ಮಲಗಿದ್ದಾಗ ಹಾವು ಕಚ್ಚಿದೆ ಅಂದ್ರೂ ಆಸ್ಪತ್ರೆಗೆ ಸೇರಿಸಲಿಲ್ಲ ; ಎದ್ದೇಳುವಷ್ಟರಲ್ಲಿ ಹೆಣವಾಗಿದ್ದಳು ಯುವತಿ !

0 36

ಸೊರಬ : ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಮಲಗಿದ್ದಾಗ ದಿಢೀರನೇ ಎದ್ದು ಕೂತು ನನಗೆ ಹಾವು ಕಚ್ಚಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಆದರೆ, ಕರೆಂಟ್‌ ಹಾಕಿ ನೋಡಿದಾಗ ಹಾವು ಕಾಣದ ಹಿನ್ನೆಲೆಯಲ್ಲಿ ಮನೆಯವರು ಆಸ್ಪತ್ರೆಗೆ ಕರೆದೊಯ್ಯದೇ ಬೈದು ಮಲಗಿದ್ದರು. ಆದರೆ, ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ವಿಷ ದೇಹದ ತುಂಬಾ ಹರಡಿಕೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಇನ್ನು ಮೃತ ಯುವತಿಯನ್ನು ಅಕ್ಷತಾ (17) ಎಂದು ಗುರುತಿಸಲಾಗಿದೆ. ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ತಲ್ಲೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ನಾಲ್ಕು ದಿನಗಳ ಹಿಂದೆ ಅಕ್ಷತಾ ರಾತ್ರಿ ತಾಯಿಯ ಜೊತೆ ಮಲಗಿದ್ದ ವೇಳೆ ಕಿರುಚಾಡಿ ಹಾವು ಕಚ್ಚಿತು ಎಂದಿದ್ದಳು. ಮಧ್ಯರಾತ್ರಿ ವಿದ್ಯುತ್ ದೀಪ ಹಾಕಿದ್ದಾಗ ಬೆಳಕಿನಲ್ಲಿ ಹಾವು ಕಾಣಿಸಿರಲಿಲ್ಲ. ನಂತರ ಆಕೆಯ ದೇಹದಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ದಿನವಾದರೂ ಹಾವು ಕಚ್ಚಿದ್ದು ಪತ್ತೆ ಹಚ್ಚಿಲ್ಲ:

ಮೊದಲು ಆನವಟ್ಟಿ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯಲಾಗಿದೆ. ಆದರೆ, ಅಲ್ಲಿಯೂ ಆರೋಗ್ಯ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಶಿಕಾರಿಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಯುವತಿಗೆ ಹಾವು ಕಚ್ಚಿದೆ ಎಂಬ ವಿಷಯ ತಿಳಿದ ನಂತರ ಆಕೆಯನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಹಾವಿನ ವಿಷ ದೇಹಪೂರ್ತಿ ಹರಡಿಕೊಂಡಿತ್ತು. ವೈದ್ಯರು ನಿರಂತರವಾಗಿ ಚಿಕಿತ್ಸೆಯನ್ನೂ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಮಲಗಿದ್ದ ಮಗಳು ಬೆಳಗ್ಗೆ ಏಳುವಷ್ಟರಲ್ಲಿ ಹೆಣವಾಗಿದ್ದಳು ಎಂದು ತಿಳಿದುಬಂದಿದೆ.

ದ್ವಿತೀಯ ಪಿಯುಸಿ ಕಾಲೇಜಿಗೆ ಹೋಗಬೇಕಿತ್ತು:

ಇನ್ನು ಮೃತ ವಿದ್ಯಾರ್ಥಿನಿ ಶಿಕಾರಿಪುರದ ಖಾಸಗಿ ಕಾಲೇಜಿನಲ್ಲಿ ಮೊದಲ ಪಿಯುಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣಳಾಗಿದ್ದಳು. ಈ 2023-24ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ಹೋಗಬೇಕಿತ್ತು. ಆದರೆ, ರಜೆಯ ಹಿನ್ನೆಲೆಯಲ್ಲಿ ಮನೆಯ ಸದ್ಯರೆಲ್ಲರೂ ಒಟ್ಟಿಗೆ ಮಲಗುತ್ತಿದ್ದು, ಹಾವು ಕಚ್ಚಿದ್ದನ್ನು ಕೂಡ ಮನೆ ಸದಸ್ಯರು ನಿರ್ಲಕ್ಷ್ಯ ಮಾಡಿದ್ದಾರೆ. ಹಾವಿನ ಬದಲು ಬೇರೆ ಯಾವುದೋ ಹುಳು ಕಚ್ಚಿರಬೇಕು ಎಂದು ಹೇಳಿ ಸಮಾಧಾನ ಮಾಡಿದ್ದಾರೆ. ಆದರೆ, ಕುಟುಂಬದ ನಿರ್ಲಕ್ಷ್ಯದಿಂದ ಮಗಳನ್ನೇ ಕಳೆದುಕೊಂಡಿದ್ದಾರೆ. ಈ ಘಟನೆ ಸೊರಬ ತಾಲೂಕಿನ ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave A Reply

Your email address will not be published.

error: Content is protected !!