ಪಿಎಸ್‌ಐ ಹಗರಣದ ರೂವಾರಿಗಳಿಂದ ಆರಗ ಜ್ಞಾನೇಂದ್ರ ಪರ ಚುನಾವಣೆ ಪ್ರಚಾರ ; ಕಿಮ್ಮನೆ ರತ್ನಾಕರ್ ಆರೋಪ

0 36



ರಿಪ್ಪನ್‌ಪೇಟೆ : ಪಿಎಸ್‌ಐ ಹಗರಣದ ರೂವಾರಿಗಳಾದ ದಿವ್ಯಹಾಗರಗಿ, ಸ್ಯಾಂಟರ್‌ರವಿ ಮತ್ತು ಎನ್.ಡಿ.ಪಾಟೀಲ್ ಇವರು ತೀರ್ಥಹಳ್ಳಿ ವಿಧಾನಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಓಡಾಡುತ್ತಿದ್ದಾರಂತೆಂದು ಹೇಳಲಾಗುತ್ತಿದೆ ಎಂದು ಮಾಜಿ ಸಚಿವ, ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ಹುಂಚ ಹೋಬಳಿ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಗ್ಗಲಿಜಡ್ಡು, ತಳಲೆ, ಕಗ್ಗಚ್ಚಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಮೂವರು ಭ್ರಷ್ಟಾಚಾರದ ಹಗರಣದಲ್ಲಿ ಆರಗ ಜ್ಞಾನೇಂದ್ರ ಪರ ಕ್ಯಾಂಪೇನ್ ನಡೆಸುತ್ತಿದ್ದಾರೆ. ಅವರ ಕೋಟ್ಯಂತರ ಹಣದಲ್ಲಿ ನಾನು ಖಾಲಿ ಜೇಬಿನವನ್ನು ನನಗೆ ಪಕ್ಷ ನಿಷ್ಟಾವಂತ ಕಾರ್ಯಕರ್ತರೇ ಶಕ್ತಿಯಾಗಿದ್ದಾರೆಂದರು.

ತೀರ್ಥಹಳ್ಳಿ ಕ್ಷೇತ್ರದ ಘನತೆ ಗೌರವವನ್ನು ಕಾಪಾಡಲು ಮತ್ತು ಮತದಾನದ ಮೌಲ್ಯವನ್ನು ಹೆಚ್ಚಿಸಲು ನನಗೆ ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು.


ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದ ಶರಾವತಿ ಮುಳುಗಡೆಯಾಗಿ ಅಲ್ಲಿನ ರೈತರು ಮನೆ-ಮಠವನ್ನು ಕಳೆದುಕೊಂಡ ಸಂತ್ರಸ್ಥರು ಹೆಚ್ಚು ಹೊಸನಗರ ತಾಲ್ಲೂಕಿನಲ್ಲಿ ನೆಲೆಸಿದ್ದು ರಾಜ್ಯಕ್ಕೆ ಬೆಳಕು ನೀಡಿದ ಸಂತ್ರಸ್ಥರುಗಳು ಹಣತೆಯ ಬುಡದಲ್ಲಿನ ಕತ್ತಲೆಯಲ್ಲಿ ಬದುಕುವಂತಾಗಿದ್ದು ಅವರ ಜೀವನೋಪಾಯಕ್ಕಾಗಿ ಬಗರ್‌ಹುಕುಂ ಜಮೀನು ಸಾಗುವಳಿ ಮಾಡಿರುವ ರೈತರಿಗೆ ಹಕ್ಕು ಪತ್ರ ನೀಡುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದೆ ಈ ಬಗ್ಗೆ ನಾನು ಸರ್ಕಾರದ ಗಮನಸೆಳೆಯುವ ಉದ್ದೇಶದಿಂದಾಗಿ ಪಾದಯಾತ್ರೆ ನಡೆಸಲಾಗಿದ್ದು ಆಗ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರು 15 ದಿನದೊಳಗೆ ನಿರಾಶ್ರಿತರಿಗೆ ಹಕ್ಕುಪತ್ರ ಕೊಡುವುದಾಗಿ ಭರವಸೆ ನೀಡಿದ ಡಬಲ್ ಇಂಜಿನ್ ಸರ್ಕಾರದವರಿಗೆ ಗ್ರಾಮೀಣ ರೈತರ ಬವಣೆ ತಿಳಿಯಲ್ಲಿಲ್ಲವೇ ಎಂದ ಅವರು, ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ನಿಂದಾಗಿ ಡಾಂಬರ್ ರಸ್ತೆಗಳು ಹಪ್ಪಳದಂತೆ ಬರಿಗೈಯಲ್ಲೇ ಕಿತ್ತು ಬರುತ್ತಿವೆ ಎಂದರು.

