ಶಿವಮೊಗ್ಗ : ಜಿಲ್ಲಾ ಕಾರಾಗೃಹದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಖಲೀಂ ಎಂಬ ಯುವಕ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ಕೈದಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಭಿಕ್ಷೆ ಬೇಡುತ್ತಿದ್ದ ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ಕಳವು ಮಾಡಿದ್ದ ಆರೋಪ ಎದುರಿಸುತ್ತಿದ್ದ ಕರುಣಾಕರ ದೇವಾಡಿಗ (24) ಎಂಬ ಯುವಕ ಕಳೆದ ರಾತ್ರಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ.
ಈ ಮೊದಲು ಖಲೀಂ ಸಾವನ್ನಪ್ಪಿದ ಪ್ರಕಾರದಲ್ಲಿ ಕುಟುಂಬಸ್ಥರು ಇದು ಸಾಧಾರಣ ಸಾವಲ್ಲ ಕೊಲೆ ಎಂದು ಆರೋಪಿಸಿದ್ದರು. ಇದರ ಮಧ್ಯೆ ಈಗ ಮತ್ತೊಂದು ಸಾವು ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೈದಿ ಮೇಲೆ ಆರೋಪ ಏನೂ ?
ಭದ್ರಾವತಿ ತಾಲೂಕು ಸುಣ್ಣದ ಹಳ್ಳಿಯ ಆಂಜನೇಯ ದೇವಾಲಯದ ಮುಂಭಾಗ ವೃದ್ದೆಯೊಬ್ಬರು ಭಿಕ್ಷೆ ಬೇಡಿಕೊಂಡು ದೇವಾಲಯದ ಆವರಣದಲ್ಲಿಯೇ ವಾಸ ಮಾಡುತ್ತಿದ್ದರು. ಕೈದಿ ಕರುಣಾಕರ ದೇವಾಡಿಗ ದೇವಾಲಯದ ಹುಂಡಿ ಕಳ್ಳತನಕ್ಕೆ ಎಂದು ಬಂದು, ಅಲ್ಲಿದ್ದ ಅಜ್ಜಿಯ ಮೈ ಮೇಲಿನ ಒಡವೆ ನೋಡಿ ಕೊಲೆ ಮಾಡಿ ಪರಾರಿಯಾಗಿದ್ದ.
ಈತನನ್ನು ಭದ್ರಾವತಿ ಪೇಪರ್ ಟೌನ್ ಪೊಲೀಸರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದ ಆಧಾರದ ಮೇಲೆ ಕೊಲೆ ಆರೋಪಿ ಕರುಣಾಕರ ದೇವಾಡಿಗನನ್ನು ಬಂಧಿಸಿದ್ದರು. ಕೊಲೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಈತನು ಮೂಲತಃ ಉಡುಪಿ ಜಿಲ್ಲೆಯವ. ಹಾಲಿ ಭದ್ರಾವತಿಯಲ್ಲೆ ವಾಸವಾಗಿದ್ದನು. ಈತ ಜೈಲಿಗೆ ಸೇರಿದ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದಕ್ಕಾಗಿ ಜೈಲ್ ನಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.