ಇಂತಹಾ ಸಂದರ್ಭ ಬಂದ್ರೆ ನಾನು ರಾಜಕೀಯ ನಿವೃತ್ತಿ ಆಗುತ್ತೇನೆ ; ಆರಗ ಜ್ಞಾನೇಂದ್ರ

0 52

ರಿಪ್ಪನ್‌ಪೇಟೆ : ಟಿಕೆಟ್‌ಗಾಗಿ ಅಥವಾ ಮಂತ್ರಿ ಸ್ಥಾನಕ್ಕಾಗಿ ದೆಹಲಿಗೆ ಹೋಗುವವನು ನಾನಲ್ಲ. ಇಂತಹ ಸಂದರ್ಭ ಬರುವುದಿಲ್ಲ. ಸಂದರ್ಭ ಬಂದಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಯಾವುದೇ ಕಾರಣ ಕೊಡದೆ ಇನ್ನೊಬ್ಬರಿಗಾಗಿ ಕೆಲಸ ಮಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅವರು ಕೋಡೂರಿನಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, 10 ಬಾರಿ ಒಂದೇ ಪಕ್ಷ ಒಂದೇ ಚಿಹ್ನೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 4 ಬಾರಿ ಶಾಸಕನಾಗಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ನಾನು ತತ್ವಕ್ಕಾಗಿ, ಸಿದ್ದಾಂತಕ್ಕಾಗಿ ರಾಜಕಾರಣ ಮಾಡುವವನು. ಈ ರಾಷ್ಟ್ರ ಕಟ್ಟುವುದು ನಮ್ಮ ಕೆಲಸ. ಇಲ್ಲಿ ನನ್ನ ಸ್ವಂತಿಕೆ ಇಲ್ಲ. ಶಾಸಕನಾಗಬೇಕು ಮಂತ್ರಿ ಆಗಬೇಕು ಎಂದಿಲ್ಲ. ಎಲ್ಲರ ನೆರವಿನಿಂದ ನಾನು ಬೆಳೆದಿದ್ದೇನೆ. ನನ್ನ ಕಾರ್ಯಕರ್ತರು ನನಗೆ ದೇವರು ಸಮಾನ ಹಾಗಾಗಿ ಅವರು ಚುನಾವಣೆ ಸಂದರ್ಭದಲ್ಲಿ ತೊಡೆ ತಟ್ಟಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷ ಅದು ಬಿಜೆಪಿ ಪಕ್ಷ ಎಂದು ಹೇಳಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೊಂಡ ಯೋಜನೆಗಳ ಬಗ್ಗೆ ವಿವರಿಸಿ, ನಮಗೆ ಬರುವ ಶೇ.80 ರಷ್ಟು ಕಾಯಿಲೆ ಕುಡಿಯುವ ನೀರಿನಿಂದ ಬರುತ್ತದೆ. ಅದಕ್ಕಾಗಿ ಶುದ್ಧ ಕುಡಿಯುವ‌ ನೀರಿಗಾಗಿ ಜೆಜೆಎಂ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ 90 ಸಾವಿರ ಕೋಟಿ ರೂ. ಕೊಟ್ಟಿದೆ. ಕೋಡೂರು ಗ್ರಾಪಂನ ಮೂರು ಬೂತ್ಗೆ 8 ಕೋಟಿ 95 ಲಕ್ಷ ರೂ. ಕೊಡಲಾಗಿದೆ ಎಂದರು.

ಅಡಿಕೆ ಬೆಳೆಗೆ ರಕ್ಷಾ ಕವಚವಾಗಿ ನಾನಿದ್ದೇನೆ. ಮಲೆನಾಡಿನ ಜನ ಆರ್ಥಿಕವಾಗಿ ಸಬಲರಾಗಲು ಅಡಿಕೆ ಬೆಳೆಯೇ ಮುಖ್ಯ ಕಾರಣ ಎಂದ ಅವರು, ಕಳೆದೆರಡು ವರ್ಷದಲ್ಲಿ 3,254 ಕೋಟಿ ರೂ. ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿಗಾಗಿ ಹಣ ತಂದಿದ್ದೇನೆ. ಕೋಡೂರು ಗ್ರಾಪಂ ಒಂದಕ್ಕೆ 46,07,93,000 ರೂ. ನೀಡಲಾಗಿದೆ ಎಂದರು.

