ವರುಣನ ಅಬ್ಬರಕ್ಕೆ ಹಲವೆಡೆ ಅನಾಹುತ : ಶಾಸಕ ಬೇಳೂರು ಭೇಟಿ, ಪರಿಶೀಲನೆ
ರಿಪ್ಪನ್ಪೇಟೆ: ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಕಳಸೆ ಗ್ರಾಮದಲ್ಲಿ ಭಾರೀ ಮಳೆ, ಗಾಳಿಯಿಂದಾಗಿ ಬೃಹತ್ ಗಾತ್ರದ ಮರವೊಂದು ವಾಸದ ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಮತ್ತು ಕೊಟ್ಟಿಗೆ ಹಾನಿಗೀಡಾಗಿದ್ದು ಸ್ಥಳಕ್ಕೆ ಕ್ಷೇತ್ರದ ಶಾಸಕ ಗೋಪಾಕೃಷ್ಣ ಬೇಳೂರು ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ಪರಿಹಾರ ಕೊಡಿಸುವ ಭರವಸೆ ನೀಡಿ ತಮ್ಮ ವೈಯಕ್ತಿಕ ನೆರವು ನೀಡಿದರು.
ಗ್ರಾಮ ಪಂಚಾಯ್ತಿ ಪಿಡಿಓರವರನ್ನು ಕರೆದು ಇವರಿಗೆ ತಕ್ಷಣವೇ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳನ್ನು ಕರೆದು ನಾಳೆಯೇ ಸರ್ಕಾರದ ತುರ್ತು ಪರಿಹಾರದ ಚೆಕ್ ನೀಡುವಂತೆ ತಿಳಿಸಿ ತಾಯಿ-ಮಗಳು ಅಳುವುದನ್ನು ಕಂಡು ಧೈರ್ಯ ತುಂಬಿದ ಅವರು, ಭಯಪಡುವ ಅಗತ್ಯವಿಲ್ಲ ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿ ಹೀಗೆ ಆಗಿದೆ ಎಂದು ದೂರವಾಣಿ ಮೂಲಕ ತಿಳಿಸುತ್ತಿದ್ದಂತೆ ಬೇರೆ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಘಟನಾ ಸ್ಥಳಕ್ಕೆ ಬಂದಿದ್ದೇನೆಂದು ಹೇಳಿದಾಗ ಅಭಿಮಾನಿಗಳು ಕಾರ್ಯಕರ್ತರುಗಳು ಜಯಘೋಷ ಕೂಗಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ತಾ.ಪಂ.ಮಾಜಿ ಸದಸ್ಯರಾದ ಬಿ.ಜಿ.ಚಂದ್ರಮೌಳಿಗೌಡ, ಎರಗಿ ಉಮೇಶ, ಯೋಗೀಶ ಬೆಳ್ಳೂರು, ಹರತಾಳು ಗ್ರಾ.ಪಂ.ಅಧ್ಯಕ್ಷ ಎಸ್.ಈ.ಶಿವಪ್ಪ, ಕಲ್ಲೂರು ತೇಜಮೂರ್ತಿ, ಡಿ.ಈ.ಮಧುಸೂದನ್, ಗಣಪತಿ ಗವಟೂರು, ಉಲ್ಲಾಸ, ರಮೇಶ, ಜಿ.ಆರ್.ಗೋಪಾಲಕೃಷ್ಣ, ರವೀಂದ್ರ ಕೆರೆಹಳ್ಳಿ, ರವಿ ಆರ್ಟ್ಸ್, ಸಣ್ಣಕ್ಕಿ ಮಂಜು, ರಾವಣಕಟ್ಟೆ ನಾಗಪ್ಪ, ರವಿ ಬೆಳ್ಳೂರು, ಅವಡೆ ಶಿವಪ್ಪ, ಉಪತಹಶೀಲ್ದಾರ್ ಹುಚ್ಚರಾಯಪ್ಪ, ತಾ.ಪಂ.ಇಓ ನರೇಂದ್ರ, ಷಣ್ಮುಖಪ್ಪ ನೇರಲಿಗೆ, ರಾಮಪ್ಪ ಇನ್ನಿತರರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

ಗೋಡೆ, ಮೇಲ್ಛಾವಣಿ ಕುಸಿದು ಅಪಾರ ಹಾನಿ :
ಭಾರಿ ಮಳೆ, ಗಾಳಿಯಿಂದಾಗಿ ವಾಸದ ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದು ಹೋದ ಘಟನೆ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಳ್ಳಿ ಗ್ರಾಮದ ಮಜರೆ ಕಲ್ಯಾಣಪುರದಲ್ಲಿ ನಡೆದಿದೆ.
ರಿಪ್ಪನ್ಪೇಟೆ ಸಮೀಪದ ಆಲವಳ್ಳಿ ಕಲ್ಯಾಣಪುರ ಗ್ರಾಮದ ಕೃಷ್ಣ ಹೆಗಡೆ ಎಂಬುವರ ವಾಸದ ಮನೆಯ ಹಿಂಭಾಗದ ಗೋಡೆ ಹಾಗೂ ಮೇಲ್ಛಾವಣಿ ಕುಸಿದಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಹೇಳಲಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೋಡೆ ಕುಸಿತ :
ಹೊಸನಗರದ 10ನೇ ವಾರ್ಡ್ನ ನಿವಾಸಿ ಭಾಸ್ಕರಣ್ಣ ಬಿನ್ ಚಿನ್ನಯ್ಯ ಎಂಬುವವರ ಮನೆಯ ಗೋಡೆ ಕುಸಿತವಾಗಿರುವ ಬಗ್ಗೆ ವರದಿಯಾಗಿದೆ. ಹೊಸನಗರದ ಕಸಬಾ ಗ್ರಾಮ ಆಡಳಿತಾಧಿಕಾರಿ ಕೌಶಿಕ್ ಹಾಗೂ ಗ್ರಾಮ ಸಹಾಯಕ ಅಶೋಕರವರು ವಿಷಯ ತಿಳಿದ ತಕ್ಷಣ ಭಾಸ್ಕರ ಎಂಬುವವರ ಮನೆಗೆ ಆಗಮಿಸಿ ಮನೆ ಗೋಡೆ ಬಿದ್ದ ಬಗ್ಗೆ ಪರಿಶೀಲನೆ ನಡೆಸಿ ಕಂದಾಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.