‘ಶರಾವತಿ ಹಿನ್ನೀರ ಹಬ್ಬ’ ಆಯೋಜಕರು ಆತ್ಮಾವಲೋಕನ ಮಾಡಿಕೊಳ್ಳಲಿ ; ಸೊನಲೆ ಶ್ರೀನಿವಾಸ್
ಹೊಸನಗರ: ಮಾ.4ರಂದು ಶಾಸಕ ಎಚ್.ಹಾಲಪ್ಪ ಅಧ್ಯಕ್ಷತೆಯಲ್ಲಿ ಶರಾವತಿ ಹಿನ್ನೀರು ಸಮೀಪ ಆಯೋಜಿಸಿರುವ ಶರಾವತಿ ಹಿನ್ನೀರು ಹಬ್ಬ ಆಚರಿಸುವ ಔಚಿತ್ಯವೇನು ? ಎಂದು ನಿವೃತ್ತ ಪ್ರಾಚಾರ್ಯ ಸೊನಲೆ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಮುಳುಗಡೆ ಎನ್ನುವುದು ಮಲೆನಾಡಿನ ಮೂಲ ನಿವಾಸಿಗಳ ರಕ್ತ ಕುಡಿದು ಗಹಗಹಿಸಿದ ರಕ್ಕಸ ಎಂಬ ಭಾವನೆಯಿದೆ. ಊರು, ಕೇರಿ, ಸಂಬಂಧಗಳನ್ನು ದೂರ ಮಾಡಿದ್ದೂ ಅಲ್ಲದೆ, ಮಣ್ಣಿನ ಭಾವನೆಗಳನ್ನೂ ಅಳಿಸಿ ಹಾಕಿದ ಮುಳುಗಡೆ ನಮ್ಮ ಹಿರಿಯರು ಕಣ್ಣೀರು ಹರಿಸಿದ ಘಟನೆ. ಅವರ ಕಣ್ಣೀರೆ ಮುಳುಗಡೆಯಾಗಿ ನಿಂತಿದೆಯೇನೋ ಎಂಬ ಭಾವನೆ ಹಲವು ಬಾರಿ ಹಿನ್ನೀರು ನೋಡಿದಾಗಿ ಉಂಟಾಗುತ್ತದೆ. ಆದರೆ ಆ ನೋವಿನ ದಿನದ ನೆನಪಿನಲ್ಲಿ ಇಂದು ಸಂಭ್ರಮಾಚರಣೆ ಮಾಡಲು ಮುಂದಾಗಿರುವುದು ತೀವ್ರ ಖಂಡನೀಯ ಹಾಗೂ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ನಾಚಿಗೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿನ ಯುವ ಜನತೆ ಇಂತಹ ಮೌಢ್ಯದ ಆಚರಣೆ ಕುರಿತು ಅವಲೋಕನ ಮಾಡಬೇಕಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು ಎಂದು ಅವರು ಹೇಳಿದ್ದಾರೆ.