ನಮ್ಮ ತಂದೆ ಬಂಗಾರಪ್ಪಜೀಯವರ ಅಭಿಮಾನಿ ದೇವರುಗಳು ನೀವು ಅವರನ್ನು ಕಂಡಂತೆ ನಾನು ನಿಮ್ಮಗಳನ್ನು ತಂದೆಯ ಸ್ಥಾನದಲ್ಲಿಟ್ಟು ನೋಡುವ ಪುಣ್ಯ ನನಗೆ ಬಂದಿದೆ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಜೈಕಾರದ ಕೂಗು ಮೊಳಗಿತು.


ಗ್ಯಾರಂಟಿ ಕಾರ್ಡ್ ಮತ್ತು ಉಚಿತ 200 ಯೂನಿಟ್ ವಿದ್ಯುತ್ ಸೇರಿದಂತೆ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ 10 ಕೆ.ಜಿ. ಅಕ್ಕಿ ಹೀಗಿ ಹಲವು ಜನಹಿತ ಕಾರ್ಯಕ್ರಮಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾರ್ಯಗತಗೊಳಿಸುವುದಾಗಿ ಹೇಳಿ, ನಮ್ಮ ಕಾರ್ಯಕರ್ತರು ಈ ಗ್ಯಾರಂಟಿ ಕಾರ್ಡ್ ಕುರಿತು ಮತದಾರರಲ್ಲಿ ಮನವರಿಕೆ ಮಾಡುವಂತೆ ಮನವಿ ಮಾಡಿ ಬಂಗಾರಪ್ಪಾಜಿ ಮತ್ತು ಕಾಗೋಡು ತಿಮ್ಮಪ್ಪನವರ ಭಾವಚಿತ್ರ ಹಾಕಿಕೊಂಡು ಮತಕೇಳಿದರೆ ಪುಕ್ಕಟ್ಟೆ ಮತ ಬರುತ್ತದೆಂದು ಹೇಳಿ ಈಗಾಗಲೇ ನಮ್ಮ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್‌ನಲ್ಲಿ ನನ್ನ ಮತ್ತು ಈ ಇಬ್ಬರ ಫೋಟೋ ಹಾಕಿಕೊಂಡು ಮನೆಮನೆಗೆ ತಲುಪಿರುವುದಾಗಿ ಹೇಳಿದರು.


ಇದೇ ಸಂದರ್ಭದಲ್ಲಿ ತಳಲೆಯ ಬೇಕರಿ ಸುರೇಶ್ ಮತ್ತು ಇನ್ನಿತರ ಯುವಕರ ತಂಡ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ ಪಕ್ಷಕ್ಕೆ ಮಧುಬಂಗಾರಪ್ಪನವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.


ಈ ಸಭೆಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಬಿ.ಪಿ.ರಾಮಚಂದ್ರ, ಶ್ವೇತಾ ಆರ್.ಬಂಡಿ, ಎಐಸಿಸಿ ವಕ್ತಾರ ಆದರ್ಶ ಹುಂಚದಕಟ್ಟೆ, ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಬಿ.ಜಿ.ಚಂದ್ರುಮೌಳಿಗೌಡ, ತಳಲೆ ಗೌರಮ್ಮ, ತಾ.ಪಂ ಮಾಜಿ ಅಧ್ಯಕ್ಷ ಕಲ್ಲೂರು ವಾಸಪ್ಪಗೌಡ, ಅಮ್ಮಿರ್‌ಹಂಜಾ ರಿಪ್ಪನ್‌ಪೇಟೆ, ಕಲ್ಲೂರು ತೇಜಮೂರ್ತಿ, ಕೆ.ಎಸ್.ಲೋಕಪ್ಪಗೌಡ, ಷಣ್ಮುಖಪ್ಪ, ವೀರಪ್ಪ, ಸಳ್ಳಿಸ್ವಾಮಿರಾವ್, ಮಳವಳ್ಳಿ ಮಂಜುನಾಥ, ಗುರು ಜಯನಗರ, ಧರ್ಮಪ್ಪ ಇನ್ನಿತರರು, ಪಕ್ಷದ ಮುಖಂಡರು ಹಾಜರಿದ್ದರು.

Leave A Reply

Your email address will not be published.

error: Content is protected !!