ತಾಲೂಕು ಮಟ್ಟದ ಕ್ರೀಡಾಕೂಟ ಸಮಾರಂಭದಲ್ಲಿ ಶಾಮಿಯಾನಕ್ಕೂ ಬರ ; ಅತಿಥಿ ಗಣ್ಯರಿಗೆ ನೆರಳಿನ ಭಾಗ್ಯ ವಿದ್ಯಾರ್ಥಿಗಳಿಗೆ ಬಿಸಿಲಿನ ಭಾಗ್ಯ ! ಎಂ.ಎಲ್.ಸಿ. ಬೋಜೇಗೌಡ ವಿಷಾದ
ರಿಪ್ಪನ್ಪೇಟೆ: ಕ್ರೀಡಾಕೂಟಗಳಿಗೆ ಸರ್ಕಾರ ನೀಡುವ ಅನುದಾನ ಬಹಳ ಕಡಿಮೆಯಿದ್ದು ಇದರಿಂದ ಒಂದು ಶಾಮಿಯಾನ ಹಾಕುವುದು ಕಷ್ಟವಾಗಿದೆ ಇನ್ನೂ ಬಹುಮಾನ ಮತ್ತು ಕ್ರೀಡಾ ಸಾಮಗ್ರಿಗಳ ಖರೀದಿ ಸೇರಿದಂತೆ ಊಟೋಪಚಾರಕ್ಕೆ ಗ್ರಾಮದಲ್ಲಿ ಕೊಡುಗೈ ದಾನಿಗಳನ್ನು ಅವಲಂಭಿಸಬೇಕಾದ ಅನಿರ್ವಾತೆ ಇದೆ ಎಂದು ಎಂ.ಎಲ್.ಸಿ ಎಸ್.ಎಲ್.ಬೋಜೇಗೌಡ ವಿಷಾದ ವ್ಯಕ್ತಪಡಿಸಿದರು.
ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಹೊಸನಗರ ತಾಲ್ಲೂಕು ಪದವಿ ಪೂರ್ವ ಕಾಲೇಜ್ಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಪದವಿ ಪೂರ್ವ ಕಾಲೇಜ್ಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇದೆೆ ಎಂದು ನಾನು ಸಾಕಷ್ಟು ಬಾರಿ ಈ ಹಿಂದಿನ ಬೊಮ್ಮಾಯಿ ಸರ್ಕಾರದಿಂದ ಹಿಡಿದು ಈಗಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಯಲ್ಲಿ ಚರ್ಚಿಸಲಾಗಿದ್ದರೂ ಕೂಡಾ ನಿರ್ಲಕ್ಷ್ಯ ವಹಿಸಿದ್ದಾರೆ. ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ ಗ್ರಾಮೀಣ ಪ್ರದೇಶದಲ್ಲಿ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶಾಲೆ ಕಾಲೇಜ್ಗಳನ್ನು ಮುಚ್ಚುವ ಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿ, ಈಗಾಗಲೇ ನಾನು ಸರ್ಕಾರದ ಮಟ್ಟದಲ್ಲಿ ಶಿಕ್ಷಕರ ಕೊರತೆಯ ಕುರಿತು ಧ್ವನಿ ಎತ್ತಿದ್ದು ಈವರೆಗೂ ಗಮನಹರಿಸದೇ ಇರುವುದರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದರು.

