Shivamogga | ಬಾವುಟ ತೆಗೆದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ; ಗೊಂದಲ ನಿವಾರಿಸಿದ ಎಸ್ಪಿ
ಶಿವಮೊಗ್ಗ : ಶುಕ್ರವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ಶಿವಮೊಗ್ಗದ ಅಹ್ಮದ್ ವೃತ್ತ ಮತ್ತು ಶಿವಪ್ಪನಾಯಕ ಪ್ರತಿಮೆ ಬಳಿ ಕಟ್ಟಲಾಗಿದ್ದ ಬಾವುಟಗಳನ್ನು ತೆಗೆದಿರುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸಿದರು.

ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾತನಾಡಿ, ಅಲಂಕಾರ ವಿಚಾರವಾಗಿ ಶಿವಪ್ಪನಾಯಕ ಪ್ರತಿಮೆ ಬಳಿ ಮತ್ತು ಅಮೀರ್ಅಹ್ಮದ್ ವೃತ್ತದ ಬಳಿ ಗೊಂದಲ ಉಂಟಾಗಿತ್ತು. ಅದನ್ನು ನಿವಾರಿಸಲಾಗಿದೆ. ಪರಿಸ್ಥಿತಿ ಶಾಂತಿಯುತವಾಗಿದೆ. ಎಲ್ಲರೂ ಹಬ್ಬವನ್ನು ಸಂತೋಷದಿಂದ ಆಚರಿಸಬೇಕು. ಯಾವುದೇ ಸಮಸ್ಯೆ ಗೊಂದಲ ಇದ್ದರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇನ್ನೂ ಎರಡ್ಮೂರು ದಿನ ಹಬ್ಬ ಇದೆ. ಈ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ಪೊಲೀಸ್ ಇಲಾಖೆ ಎಲ್ಲವನ್ನು ಸೂಕ್ತವಾಗಿ ನಿಭಾಯಿಸುತ್ತದೆ ಎಂದು ಹೇಳಿದರು.