ಶಿವಮೊಗ್ಗ : 1952ರಲ್ಲಿ ಮೊದಲ ಬಾರಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಾಗರ-ಹೊಸನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮುದ್ರಿಸಿದ್ದು ಎನ್ನಲಾದ ಕರಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ಚುನಾವಣಾಸಕ್ತರ ಗಮನ ಸೆಳೆದಿದೆ.
‘ವಂದೇ ಮಾತರಂ ಪದದಿಂದ ಆರಂಭವಾಗುವ ಕರಪತ್ರದ ಒಕ್ಕಣೆಯಲ್ಲಿ ನೊಗ ಕಟ್ಟಿದ ಜೊತೆ ಎತ್ತುಗಳ ಗುರುತಿಸಿರುವ ಪೆಟ್ಟಿಗೆಯಲ್ಲೇ ನಿಮ್ಮ ಓಟು ಹಾಕಬೇಕಾಗಿ ಪ್ರಾರ್ಥನೆ’ ಎಂದು ಅಂದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜವಾಹರಲಾಲ್ ನೆಹರೂ ಅವರ ಮನವಿ ಇದೆ.
ಆಗ ಮೈಸೂರು ಶಾಸನ ಸಭೆಗೆ ಸಾಗರ-ಹೊಸನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಉಮೇದುವಾರ ಎ.ಆರ್. ಬದರೀನಾರಾಯಣ್ ಹಾಗೂ ಶಿವಮೊಗ್ಗ ಜಿಲ್ಲಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಕೆ.ಜಿ.ಒಡೆಯರ್ ಪರವಾಗಿ ಮತ ಯಾಚಿಸಿ ಕರಪತ್ರ ಮುದ್ರಿಸಲಾಗಿದೆ. 1952ರ ಜನವರಿ 13ರಂದು ಮತದಾನ ಎಂದು ಉಲ್ಲೇಖಿಸಿರುವ ಕರಪತ್ರದಲ್ಲಿ ತೀರ್ಥಹಳ್ಳಿಯ ಪ್ರಭಾತ್ ಪ್ರಿಂಟಿಂಗ್ ಪ್ರೆಸ್ ಹೆಸರು ಉಲ್ಲೇಖಿಸಲಾಗಿದೆ.