ಪತ್ರಕರ್ತರಿಗೆ ಬದ್ಧತೆ ಉದ್ಯಮಕ್ಕೆ ವಿಶ್ವಾಸಾರ್ಹತೆ ಮುಖ್ಯ

0 41

ಶಿವಮೊಗ್ಗ: ವಿಶ್ವಾಸವೇ ಮರೆಯಾಗುತ್ತಿರುವ ಇಂದಿನ ದಿನದಲ್ಲೂ ಪತ್ರಿಕೋದ್ಯಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿದೆ ಎಂದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಿ.ಪಿ.ಮುರುಳೀಧರ್ ಹೇಳಿದರು.


ನಗರದ ಪ್ರೆಸ್‌ಟ್ರಸ್ಟ್‌ನಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರಿಗೆ ನೀಡುವ ಪ್ರಶಸ್ತಿಗಳು ಪತ್ರಿಕೋದ್ಯಮದ ವೃತ್ತಿಪರತೆಯತ್ತ ತುಡಿಯಲು ಕಾರಣವಾಗುತ್ತದೆ. ಮಾಧ್ಯಮ ಅಕಾಡೆಮಿ ಬಂದ ಮೇಲೆ ಪತ್ರಕರ್ತರನ್ನು ಗುರುತಿಸುವಂತ ಕೆಲಸ ಆಗುತ್ತಿದೆ. ವೃತ್ತಿಪರರಿಗೆ ಪ್ರಶಸ್ತಿಗಳನ್ನು ನೀಡಿ ಬೆನ್ನು ತಟ್ಟುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.


ಪತ್ರಕರ್ತರ ಸೇವೆ ಪರಿಗಣಿಸಿ ನೀಡುವ ಪುರಸ್ಕಾರದಿಂದ ಪತ್ರಿಕೋದ್ಯಮಕ್ಕೆ ಗರಿ ಮೂಡಿದೆ. ಪತ್ರಿಕೋದ್ಯಮವನ್ನು ಅವಸರದ ಸಾಹಿತ್ಯ ಎಂದು ಕರೆದರೂ ಪತ್ರಿಕೋದ್ಯಮದಲ್ಲಿ ಸಾಹಿತ್ಯಕ್ಕೆ ತನ್ನದೇ ಆದ ನಂಟಿದೆ ಎಂದರು.


ಪತ್ರಿಕೋದ್ಯಮ ಬಲಿಷ್ಠವಾಗಿ ಬೆಳೆಯಬೇಕು ಪತ್ರಕರ್ತರು ವೃತ್ತಿಬದ್ದತೆಯಿಂದ ಕೆಲಸ ಮಾಡ ಬೇಕು ಎನ್ನುವುದು ಸಮಾಜದ ನಿರೀಕ್ಷೆ. ಆದರೆ, ಇತ್ತೀಚೆಗೆ ಅವಸರದ ಪತ್ರಿಕೋದ್ಯಮದಲ್ಲಿ ಆ ವತ್ತಿ ಬದ್ಧತೆ ಕಡಿಮೆಯಾಗುತ್ತಿ ರುವುದು ಕಳವಳಕಾರಿ ಸಂಗತಿ ಎಂದ ಅವರು, ಅನೇಕ ಸವಾಲುಗಳ ಮಧ್ಯೆ ಸೇವೆ ಸಲ್ಲಿಸುವ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸನ್ಮಾನಗಳು, ಪುರಸ್ಕಾರ ಗಳಿಂದ ಪತ್ರಿಕೆಗಳನ್ನು ಗುರುತಿಸು ವಂತ ಕೆಲಸ ಆಗುತ್ತದೆ ಎಂದರು.


