ತರೀಕೆರೆ: ಅಭ್ಯರ್ಥಿಗಳಿಂದ ಹಣ ಪಡೆದು ಗ್ರಾಮದ ಜನರಿಗೆ ನೀಡದೇ ತಾನೇ ಇಟ್ಟುಕೊಂಡಿದ್ದಾನೆ ಎನ್ನಲಾದ ಗ್ರಾಮದ ಮುಖಂಡನಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಬಾರಿಸಿದ ಘಟನೆ ನಡೆದಿದೆ.
ತಾಲೂಕಿನ ಪಿರಮೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಹಣ ನೀಡುತ್ತೇನೆ ಎಂದು ವಂಚಿಸಿದ ಮಂಜು ಎಂಬಾತನಿಗೆ ಕ್ಲಾಸ್ ತೆಗೆದುಕೊಂಡು ಮನಸ್ಸಿಗೆ ಬಂದಂತೆ ಕೋಲಿನಿಂದ ಬಾರಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುರೇಶ್ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಹಮ್ಮಿಕೊಂಡಿದ್ದ ರೋಡ್ಶೋನಲ್ಲಿ ಭಾಗವಹಿಸಿದರೆ ದುಡ್ಡು ಕೊಡೋದಾಗಿ ಮಂಜು ಗ್ರಾಮಸ್ಥರಿಗೆ ಹೇಳಿ ಕರೆದೊಯ್ದಿದ್ದ. ಆದರೆ ಕಾರ್ಯಕ್ರಮ ಮುಗಿದರೂ ಗ್ರಾಮದ ಯಾರಿಗೂ ಆತ ದುಡ್ಡು ನೀಡಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಆತನನ್ನು ರಸ್ತೆಯಲ್ಲೇ ತಡೆದು ಪ್ರಶ್ನಿಸಿದ್ದು. ಈ ವೇಳೆ ರೊಚ್ಚಿಗೆದ್ದ ಮಹಿಳೆ ಆತನಿಗೆ ಬೈಕ್ನಲ್ಲಿ ಕುಳಿತಿದ್ದಾಗಲೇ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.
ಮಹಿಳೆ ಬೈಕ್ನಲ್ಲಿ ಕುಳಿತಿದ್ದ ಮಂಜುಗೆ ಕೋಲಿನಿಂದ ಮನಬಂದಂತೆ ಹೊಡೆದಾಗ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಒಮ್ಮೆ ತಡೆಯಲು ಯತ್ನಿಸಿದ್ದು, ಆದರೂ ಕೋಪದಿಂದ ಇದ್ದ ಮಹಿಳೆ ಆತನಿಗೆ ಹಲ್ಲೆ ಮಾಡೋದನ್ನು ನಿಲ್ಲಿಸಿಲ್ಲ.
ಹಣ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮಂಜುನನ್ನು ಪ್ರಶ್ನಿಸಿದಾಗ ಆತ ಕಾರಣ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಗ್ರಾಮಸ್ಥರು ಆತನ ಮೇಲೆ ಹಲ್ಲೆ ಮಾಡಿದ್ದಾರೆ.
ಇದೀಗ ಹಣ ನೀಡದ ವಿಚಾರಕ್ಕೆ ಸಂಬಂಧಿಸಿ ನಡೆದ ಈ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ತರಹೇವಾರಿ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ.