ರಿಪ್ಪನ್ಪೇಟೆ ; ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗಿಡ-ಮರಗಳನ್ನು ಶಾಲೆ, ಸರ್ಕಾರಿ ಕಛೇರಿ ಸೇರಿದಂತೆ ಮನೆಯ ಸುತ್ತಮುತ್ತ ಬೆಳೆಸುವುದರಿಂದಾಗಿ ಶುದ್ದ ಗಾಳಿಯ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯವೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಐಶ್ವರ್ಯ ಕರೆ ನೀಡಿದರು.
ರಿಪ್ಪನ್ಪೇಟೆಯಲ್ಲಿ ಅರಸಾಳು ವಲಯ ಅರಣ್ಯಾಧಿಕಾರಿ ಕಛೇರಿಯವರು ಪೊಲೀಸ್ ಮತ್ತು ಪಶು ಅಸ್ಪತ್ರೆ ಹಾಗೂ ಅರಣ್ಯ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ “ವನಮಹೋತ್ಸವ’’ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ, ಪರಿಸರ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ನಮಗೆ ಗಾಳಿ ಬೆಳಕು ನೀರು ಎಷ್ಟು ಮುಖ್ಯವೋ ಅಷ್ಟೆ ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಮುಖ್ಯವಾಗಿದೆ ಎಂದರು.
ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ರಾಜುರೆಡ್ಡಿ ಬೆನ್ನೂರು ಮಾತನಾಡಿ, ಒತ್ತುವರಿ ಹೆಸರಿನಲ್ಲಿ ಅರಣ್ಯ ನಾಶಗೊಳಿಸುತ್ತಿದ್ದು ಇದರಿಂದಾಗಿ ಮಳೆ ಕಾಲಕಾಲಕ್ಕೆ ಸರಿಯಾಗಿ ಬಾರದಿರುವುದಕ್ಕೂ ಕಾರಣವಾಗಿದೆ. ಇನ್ನೂ ವಾಹನಗಳ ದಟ್ಟಣೆಯಿಂದಾಗಿ ಕಲುಷಿತ ವಾತಾವರಣ ಸೃಷ್ಟಿಯಾಗುತ್ತಿದ್ದು ವಾಯು ಮಾಲಿನ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಇದೆ. ಆ ಕಾರಣ ನಮ್ಮ ಮನೆ ಮತ್ತು ಕಛೇರಿ ಶಾಲೆಗಳ ಸುತ್ತಮುತ್ತ ಶುದ್ದ ಗಾಳಿ ಬೆಳಕಿಗೆ ಮತ್ತು ನೀರು ಪ್ರತಿಯೊಂದನ್ನು ಸಮತೋಲನವಾಗಿಟ್ಟುಕೊಳ್ಳುವ ಉದ್ದೇಶದಿಂದಾಗಿ ಮನೆಗೊಂದು ಮರ ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ ಕೆ.ಬಿ., ಪಶು ಇಲಾಖೆಯ ಸಹಾಯ ನಿರ್ದೇಶಕ ಡಾ.ಸಂತೋಷ, ಡಿ.ಆರ್.ಎಫ್.ಓ ಸುನೀಲ್, ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕರಾದ ಕುಮಾರ್ ಎಸ್, ಅನಿಲ್ ಹಾಗೂ ಹಾಲಪ್ಪ, ