HDK ಸಿಎಂ ಆಗುವುದು ಶತಸಿದ್ದ – ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ | ಕಾಂಗ್ರೆಸ್-ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ಕಾರ್ಯಕರ್ತರು

0 71


ಹೊಸನಗರ: ಮೂಲತಃ ಕೃಷಿಕುಟಂಬದಿಂದ ಬಂದ ನಾನು ರಾಜಕಾರಣಕ್ಕೆ ಆಕರ್ಷಿತನಾದೆ. ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕನಾಗಿ ದುಡಿದೆ. ಕಿಮ್ಮನೆ ರತ್ನಾಕರ್ ಸಚಿವರಾಗಿದ್ದಾಗ ಮೆಣಸು ಮಾರಿ ಬಂದ ಹಣದಿಂದ ತಾವು ಖರೀದಿ ಮಾಡಿದ್ದ ಇನೋವಾ ಕಾರನ್ನು ಸುಮಾರು ಎರಡೂವರೆ ಲಕ್ಷ ಕಿ.ಮಿಗಳಷ್ಟು ಪಕ್ಷ ಸಂಘಟನೆಗಾಗಿ ಓಡಿಸಿದ್ದೆ. ಆದರೆ, ನನ್ನನ್ನು ಕಾಂಗ್ರೆಸ್ ಪಕ್ಷ ಗಾಣದ ಎತ್ತಿನ ರೀತಿ ದುಡಿಸಿಕೊಂಡಿತೆ ವಿನಃ ಸೂಕ್ತ ಸ್ಥಾನ ಮಾಡ ನೀಡದೆ ನಡು ನೀರಲ್ಲಿ ಕೈ ಬಿಟ್ಟಿತ್ತು. ಕಾಂಗ್ರೆಸ್ ಪಕ್ಷದ ನಾಯಕರ ಬೇಜವಬ್ದಾರಿ ತನಕ್ಕೆ ಬೇಸತ್ತು ರಾಜಕಾರಣ ತೊರೆದು ಕೃಷಿಯತ್ತ ಮುಖಮಾಡುವ ಎನ್ನುವಂತ ಮನಸ್ಥಿತಿಯಲ್ಲಿದ್ದ ಸಮಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮುಂದಾಗುವಂತೆ ಕರೆ ನೀಡಿ, 2023ರ ವಿಧಾನಸಭೆಗೆ ’ಬಿ’ ಫಾರಂ ನೀಡುವ ಮೂಲಕ ನನ್ನನ್ನು ಜೆಡಿಎಸ್(ಜ್ಯಾ) ಗುರುತಿಸಿದೆ ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ ತಿಳಿಸಿದರು.


ತಾಲೂಕಿನ ತ್ರಿಣಿವೆ ಗ್ರಾ.ಪಂ. ವ್ಯಾಪ್ತಿಯ ಇಟ್ಟಕ್ಕಿ, ತುಂಬ್ರಿ, ತೊಗರೆ, ಕಲ್ಲುವೀಡು ಅಬ್ಬಿಗಲ್ಲು ಗ್ರಾಮದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷದ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಕಾರ‍್ಯಕರ್ತರನ್ನು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿ, ಪಂಚರತ್ನ ಕಾರ್ಯಕರ್ಮದ ಮೂಲ ಉದ್ದೇಶವನ್ನು ಮತದಾರರ ಮನೆಮನೆಗೆ ಪ್ರಚಾರ ಮಾಡಿ ಮತಯಾಚನೆಗೆ ಮುಂದಾಗುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.


ಸ್ಥಳೀಯ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ. ರೈತರ ಹಾಗೂ ಕಾರ್ಮಿಕರ ಬೆನ್ನೆಲುಬಾಗಿ ನಿಲ್ಲುವ ಜೆಡಿಎಸ್, ಜನಪರ ಆಡಳಿತ ನೀಡುವ ಮೂಲಕ ಈಗಾಗಲೇ ರಾಜ್ಯದ ಮತದಾರರ ಮನ ತಲುಪಿದೆ. ಈ ಬಾರಿ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯ ಗಾಧಿ ಏರುವುದು ಶತಸಿದ್ದ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದ ಮರುಗಳಿಗೆಯಲ್ಲೆ ಕ್ಷೇತ್ರದ ದೀನದಲಿತರ, ಶೋಷಿತ ವರ್ಗದವರ ಕಣ್ಣೊರೆಸುವ ಕಾರ್ಯ ಆರಂಭವಾಗಲಿದೆ. ತಾವು ಚುನಾವಣೆ ಫಲಿತಾಂಶ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಸೋಲು-ಗೆಲುವು ಭಗಂತನ ಪ್ರಸಾದ. ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮರುಕ್ಷಣವೇ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.


ಇದೇ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ತ್ರಿಣಿವೆ ಜಯರಾಮ ಶೆಟ್ಟಿ ನೇತೃತ್ವದಲ್ಲಿ ಸ್ಥಳೀಯರಾದ ಸಂದೀಪ್ ಗೌಡ, ರಾಘು ಸೇರಿದಂತೆ ಹಲವವರು ಜೆಡಿಎಸ್ ಪಕ್ಷದ ಸೇರ್ಪಡೆಗೊಂಡರು.

ಸಭೆಯಲ್ಲಿ ಅಧ್ಯಕ್ಷ ವರ್ತೇಶ್, ಪ್ರಮುಖರಾದ ಮೂಡಬಾಗಿಲು ರಮಾನಂದ, ನಾಗರಕೊಡಿಗೆ ದಿಲೀಪ್‌ಗೌಡ, ಜಯನಗರ ವಾಸಪ್ಪಗೌಡ, ರಿಪ್ಪನ್‌ಪೇಟೆ ಈರಣ್ಣ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!