50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಭರವಸೆ ಇದೆ ; ಬಿ.ವೈ. ವಿಜಯೇಂದ್ರ

0 38

ಶಿವಮೊಗ್ಗ: ಶಿಕಾರಿಪುರ ನನ್ನ ಜನ್ಮಭೂಮಿ. ಇದನ್ನೇ ಈಗ ಕರ್ಮ ಭೂಮಿಯನ್ನಾಗಿ ಮಾಡಿಕೊಳ್ಳುತ್ತಿದ್ದೇನೆ. ಇದು ನನ್ನ ಪುಣ್ಯದ ಫಲ. ಇಲ್ಲಿಯವರೆಗೆ ತಮ್ಮ ತಂದೆ ಬಿ ಎಸ್ ಯಡಿಯೂರಪ್ಪ ಅವರ ಕರ್ಮಭೂಮಿಯಾಗಿತ್ತು. ಈ ಬಾರಿ ಶಿಕಾರಿಪುರದಿಂದ ತಾನು ಚುನಾವಣಾ ಕಣಕ್ಕಿಳಿದಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಭರವಸೆ ಇಟ್ಟುಕೊಂಡಿರುವುದಾಗಿ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ ವೈ ವಿಜಯೇಂದ್ರ ಹೇಳಿದರು.


ಪ್ರೆಸ್ ಟ್ರಸ್ಟ್‌ನಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದ ಅವರು, ಶಿಕಾರಿಪುರ ಕ್ಷೇತ್ರದ ಎಲ್ಲಾ ಬೂತ್‌ಗಳಿಗೆ ಈಗಾಗಲೇ ಮೂರು ಬಾರಿ ಭೇಟಿ ಕೊಟ್ಟು ಮತಯಾಚಿಸಲಾಗಿದೆ. ಪಕ್ಷದ ಕಾರ್ಯಕರ್ತರು ರಣೋತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಸಂಘಟನೆ ಇದೆ. ನಿರಂತರ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ತನ್ನ ಗೆಲುವು ಸುಲಭವಾಗಿದೆ ಎಂದರು.
ಬಂಜಾರ ಮೀಸಲಾತಿ ವಿಷಯಯನ್ನು ಇಟ್ಟುಕೊಂಡು ಕೆಲವರು ಅವರ ಒಡಕು ಸಷ್ಟಿಸಲು ಯತ್ನಿಸಿದರು. ಯಡಿಯೂರಪ್ಪ ಅವರಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಅವರ ಮನೆಗೆ ಕಲ್ಲು ಹೊಡೆಸಿದರು. ಆದರೆ ಇದರಿಂದ ಅವರ ಉದೇಶ ಈಡೇರದು. ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ನಡೆಯದು. ಬಂಜಾರರು ಈ ಹಿಂದೆಯೂ ಬಿಜೆಪಿ ಪರವಿದ್ದರು, ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ ಎಂದರು.

ಜನರು ಅಭಿವೃದ್ಧಿಗಾಗಿ ಈ ಬಾರಿ ಮತ್ತೆ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಆದ್ದರಿಂದ ಈ ಬಾರಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ನಿಶ್ಚಿತ. ಈಗಾಗಲೇ ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಿದೆ. ಸಮಾನ ನ್ಯಾಯ, ನೀತಿಯನ್ನು ಅದು ಪ್ರತಿಪಾದಿ ಸಿದೆ. ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅರ್ಥ ಪೂರ್ಣ ಪ್ರಣಾಳಿಕೆ ರಚಿಸಲಾಗಿದೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನಿಂದ ಏನೂ ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೇರುವುದೇ ಇಲ್ಲ. ಹಾಗಾಗಿ ಕಾರ್ಡಿನಿಂದ ಲಾಭವಿಲ್ಲ. ಜೆಡಿಎಸ್‌ನವರು ಈ ಬಾರಿ ಅತಂತ್ರ ಸರಕಾರವಾಗುತ್ತದೆ ಎನ್ನುವ ಹಗಲು ಗನಸು ಕಾಣುತ್ತಿದ್ದಾರೆ. ಅದಕ್ಕಂತೂ ಬಹುಮತ ಬರುವುದಿಲ್ಲ. ತಾನೇ ಸಮ್ಮಿಶ್ರ ಸರಕಾರ ರಚಿಸ ಬಹುದೆನ್ನುವ ಭ್ರಮೆಯಲ್ಲಿದೆ ಎಂದು ಟಾಂಗ್ ನೀಡಿದರು.


ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳದಂತಹ ದೇಶಭಕ್ತ ಸಂಘಟನೆಯನ್ನು ನಿಷೇಧಿಸುವ ಕುರಿತು ಹೇಳಿದ್ದಾರೆ. ಇದು ದೇಶಭಕ್ತ ಸಂಘಟನೆ. ಕೇವಲ ಕರ್ನಾಟಕದಲ್ಲಿ ಮಾತ್ರವಿಲ್ಲ, ಹಲವು ರಾಜ್ಯಲ್ಲಿದೆ. ಇದನ್ನು ನಿಷೇಧಿಸುವ ಮಾತು ಹಾಸ್ಯಾಸ್ಪದವಾದುದು ಎಂದ ವಿಜಯೇಂದ್ರ, ಕಾಂಗ್ರೆಸ್‌ಗೆ ಚುನಾವಣಾ ದಿನ ಹತ್ತಿರ ಬರುತ್ತಿರುವಂತೆಯೇ ವೀರಶೈವರ ಬಗ್ಗೆ ಅನುಕಂಪ ಶುರುವಾಗಿದೆ ಎಂದು ಲೇವಡಿ ಮಾಡಿದರು.


ಶಿಕಾರಿಪುರ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ. ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಕನಸು ಹೊಂದಿದ್ದೇನೆ. ಅಧಿಕಾರಕ್ಕೇರಿದ ನಂತರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಜಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಕಾರ್‍ಯದರ್ಶಿ ಸಂತೋಷ್ ಕಾಚಿನಕಟ್ಟೆ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!