ಶಾಸಕ ಹಾಲಪ್ಪ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡದಂತೆ ಒತ್ತಾಯ | ಅಲಗೇರಿಮಂಡ್ರಿಯಲ್ಲಿ ಶಾಸಕರಿಂದ ನೊಂದ ಬಿಜೆಪಿ ಕೆಲ ಕಾರ‍್ಯಕರ್ತರ ಸಭೆ

0 36

ಹೊಸನಗರ: ಸಾಗರದಲ್ಲಿ ಶಾಸಕ ಎಚ್.ಹಾಲಪ್ಪ ಅವರ ಕಾರ‍್ಯವೈಖರಿ ಬಿಜೆಪಿ ತತ್ವ ಸಿದ್ದಾಂತಗಳಿಗೆ ವಿರುದ್ಧವಾಗಿದೆ. ಇದರಿಂದಾಗಿ ಪಕ್ಷದ ಕಾರ‍್ಯಕರ್ತರು ಎಂದು ಹೇಳಿಕೊಳ್ಳಲು ಕಾರ‍್ಯಕರ್ತರಿಗೆ ಮುಜುಗರವಾಗುತ್ತಿದೆ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತ ಆವಿನಹಳ್ಳಿ ಲೋಕೇಶ್ ಹೇಳಿದರು.


ತಾಲೂಕಿನ ಆಲಗೇರಿಮಂಡ್ರಿಯ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಬಿಜೆಪಿಯ ಕೆಲ ಕಾರ್ಯಕರ್ತರು ಏರ್ಪಡಿಸಿದ್ದ ಶಾಸಕರದಿಂದ ನೊಂದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅದು ಪಕ್ಷಕ್ಕೆ ಹಾಗೂ ಪಕ್ಷದ ಪ್ರತಿಯೊಬ್ಬ ಕಾರ‍್ಯಕರ್ತನಿಗೆ ಹೆಮ್ಮೆಯ ವಿಷಯ. ಆದರೆ ಸಾಗರ ಕ್ಷೇತ್ರದಲ್ಲಿ ಶಾಸಕ ಹಾಲಪ್ಪ ಅವರ ಕಾರ‍್ಯವೈಖರಿ ಪಕ್ಷದ ಸಾಮಾನ್ಯ ಕಾರ‍್ಯಕರ್ತರಿಗೆ ಭ್ರಮನಿರಸನ ಉಂಟು ಮಾಡಿದೆ. ಪಕ್ಷದ ಎಲ್ಲಾ ಸಿದ್ದಾಂತಗಳನ್ನು ಅವರು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಬಿಜೆಪಿಗೆ ತನ್ನದೇ ಆದ ಸಿದ್ದಾಂತವಿದೆ. ಅಲ್ಲಿ ಪಕ್ಷವೇ ಎಲ್ಲಕ್ಕಿಂತ ಹಿರಿದು, ವ್ಯಕ್ತಿ ಮುಖ್ಯವಲ್ಲ. ಸಾಗರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿಯೇ ಎರಡು ಬಣಗಳಾಗಿವೆ. ಪಕ್ಷದ ಸಿದ್ದಾಂತ, ಹಿಂದುತ್ವಕ್ಕೆ ಬದ್ಧರಾಗಿರುವವರಿಗೆ ಶಾಸಕರಿಂದ ಯಾವುದೇ ಮಾನ್ಯತೆ ಇಲ್ಲ. ಬದಲಾಗಿ, ಅವರನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.


ದೇಶ, ರಾಜ್ಯದೆಲ್ಲೆಡೆ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಹಾಗಾಗಿ ಸಾಗರ ಕ್ಷೇತ್ರದಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳು ಏನೂ ವಿಶೇಷತೆಯಿಂದ ಕೂಡಿಲ್ಲ. ಸಿಗಂದೂರು ಸೇತುವೆ ಕಾಮಗಾರಿಯಲ್ಲಿ ಶಾಸಕರ ಪಾತ್ರವೇನೂ ಇಲ್ಲ. ಪಟಗುಪ್ಪ ಸೇತುವೆಯೊಂದೇ ಇವರ ಸಾಧನೆ. ಶಾಸಕ ಹಾಲಪ್ಪ ಅವರ ಕಾರ‍್ಯವೈಖರಿಯನ್ನು ಟೀಕಿಸಿದಲ್ಲಿ ಅವರನ್ನು ತಡೆಯಲು ಆಡಳಿತ ಯಂತ್ರದ ದುರುಪಯೋಗ ಆಗುತ್ತಿದೆ ಎಂದು ವಿಷಾದಿಸಿದರು.

ಪ್ರಶಾಂತ್ ಆವಿನಹಳ್ಳಿ ಮಾತನಾಡಿ, ಹಿಂದೆ ಅಭಿವೃದ್ಧಿಯ ಹಿತದೃಷ್ಠಿಯಿಂದ ಹಾಲಪ್ಪ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಹಗಲಿರುಳೂ ಶ್ರಮಿಸಿದ್ದೇವೆ. ಆದರೆ ಶಾಸಕರಾದ ಬಳಿಕ ಪಕ್ಷದ ಸಿದ್ದಾಂತ ಉಳಿಸಲು ಅವರು ವಿಫಲರಾಗಿದ್ದಾರೆ. ಹಿಂದೂಪರ ಸಂಘಟನೆಗಳನ್ನು ಅವರು ಕಡೆಗಣಿಸಿದ್ದಾರೆ. ಜಾತಿ ಹಾಗೂ ಹಣಬಲದಿಂದ ರಾಜಕಾರಣ ನಡೆಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರು, ನಿಸ್ವಾರ್ಥ ಸೇವೆ ಸಲ್ಲಿಸಿದವರು ಇಂದು ಮನೆಯಲ್ಲಿ ಉಳಿಯುವಂತಾಗಿದೆ. ಸಾಗರ ಕ್ಷೇತ್ರಕ್ಕೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಹಾಗೂ ಬಿಜೆಪಿಯ ತತ್ವ ಸಿದ್ದಾಂತಗಳಿಗೆ ಬದ್ಧರಾಗಿರುವವರು ಅಭ್ಯರ್ಥಿಯಾಗಬೇಕು. ಕಮ್ಯುನಿಷ್ಟ್ ಮನಸ್ಥಿತಿ ಇಟ್ಟುಕೊಂಡವರು ಬಿಜೆಪಿಯಲ್ಲಿ ಇರುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಬದಲಾವಣೆ ಅಗತ್ಯವಿದೆ. ಪಕ್ಷದ ವರಿಷ್ಠರು ಈ ಬಗ್ಗೆ ಗಮನ ಹರಿಸುವ ವಿಶ್ವಾಸವಿದೆ ಎಂದರು.

Leave A Reply

Your email address will not be published.

error: Content is protected !!