ಧರ್ಮ ಸಂಸ್ಕೃತಿ ಪರಂಪರೆ ಆದರ್ಶಗಳು ಪ್ರತಿಯೊಬ್ಬರಲ್ಲಿಯೂ ಬೆಳೆದು ಬರಬೇಕು ; ಶ್ರೀ ರಂಭಾಪುರಿ ಜಗದ್ಗುರುಗಳು

0 38


ಶಿಕಾರಿಪುರ : ಧರ್ಮ ಸಂಸ್ಕೃತಿ ಪರಂಪರೆ ಆದರ್ಶಗಳು ಪ್ರತಿಯೊಬ್ಬರಲ್ಲಿಯೂ ಬೆಳೆದು ಬರಬೇಕು. ಸ್ವಾಭಿಮಾನ ಕರ್ತವ್ಯ ನಿಷ್ಠೆ ನಿರಂತರ ಪ್ರಯತ್ನ ಇದ್ದಾಗ ಯಾವುದೇ ಕಾರ್ಯದಲ್ಲಿ ಜಯ ಸಿಗಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶುಕ್ರವಾರ ಸಮೀಪದ ಕಡೆನಂದಿಹಳ್ಳಿ ಕ್ಷೇತ್ರದಲ್ಲಿ ಆಯೋಜಿಸಿದ್ದ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡುವ ಕಾರ್ಯದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ತೆಲಂಗಾಣದ ಕೊಲನುಪಾಕ ಸುಕ್ಷೇತ್ರದ ಶ್ರೀ ಸೋಮೇಶ್ವರ ಮಹಾಲಿಂಗದಲ್ಲಿ ಅವತರಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ತಮ್ಮ ತತ್ವಾದರ್ಶಗಳು ಮತ್ತು ವಿಚಾರ ಧಾರೆಗಳ ಮೂಲಕ ಸಮಸ್ತ ಮನುಕುಲದ ಹಿತ ಬಯಸಿದ್ದಾರೆ. ಅಂತಹ ಮಹಿಮಾ ಪುರುಷರ ಭವ್ಯ ಮೂರ್ತಿ ಇಲ್ಲಿ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಇದು ಶ್ರೀ ಮಠದ ಚಾರಿತ್ರಿಕ ಇತಿಹಾಸದಲ್ಲಿ ಸ್ಮರಣೀಯ ಸಮಾರಂಭವಾಗಿದೆ. ಕಡೇನಂದಿಹಳ್ಳಿಯ ರೇವಣಸಿದ್ದೇಶ್ವರ ಸ್ವಾಮಿಗಳು ಮಳೆ ಮಲ್ಲೇಶ್ವರ ಕ್ಷೇತ್ರದಲ್ಲಿ ಸಂಕಲ್ಪದ ಸಾಧನೆಗಾಗಿ ಲೋಕಕಲ್ಯಾಣಕ್ಕಾಗಿ ನಿರಂತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವುದರ ಮೂಲಕ ಏನೊಂದು ಇಲ್ಲದ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮವನ್ನು ತಪೋಕ್ಷೇತ್ರವನ್ನಾಗಿ ಪರಿವರ್ತಿಸಿದ್ದಾರೆ. ಧರ್ಮ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದರೆ ಆ ಮಣ್ಣು ಪುಣ್ಯದ ಮಣ್ಣಾಗುತ್ತದೆ. ಶ್ರೀಗಳವರ ಜಪ ತಪ ಅನುಷ್ಠಾನಗಳ ಬಲದಿಂದ ಭಕ್ತರ ಸಹಕಾರದಿಂದ ಶ್ರೀ ಮಠ ಪ್ರಗತಿ ಪಥದಲ್ಲಿ ಮುನ್ನಡೆದಿದೆ. ಕಡೇನಂದಿಹಳ್ಳಿ ಶ್ರೀಗಳ ಬಹುದಿನಗಳ ಪ್ರತಿಮೆ ನಿರ್ಮಾಣದ ಕನಸಿಗೆ ಇಂದು ಚಾಲನೆ ದೊರೆತಿದೆ ಎಂದರು.