ಕ್ರೀಡೆ ಮನಸ್ಸಿಗೆ ಆರೋಗ್ಯ ಕೊಟ್ಟರೆ ಆರೋಗ್ಯವಂತ ವಿದ್ಯಾರ್ಥಿಯಾಗಲು ಸಾಧ್ಯ ಅದೇ ರೀತಿಯಲ್ಲಿ ಮಕ್ಕಳಿಗೆ ಉತ್ತಮ ನೀಡಿದಲ್ಲಿ ವಿದ್ಯಾರ್ಥಿ ಉತ್ತುಂಗಕ್ಕೇರಲು ಸಾಧ್ಯವಾಗುವುದೆಂದು ಹೇಳಿ ಸರ್ಕಾರ ಕ್ರೀಡಾಕೂಟಗಳಿಗೆ ನೀಡುವ ಅನುದಾನ ಕೇವಲ 10 ಸಾವಿರ ರೂ. ಅದರಿಂದ ಇಂದಿನ ದುಬಾರಿ ಬೆಲೆ ಏರಿಕೆಯಲ್ಲಿ ಏನು ತರಲು ಸಾಧ್ಯವೆಂದು ಹೇಳಿ ಪ್ರತಿಭಾ ಕಾರಂಜಿ ಮತ್ತು ಕ್ರೀಡಾಕೂಟಕ್ಕೆ ಉತ್ತೇಜನ ನೀಡುವುದರೊಂದಿಗೆ ಆರ್ಥಿಕಾ ಭದ್ರತೆಯೊಂದಿಗೆ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡುವ ಭರವಸೆ ನೀಡಿ ನೋಲು ಗೆಲುವಿನ ಸೋಪಾನ ಎಂದು ಹೇಳಿ ಸೋಲು ಎಂದು ಕೀಳರಿಮೆ ತೊರದೆ ಸತತ ಪ್ರಯತ್ನ ಮಾಡಿ ಗೆಲುವನ್ನು ಸಾಧಿಸುವುದೇ ಮನುಷ್ಯನ ನಿಜವಾದ ಗೆಲುವು ಎಂದರು.
ಅತಿಥಿ ಗಣ್ಯರಿಗೆ ನೆರಳಿನ ಭಾಗ್ಯ ವಿದ್ಯಾರ್ಥಿಗಳಿಗೆ ಬಿಸಿಲಿನ ಭಾಗ್ಯ
ಇಂದು ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಅತಿಥಿ ಗಣ್ಯರಿಗೆ ನೆರಳಿನಲ್ಲಿ ಕುಳಿತು ಗಂಟೆಗಳ ಕಾಲ ಭಾಷಣ ಮಾಡಿದರೆ ವಿದ್ಯಾರ್ಥಿಗಳು ಬಿಸಿಲಿನ ಝಳಕ್ಕೆ ತತ್ತರಿಸಿ ಹೈರಾಣದರು.
ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಮಹಮ್ಮದ್ ನಜಹತ್ ಉಲ್ಲಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಉಪನಿರ್ದೇಶಕ ಬಿ.ಕೃಷ್ಣಪ್ಪ, ಜಿ.ಪಂ.ಮಾ.ಸ.ಬಿ.ಪಿ.ರಾಮಚಂದ್ರ, ಅಮೃತ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ, ಸಿಡಿಸಿ ಕಾರ್ಯಾದ್ಯಕ್ಷ ಟಿ.ಡಿ.ಸೋಮಶೇಖರ್, ಉಪಾಧ್ಯಕ್ಷ ನಾಗೇಶ ಉಂಬ್ಳೆಬೈಲು, ತಾ.ಪಂ.ಮಾಜಿ ಅಧ್ಯಕ್ಷ ವಾಸಪ್ಪಗೌಡ, ದಿನೇಶ್ ಬಂಡಿ ಗ್ರಾ.ಪಂ.ಉಪಾಧ್ಯಕ್ಷೆ ವಿನೋಧ, ಸದಸ್ಯರಾದ ಮಂಜುಳಾ, ದೇವರಾಜ್, ಶಿವಮೊಗ್ಗ ಜಿಲ್ಲಾ ನಿವೃತ್ತ ಉಪನಿರ್ದೇಶಕ ನಾಗರಾಜ್ ವಿ.ಕಾಗಲ್ಕರ್, ಉದಯಕುಮಾರ್ ವಿ.ಚಂದ್ರಪ್ಪ ಗುಂಡುಪಲ್ಲಿ, ಹಾಲಪ್ಪ ಸಂಕೂರ್,ಎಂ. ಬಾಲಚಂದ್ರರಾವ್, ರಮೆಶ್ ಇನ್ನಿತರರು ಹಾಜರಿದ್ದರು. ಹಾಲಪ್ಪ ಸಂಕೂರ್ ಸ್ವಾಗತಿಸಿದರು.