ಸರ್ಕಾರಿ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಪತ್ರಕರ್ತರು ಸರ್ಕಾರಿ ನೌಕರರಂತೆ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಲ್ಲಿ 12 ಮಂದಿ ಶಿವಮೊಗ್ಗ ಜಿಲ್ಲೆಯವರೇ ಇರುವುದು ಪತ್ರಿಕೋದ್ಯಮದಲ್ಲಿ ಶಿವಮೊಗ್ಗ ಜಿಲ್ಲೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ. ಇಂದು ಪ್ರಶಸ್ತಿಗಳನ್ನು ಲಾಭಿ ಮಾಡಿ ತೆಗೆದುಕೊಳ್ಳುವವರ ಮಧ್ಯೆ ಅರ್ಹತೆಯಿಂದ ಪ್ರಶಸ್ತಿ ಗಿಟ್ಟಿಸಿಕೊಳ್ಳುವುದು ದೊಡ್ಡ ಸವಾಲು. ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವುದು ಯುವ ಪತ್ರಕರ್ತರಲ್ಲಿ ಉತ್ಸಹ ಹೆಚ್ಚಿಸುತ್ತದೆ ಎಂದರು.


ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಮಾತನಾಡಿ, ಪತ್ರಕರ್ತರು ಪ್ರತಿನಿತ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಗ ಮಾತ್ರ ಉತ್ತಮ ಪತ್ರಕರ್ತರಾಗಿ ಹೊರ ಹೊಮ್ಮಲು ಸಾಧ್ಯ. ಪತ್ರಕರ್ತರನ್ನು ಸಮಾಜದ ಕಾವಲು ನಾಯಿ ಎನ್ನುತ್ತಾರೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಸಾಕು ನಾಯಿ ಎಂದು ವ್ಯಂಗ್ಯದಿಂದ ಕರೆಯಾಗುತ್ತಿದೆ. ಇದಕ್ಕೆ ಕಾರಣ ನಮ್ಮ ವ್ಯವಸ್ಥೆ. ಪತ್ರಕರ್ತರು ತಮ್ಮ ಸ್ವಾತಂತ್ರ್ಯದ ಮಿತಿಯ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ದೇಶಕ್ಕೆ ಕಷ್ಟಕಾಲ ಬಂದಾಗ ಹಾಗೂ ಚುನಾವಣೆ ಸಂದರ್ಭದಲ್ಲಿ ಪತ್ರಕರ್ತರ ಕೆಲಸ ಸವಾಲಿನಿಂದ ಕೂಡಿರುತ್ತದೆ. ಅದನ್ನು ವೃತ್ತಿಯಿಂದ ಜಯಿಸಿದಾಗ ಭವಿಷ್ಯವನ್ನು ರೂಪಿಸಿಕೊಳ್ಳಲು ನಮ್ಮಲ್ಲಿ ಹೊಸ ಶಕ್ತಿ ಹುಟ್ಟುತ್ತದೆ. ಪತ್ರಕರ್ತರಲ್ಲಿ ವ್ಯಕ್ತಿತ್ವ ಸಾಣೆ ಹಿಡಿಯುವಂತ ಕೆಲಸ ಆಗಬೇಗುತ್ತದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಇತ್ತೀಚೆಗೆ ಪ್ರಶಸ್ತಿಗಳು ಲಾಭಿಗೆ ಒಳಗಾಗಿವೆ. ಇದರ ನಡುವೆಯೂ ಅರ್ಹತೆಯಿಂದ ಪ್ರಶಸ್ತಿಗಳಿಸುವ ಪತ್ರಕರ್ತರು ನಮ್ಮೊಂದಿಗೆ ಇದ್ದಾರೆ. ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರಶಸ್ತಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಂದ್ರಹಾಸ ಹಿರೇಮಳಲಿ, ಕೆ.ತಿಮ್ಮಪ್ಪ ಹುಲಿಮನೆ, ನಾಗರಾಜ್ ನೇರಿಗೆ, ರಾಮಸ್ವಾಮಿ ಹುಲ್ಕೊಡು, ಹೊನ್ನಾಳಿ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಸಂಘದ ನಗರ ಕಾರ್ಯದರ್ಶಿ ಗೋ.ವ. ಮೋಹನಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಡಿ.ವತ್ಸಲ ಸೂರ್ಯನಾರಾಯಣ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ರಾಮಚಂದ್ರ ಗುಣಾರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ವಂದಿಸಿದರು.

Leave A Reply

Your email address will not be published.

error: Content is protected !!