ರೈತರ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ ; ಮಲೆನಾಡು ರೈತ ಹೋರಾಟ ಸಮಿತಿ ತೀವ್ರ ಖಂಡನೆ

0 46

ಶಿವಮೊಗ್ಗ: ಸೊರಬ ತಾಲ್ಲೂಕು ಕುಪ್ಪಗಡ್ಡೆ ತಾಳಗುಪ್ಪ ಗ್ರಾಮದ ಸರ್ವೇ ನಂ. 20 ರಲ್ಲಿ 6 ಕುಟುಂಬಗಳನ್ನು ಅರಣ್ಯಾಧಿಗಳು ಒಕ್ಕಲೆಬ್ಬಿಸಲು ಹೊರಟಿದ್ದು ಸುಮಾರು 20 ಎಕರೆ ಫಸಲು ಬಂದ ತೋಟವನ್ನು ನಾಶ ಮಾಡಲು ಹೊರಟಿದ್ದಾರೆ. ಇದನ್ನು ಮಲೆನಾಡು ರೈತ ಹೋರಾಟ ಸಮಿತಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ತೀ.ನಾ. ಶ್ರೀನಿವಾಸ್ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಳಗುಪ್ಪದ ಸರ್ವೇ ನಂ. 20 ರಲ್ಲಿ ಸುಮಾರು 6 ಕುಟುಂಬಗಳು ತೋಟ ಮಾಡಿಕೊಂಡಿದ್ದಾರೆ. ಹಲವು ವಷಗಳಿಂದ ಸಾಗುವಳಿ ಮಾಡಿ ಕೊಂಡು ಬಂದಿದ್ದಾರೆ. ಇವರ ಹೆಸರಿನಲ್ಲಿ ದಾಖಲೆಗಳೂ ಇವೆ. ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಸುಮಾರು 8 ಕಾಯ್ದೆಗಳು ಜೀವಂತವಾಗಿವೆ. ಅದರಲ್ಲಿ 1963 ರ ಕಾಯ್ದೆ ಪ್ರಕಾರ ಇಬ್ಬರು ರೈತ ರನ್ನು ಒಕ್ಕಲೆಬ್ಬಿಸುವ ಹಾಗೆಯೇ ಇಲ್ಲ. ಇನ್ನುಳಿದ ನಾಲ್ಕು ರೈತರು ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ. ಇವರ ಜೊತೆಗೆ 80 ಸಾವಿರ ಅರ್ಜಿಗಳಿವೆ. ಅವರೆಲ್ಲರನ್ನೂ ಬಿಟ್ಟು ಇವರಿಗೆ ಮಾತ್ರ ನೋಟಿಸ್ ನೀಡಿದ್ದಾರೆ ಎಂದು ದೂರಿದರು.

ಈ ಹಿಂದೆಯೂ ಸುಮಾರು 41 ರೈತರನ್ನು ಒಕ್ಕಲೆಬ್ಬಿಸಿದ್ದರು. 110 ಕ್ಕೂ ಹೆಚ್ಚು ಕೇಸ್ ಗಳನ್ನು ಅರಣ್ಯ ಅಧಿಕಾರಿಗಳು ದಾಖಲಿಸಿದ್ದರು. ಸರ್ಕಾರದ ಮಾತನ್ನೇ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ನನ್ನ ಜೀವ ಇರುವತನಕ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಆದರೆ, ಆ ಶಪಥ ಈಗ ಸುಳ್ಳಾಗಿದೆ ಎಂದರು.

ದಿ. ಬಂಗಾರಪ್ಪನವರ ಕ್ರಿಯಾಶೀಲತೆ ಈಗಿರುವ ಅವರ ಮಕ್ಕಳಾದ ಇಬ್ಬರಿಗೂ ಬರುವುದಿಲ್ಲ. ಒಬ್ಬರ ಮೇಲೊಬ್ಬರು ಹೇಳುತ್ತಾರೆ. ಆಡಳಿತ ಪಕ್ಷ ಬಗರ್ ಹುಕುಂ ಸಾಗುವಳಿದಾರರ ವಿರುದ್ಧವಾಗಿ ಕೆಲಸ ಮಾಡಿದರೆ ವಿರೋಧ ಪಕ್ಷ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ರೈತರ ನೋವು ಹೆಚ್ಚಾಗಿದೆ. ಇರುವ ತೋಟವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ರೈತರಿದ್ದಾರೆ. ಈಗಾಗಲೇ ರೈತರ ತೋಟಕ್ಕೆ ಜೆಸಿಬಿಗಳು ಬಂದು ನಿಂತಿವೆ. ತೋಟ ಉಳಿಸಿ ಕೊಳ್ಳಲು ಆ 6 ಕುಟುಂಬಗಳು ಹೆಣಗಾಡುತ್ತಿವೆ ಎಂದರು.

ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ತಡೆಯಲು ಹಲವು ಕಾನೂನಿಗಳಿದ್ದರೂ ಅಧಿಕಾರಿಗಳು ಕೇಳುತ್ತಿಲ್ಲ. ಅದರಲ್ಲೂ ಅರಣ್ಯಾಧಿಕಾರಿಗಳ ದೌರ್ಜನ್ಯ ಹೆಚ್ಚಾಗಿದೆ. ಅವರ ನೋವು ತಟ್ಟದೇ ಇರುವುದಿಲ್ಲ. ಆಡಳಿತ ಪಕ್ಷಕ್ಕೂ ಕೂಡ ರೈತರ ಶಾಪ ತಟ್ಟುತ್ತದೆ. ಕೂಡಲೇ ಸರ್ಕಾರ ಮಧ್ಯಪ್ರವೇಶ ಮಾಡಿ 6 ಕುಟುಂಬದ ರೈತರ 20 ಎಕರೆ ಅಡಿಕೆ ತೋಟವನ್ನು ನಾಶ ಮಾಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾ ಎಲ್.ವಿ. ಸುಭಾಷ್, ಕೃಷ್ಣಮೂರ್ತಿ ಹೆಗ್ಗೋಡು, ಲೋಕೇಶ್ ಇದ್ದರು.

Leave A Reply

Your email address will not be published.

error: Content is protected !!