ಲಾರಿ ಅಪಘಾತ ; ರಾಜ್ಯ ಹೆದ್ದಾರಿಯಲ್ಲಿ ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್ !
ರಿಪ್ಪನ್ಪೇಟೆ: ಸಮೀಪದ ಸೂಡೂರು ಗ್ರಾಮದ ಸೇತುವೆ ಸಮೀಪ ರಿಪ್ಪನ್ಪೇಟೆ – ಆಯನೂರು ರಾಜ್ಯ ಹೆದ್ದಾರಿಯಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಒಂದು ಕಿಲೋ ಮೀಟರ್ ಗೂ ಅಧಿಕ ದೂರ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಇಂದು ನಡೆದಿದೆ.

ಕುಂದಾಪುರ ಕಡೆಯಿಂದ ಶಿವಮೊಗ್ಗ ಕಡೆ ಚಲಿಸುತ್ತಿದ್ದ ಕಲ್ಲಿದ್ದಲು ತುಂಬಿದ ಲಾರಿಯೊಂದು ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಗುದ್ದಿದ ಪರಿಣಾಮ ಲಾರಿಯ ಮುಂಭಾಗ ಜಖಂಗೊಂಡಿದ್ದು, ಚಾಲಕ ಹಾಗೂ ನಿರ್ವಾಹಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ದಿಢೀರನೆ ಶಿವಮೊಗ್ಗ ಕಡೆಯಿಂದ ಹೊಸನಗರ ಕಡೆ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ನಡೆದ ಅಪಘಾತವನ್ನು ಗಮನಿಸದೆ ನುಗ್ಗಿದ ಪರಿಣಾಮ ಇನ್ನೊಂದು ಅಪಘಾತವಾಗುವ ಘಟನೆ ತಪ್ಪಿದೆ. ಹಾಗೂ ಲಾರಿಯನ್ನು ತೆರವುಗೊಳಿಸುವಲ್ಲಿ ಖಾಸಗಿ ಬಸ್ ಅಡ್ಡಿಯುಂಟಾಗಿತ್ತು.

ಸತತ ಐದು ಗಂಟೆಗಳ ಕಾಲ ಸಂಚಾರ ಅರ್ಥವ್ಯಸ್ತಗೊಂಡಿದ್ದು, ತಾತ್ಕಾಲಿಕವಾಗಿ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಸ್ಥಳಕ್ಕೆ ಆಗಮಿಸಿದ ಆಯನೂರು ಪೊಲೀಸರು ಲಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.