ಒಂದೂ ರಸ್ತೆಯನ್ನು ಮಾಡದವರು ಮತ್ತೆ ಚುನಾವಣೆಗೆ ನಿಂತಿದ್ದಾರೆ. ನಾವಿಬ್ಬರು ಒಟ್ಟಾಗಿದ್ದೇವೆ. ಈ ಬಾರಿ ಗೆಲುವು ನಮ್ಮದೇ ಎಂದು ಹೇಳುವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ ಮಂಜುನಾಥಗೌಡ ವಿರುದ್ಧ ಹರಿಹಾಯ್ದ ಅವರು, ಒಟ್ಟಾದ್ರೆ ಏನು ಭೂಕಂಪ ಆಗುತ್ತಾ ? ಒಂದೇ ಹಾರ ಇಬ್ರು ಕೊರಳಿಗೆ ಹಾಕಿಕೊಂಡು ಓಡಾಡುತ್ತಿದ್ದಾರೆ. ಅಭಿವೃದ್ಧಿಗೆ ಜನ ಮತ ಕೊಡುವುದಾದರೆ ಅವರಿಗೆ ಈ ಬಾರಿ ಠೇವಣಿ ಸಹ ಸಿಗುವುದಿಲ್ಲ ಎಂದರು.

ಇವ್ರು ಕಳೆದ 10 ವರ್ಷ ಏನ್ ಮಾಡಿದ್ದಾರೆ ಅಂದ್ರೆ ಭಾಷಣ, ಧರಣಿ ಸತ್ಯಾಗ್ರಹ, ಪಾದಯಾತ್ರೆ ಮಾಡಿದ್ದು ಬಿಟ್ರೆ ಮತ್ತೇನು ಮಾಡಿದ್ದಾರೆ ? ಎಂದು ಪ್ರಶ್ನಿಸಿದ ಗೃಹ ಸಚಿವರು, ನನ್ನ ಕಾಲದಲ್ಲಿ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಸಾಕಷ್ಟು ಹಣ ತಂದ್ದಿದ್ದೇನೆ. ಇವರು ಏನು ಮಾಡಿದ್ದಾರೆ. ಶಿಕ್ಷಣ ಸಚಿವರಾಗಿ ಏನು ಮಾಡಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ರವರ ವಿರುದ್ಧ ಹರಿಹಾಯ್ದರು.

ನಾನು ಸುಮಾರು 45 ವರ್ಷದಿಂದ ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 6 ತಿಂಗಳು ಜೈಲಿಗೆ ಹೋಗಿದ್ದೆ ಅಲ್ಲಿಂದ ಬಂದವನೆ ನನ್ನ ಕುಟುಂಬ ವಯಕ್ತಿಕ ಜೀವನದ ಬಗ್ಗೆ ತಿರುಗಿ ನೋಡದೆ ನಗಣ್ಯ ಮಾಡಿ ಬಡವರ ಆಸಕ್ತರ ಕಣ್ಣೀರೊರೆಸುವ ಕಾಯಕದಲ್ಲಿ ನಾನನ್ನು ನಾನು ತೊಡಗಿಸಿಕೊಂಡಿದ್ದೇನೆ. ನಾನು ನಿರ್ಧರಿಸಿದ್ದೇನೆ ಇದು ನನ್ನ ಕೊನೆಯ ಚುನಾವಣೆ ಎಂದರು.

ಇದೇ ಸಂದರ್ಭದಲ್ಲಿ ಅನೇಕ ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಗ್ರಾಪಂ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ ಮಂಜುನಾಥ್, ಆರ್.ಟಿ ಗೋಪಾಲ್, ತಾಲೂಕು ಬಿಜೆಪಿ ಅಧ್ಯಕ್ಷ ಬಿಳಗೋಡು ಗಣಪತಿ, ಕೋಡೂರು ಗ್ರಾಪಂ ಸದಸ್ಯರು, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಪುಟ್ಟಪ್ಪ, ಅರುಣ್ ಕುಮಾರ್, ಬಿಜೆಪಿ ಕಾರ್ಯಕರ್ತರು ಇದ್ದರು.

Leave A Reply

Your email address will not be published.

error: Content is protected !!