Ripponpet | ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಸಕಲ ಸಿದ್ದತೆ – ಏನೆಲ್ಲ ಕಾರ್ಯಕ್ರಮಗಳಿವೆ ಗೊತ್ತಾ ?
ರಿಪ್ಪನ್ಪೇಟೆ: ಇಲ್ಲಿನ ಕಸ್ತೂರಿ ಕನ್ನಡ ಸಂಘ ಮತ್ತು ದಿ|| ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದ 3ನೇ ವರ್ಷದ ವಾರ್ಷಿಕೋತ್ಸವ ಮತ್ತು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸುವ ಬಗ್ಗೆ ನಿರ್ಧರಿಸಲಾಗಿದ್ದು ಅದರನ್ವಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಇದರೊಂದಿಗೆ ದಿ||ಪುನೀತ್ ರಾಜ್ಕುಮಾರ್ ಪುಣ್ಯ ಸ್ಮರಣೆಯ ಕಾರ್ಯಕ್ರಮವು ಸಿದ್ದಿವಿನಾಯಕ ವೃತ್ತದಲ್ಲಿ ಏರ್ಪಡಿಸಲಾಗಿದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಉಲ್ಲಾಸ್ ತೆಂಕೋಲ ಮತ್ತು ಆರ್.ಎ.ಚಾಬುಸಾಬ್ ಹಾಗೂ ಮೆಣಸೆ ಆನಂದ್ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಿಪ್ಪನ್ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 31 ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗಾಗಿ ಆಟೋಟ ಸ್ಪರ್ಧೆಗಳನ್ನು ಮತ್ತು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಆರತಿ ತಟ್ಟೆ ಅಲಂಕಾರ ಹಾಗೂ ಸಂಗೀತಾ ಕುರ್ಚಿ ನಂತರ ಮಧ್ಯಾಹ್ನ 2 ಗಂಟೆಗೆ ಮಹಿಳೆಯರಿಗೆ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾವಳಿ ಪುರುಷರಿಗಾಗಿ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.
ನವೆಂಬರ್ 1 ರಂದು ಬುಧವಾರ ಬೆಳಗ್ಗೆ 9 ಗಂಟೆಗೆ ವಿವಿಧ ಮಹಿಳಾ ಸಂಘದವರಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಶಾಲಾ ಮಕ್ಕಳ ವಿವಿಧ ವೇಷ ಭೂಷಣದೊಂದಿಗೆ ಹೆಸರಾಂತ ಕಲಾ ತಂಡಗಳ ಕಲಾ ಮೆರಗಿನೊಂದಿಗೆ `ತಾಯಿ ಭುವನೇಶ್ವರಿಯ ಅಲಂಕೃತ ಭಾವಚಿತ್ರ ಮೆರವಣಿಗೆ’ 10 ಗಂಟೆಗೆ ಕನ್ನಡ ಧ್ವಜಾರೋಹಣ,11 ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಲಿದೆ.

ರಾಜ್ಯೋತ್ಸವದ ಆಂಗವಾಗಿ ಶಾಲಾ-ಕಾಲೇಜ್ ವಿದ್ಯಾಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ ಸಮಾರೋಪ ಸಮಾರಂಭ ಆಯೋಜಿಸಲಾಗಿದ್ದು ಶಾಸಕ ಗೋಪಾಲಕೃಷ್ಣ ಬೇಳೂರು, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ನಂತರ ರಾತ್ರಿ 8 ಗಂಟೆಗೆ ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಕು|| ಸಾದ್ವಿನಿ ಕೊಪ್ಪ, ಪ್ರಖ್ಯಾತ ಗಾಯನ ಕಲಾವಿದರಾದ ಮೆಹಬೂಬ್ಸಾಬ್, ಅಶ್ವಿನ್ಶರ್ಮ, ಎದೆ ತುಂಬಿ ಹಾಡುವೆನು ಖ್ಯಾತಿಯ ಸಾನ್ವಿ ಜಿ.ಭಟ್, ಇವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಜನಪರ ಹೋರಾಟವೇದಿಕೆಯ ಅಧ್ಯಕ್ಷ ಆರ್.ಎನ್.ಮಂಜುನಾಥ, ಜಾನಪದ ಕಲಾ ಪರಿಷತ್ ಜಿಲ್ಲಾ ಪ್ರಮುಖ ಮಂಜುನಾಥ ಕಾಮತ್, ಜಿ.ಡಿ.ಮಲ್ಲಿಕಾರ್ಜುನ, ಆರ್.ಡಿ.ಶೀಲಾ, ಸ್ವಾತಿ,ಬಿ.ಎಸ್.ಎನ್.ಎಲ್. ಶ್ರೀಧರ, ರಮೇಶ್ ಫ್ಯಾನ್ಸಿ, ನಾಗರಾಜ ಕೆದಲುಗುಡ್ಡೆ ಇನ್ನಿತರ ಹಲವರು ಹಾಜರಿದ್ದರು.