಗೆ ಈ ಬಾರಿ ಆದ್ಯತೆ ನೀಡಿ ; ಮತದಾರರಿಗೆ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ ಕಿವಿಮಾತು
ಹೊಸನಗರ: ಶರಾವತಿ, ಚಕ್ರಾ, ಸಾವೆಹಕ್ಲು ಮುಳುಗಡೆ ಸಂತ್ರಸ್ತರ ಸಮಸ್ಯೆಗಳು ಕ್ಷೇತ್ರದಲ್ಲಿ ಇಂದಿಗೂ ಜೀವಂತವಾಗಿವೆ. ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಕಳೆದ ನಾಲ್ಕು ದಶಕಗಳಿಂದ ಆಡಳಿತ ನಡೆಸಿದ ಎಲ್ಲಾ ರಾಷ್ಟೀಯ ಪಕ್ಷಗಳ ಜನಪ್ರತಿನಿಧಿಗಳು ಸೋತಿದ್ದಾರೆ. ಇದಕ್ಕಾಗಿ ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ತಮ್ಮ ಮತ ನೀಡುವ ಮೂಲಕ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್(ಜ್ಯಾ) ಸರ್ಕಾರ ಅಧಿಕಾರಿದ ಚುಕ್ಕಾಣಿ ಹಿಡಿಯುವಂತೆ ಆರ್ಶಿವಾದಿಸಬೇಕೆಂದು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್(ಜ್ಯಾ) ಪಕ್ಷದ ಅಭ್ಯರ್ಥಿ ಯಡೂರು ರಾಜಾರಾಮ್ ಮತದಾರರಲ್ಲಿ ಮನವಿ ಮಾಡಿದರು.
ತಾಲೂಕಿನ ಮೇಲಿನಬೆಸಿಗೆ ಗ್ರಾಮದಲ್ಲಿ ಸೋಮವಾರ ಮತದಾರರನ್ನು ಉದ್ದೇಶಿಸಿ ಪ್ರಚಾರ ಭಾಷಣ ಮಾಡಿದ ಅವರು, ಬರೀ ರಸ್ತೆ, ಚರಂಡಿ. ಮೋರಿಗಳ ನಿರ್ಮಾಣದಿಂದ ಕ್ಷೇತ್ರದ ಅಭಿವೃದ್ದಿ ಸಾಧ್ಯವಿಲ್ಲ. ದುಡಿಯುವ ಕೈಗಳಿಗೆ ಕೆಲಸದ ಅವಶ್ಯಕತೆ ಇದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ ಆಗಲಿ, ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಲಿ ಕ್ಷೇತ್ರಕ್ಕೆ ಈವರೆಗೂ ಯಾವುದೇ ಕೈಗಾರಿಕೆ, ಕಾರ್ಖಾನೆಗಳನ್ನು ತರುವಲ್ಲಿ ಸಂಪೂರ್ಣ ವಿಫಲ ಆಗಿದ್ದಾರೆ. ಇದರಿಂದ ಯುವಸಮೂಹ ಮಹಾನಗರಗಳತ್ತ ಮುಖಮಾಡ ತೊಡಗಿದ್ದಾರೆ. ಯುವ ಸಮೂಹಗಳ ಸ್ಥಳೀಯ ಕೊಂಡಿ ಕಳಚದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲಿದೆ. ಅಲ್ಲದೆ, ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯ ಆಗತ್ಯತೆಯೂ ಇದೆ. ಆದರೆ, ಇಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೇ ಹಾಲಿ ಹಾಗೂ ಮಾಜಿ ಶಾಸಕರು ಇದು ನಮ್ಮ ಕೊನೆಯ ಚುನಾವಣೆ. ದಯಮಾಡಿ ಗೆಲ್ಲಿಸಿ ಎಂದು ಮತದಾರರಲ್ಲಿ ಗೀಳಿಡುತ್ತಿರುವುದು ಸೋಜಿಗದ ಸಂಗತಿಯಾಗಿದೆ ಎಂದು ಆರೋಪಿಸಿದರು.
ತಾವೊಬ್ಬ ಯುವಕರಾಗಿದ್ದು ತಾವು ಕ್ಷೇತ್ರದ ಜನತೆಗೆ ನೀಡುವ ವಾಗ್ದಾನದಲ್ಲಿ ಯಾವುದೊಂದನ್ನು ಅಭಿವೃದ್ದಿ ಮಾಡದೇ ಇದ್ದಲ್ಲಿ ಅಂದೇ ನನ್ನ ಕೊನೆ ಚುನಾವಣೆ ಎಂದು ಮತದಾರ ಹೇಳಲಿ. ಅಂದೇ ತಾವು ರಾಜಕೀಯ ಸನ್ಯಾಸ ಸ್ವೀಕರಿಸುವ ಸವಾಲ್ ಹಾಕಿದರು.
ಪಕ್ಷದ ಹೊಸನಗರ ತಾಲೂಕು ಅಧ್ಯಕ್ಷ ವರ್ತೇಶ್, ಪ್ರಧಾನ ಕಾರ್ಯದರ್ಶಿ ತ್ರಿಣಿವೆ ಜಯರಾಮ ಶೆಟ್ಟಿ, ಪ್ರಮುಖರಾದ ಮೂಡಬಾಗಿಲು ರಮಾನಂದ್, ನಾಗರಕೊಡಿಗೆ ದಿಲೀಪ್, ಈರಣ್ಣ, ತೀರ್ಥಹಳ್ಳಿ ತಾಲೂಕಿನ ಪಕ್ಷದ ಪ್ರಮುಖರಾದ ರಾಘವೇಂದ್ರ, ಮಹೇಂದ್ರಗೌಡ, ಮಹಿಳಾಧ್ಯಕ್ಷೆ ಸೌಮ್ಯ ಸೇರಿದಂತೆ ಹಲವು ಉಪಸ್ಥಿತರಿದ್ದರು.