ದೇಶದಲ್ಲಿಯೇ ಅತಿ ಹೆಚ್ಚು ಅನುದಾನ ತಂದ ಲೋಕಸಭಾ ಸದಸ್ಯರಲ್ಲಿ ಲೋಕಸಭಾ ಸದಸ್ಯ ಬಿ. ವೈ.ರಾಘವೇಂದ್ರ ಅವರ ಸಾಮಾಜಿಕ ಕಳಕಳಿ ಅನುಪಮವಾಗಿದೆ. ಶಿಕಾರಿಪುರದಿಂದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಬಿ.ವೈ. ವಿಜಯೇಂದ್ರ ಅವರು ತಂದೆಯವರAತೆಯೇ ಸಾಮಾಜಿಕ ಇಚ್ಚಾಶಕ್ತಿಯುಳ್ಳವರಾಗಿದ್ದಾರೆ, ಅವರ ಸಂಕಲ್ಪದಂತೆ ಶಿಕಾರಿಪುರ ತಾಲೂಕು ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಶುಭ ಹಾರೈಸಿದರು.


ಕಡೇನಂದಿಹಳ್ಳಿ-ದುಗ್ಲಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಸ್ಥಾಪನೆ ಮಾಡುವದು ನಮ್ಮ ಬಹುದಿನಗಳ ಕನಸು. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದದಿಂದ ಅದರ ಕಾಮಗಾರಿಗೆ ಇಂದು ಚಾಲನೆ ದೊರೆತಿದೆ. ದೈವಾನುಗ್ರಹದಿಂದ ಇದಕ್ಕೆ ಪೂರಕವಾದ ಎಲ್ಲ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಿರಂತರವಾಗಿ ಮುನ್ನಡೆದುಕೊಂಡು ಬರುತ್ತಿವೆ ಎಂದರು.


ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಹೊಳೆಕೊಪ್ಪದ ರಾಮಪ್ಪನವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಂಧನೂರಿನ ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿಯ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಚನ್ನಗಿರಿಯ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್, ಮಾಜಿ ಎಂಎಡಿಬಿ ಅಧ್ಯಕ್ಷ ಕೆ. ಎಸ್. ಗುರುಮೂರ್ತಿ, ತಾಲೂಕು ವೀರಶೈವ ಮಹಾಸಭಾ ಅದ್ಯಕ್ಷ ಎನ್.ವಿ.ಈರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.


ಶಿವಾನಂದ ಶಾಸ್ತ್ರಿಗಳು, ಪುರೋಹಿತವರ್ಗ, ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ ಸಲಹಾ ಮತ್ತು ಸೇವಾ ಸಮಿತಿ ಸದಸ್ಯರು, ಶ್ರೀ ಗುರು ರೇವಣಸಿದ್ಧೇಶ್ವರ ಯುವಕ ಮಂಡಳಿ ಪದಾಧಿಕಾರಿಗಳು, ಮತ್ತು ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಇದ್ದರು.


ರಾಜ್ಯ ವೀರಶೈವ ಪುರೋಹಿತರ ಮಹಾಸಭಾ ಅಧ್ಯಕ್ಷ ಚನ್ನೇಶ ಶಾಸ್ತ್ರಿಗಳು ಸ್ವಾಗತಿಸಿದರು. ಚನ್ನಗಿರಿ ಶ್ರೀಗಳು ಭಕ್ತಿ ಗೀತೆ ಹಾಡಿದರು. ಶಿಕ್ಷಕ ನಾಗರಾಜ ನಿರೂಪಿಸಿದರು.
ಪ್ರಾತಃಕಾಲದಲ್ಲಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಬೃಹಸ್ಪತಿ ಹೋಮ ನಡೆಯಿತು.

Leave A Reply

Your email address will not be published.

error: Content is protected !!