ಇತಿಹಾಸದಲ್ಲೇ ಇಷ್ಟೊಂದು ವೇಗವಾಗಿ ರೈಲ್ವೆ ಕಾಮಗಾರಿಗಳು ಮುಗಿಯುತ್ತಿರುವುದು ಇದೇ ಮೊದಲು ; ಬಿವೈಆರ್
ಶಿವಮೊಗ್ಗ: ಶಿವಮೊಗ್ಗ ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡಿದ್ದು, ಇಲ್ಲಿನ ಸಂಚಾರ ವ್ಯವಸ್ಥೆ ಗಮನಿಸಿ ಸುಗಮ ಸಂಚಾರಕ್ಕಾಗಿ ಐದು ರೈಲ್ವೆ ಮೇಲ್ಸೇತುವೆ ಹಾಗೂ ಎರಡು ರೈಲ್ವೆ ಅಂಡರ್ಪಾಸ್ಗಳನ್ನು ಸುಮಾರು 140 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಅವರು ಇಂದು ಸವಳಂಗ ರಸ್ತೆಯ ಎಲ್ಸಿ-49, 39 ಕೋಟಿ ವೆಚ್ಚದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಸೋಮಿನಕೊಪ್ಪ ರೈಲ್ವೆ ಮೇಲ್ಸೇತುವೆ ಹಾಗೂ ಪಿಎನ್ಟಿ ಕಾಲೋನಿ ಬಳಿ ರೈಲ್ವೆ ಅಂಡರ್ ಪಾಸ್ ಒಟ್ಟೂ 27 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆ. ಭದ್ರಾವತಿ ತಾಲೂಕಿನ ಕಡದಕಟ್ಟೆ ಬಳಿ ಎಲ್.ಸಿ-34 ಮೇಲ್ಸೇತುವೆ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ವಿದ್ಯಾನಗರದ ರೈಲ್ವೆ ಮೇಲ್ಸೇತುವೆ 43 ಕೋಟಿ ವೆಚ್ಚದಲ್ಲಿ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ಡಿಸೆಂಬರ್ ಅಂತ್ಯಕ್ಕೆ ಎಲ್ಲಾ ಕಾಮಗಾರಿ ಮುಗಿದು ಸಾರ್ವಜನಿಕರ ಉಪಯೋಗಕ್ಕೆ ಸಿಗಲಿದೆ ಎಂದರು.
ಕೆಲವು ಕಡೆ ಅಡ್ಡರಸ್ತೆ ಕಾಮಗಾರಿಗಳು ಹೆಚ್ಚುವರಿಯಾಗಿ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಎರಡು ಸಣ್ಣ ಸೇತುವೆಗಳನ್ನು ಕೂಡ ಮಾಡಲಾಗುತ್ತಿದೆ ಎಂದರು.
ಇತಿಹಾಸದಲ್ಲೇ ಇಷ್ಟೊಂದು ವೇಗವಾಗಿ ರೈಲ್ವೆ ಕಾಮಗಾರಿಗಳು ಮುಗಿಯುತ್ತಿರುವುದು ಇದೇ ಮೊದಲು. ಇದಕ್ಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಶಿವಮೊಗ್ಗ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರೈಲ್ವೆ ಅಧಿಕಾರಿಗಳು ಕೂಡ ಅತ್ಯಂತ ಸಹಕಾರ ನೀಡಿದ್ದಾರೆ. ಶಿವಮೊಗ್ಗ ನಗರದ ಅಭಿವೃದ್ಧಿ ದೃಷ್ಟಿಯಿಂದ ಈ ಕಾಮಗಾರಿಗಳಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅತ್ಯಂತ ಅನುಕೂಲವಾಗಲಿದೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲಿನ ಇಡಿ ಕೇಸ್ಗೆ ಇದ್ದ ತಡೆಯನ್ನು ಹೈಕೋರ್ಟ್ ತೆರವುಗೊಳಿಸಿದ್ದು, ತನಿಖೆ ಮುಂದುವರಿಯಲು ಸೂಚಿಸಿರುವುದು ಡಿಕೆಶಿಗೆ ಹಿನ್ನಡೆಯಾಗಿದೆ ಎಂಬ ಪ್ರಶ್ನೆಗೆ ಕಾನೂನಿನ ಚೌಕಟ್ಟಿನೊಳಗೆ ಯಾರೂ ಕೂಡ ದೊಡ್ಡವರಲ್ಲ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು.
– ಬಿ.ವೈ. ರಾಘವೇಂದ್ರ, ಸಂಸದ

ಈ ಸಂದರ್ಭದಲ್ಲಿ ರೈಲ್ವೆ ಇಂಜಿನಿಯರ್ ರಾಜ್ಕುಮಾರ್, ಸ್ಮಾರ್ಟ್ ಸಿಟಿ ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ್, ಕರ್ನಾಟಕ ಜಲಮಂಡಳಿ ಕಾರ್ಯಪಾಲಕ ಅಭಿಯಂತರ ಸಿದ್ದಪ್ಪ, ಸ್ಥಳೀಯ ಕಾರ್ಪೊರೇಟರ್ ಇ. ವಿಶ್ವಾಸ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಜ್ಯೋತಿಪ್ರಕಾಶ್, ಮಾಲತೇಶ್, ದಿವಾಕರ ಶೆಟ್ಟಿ, ರಾಜೇಶ್ ಕಾಮತ್ ಮತ್ತಿತರರಿದ್ದರು.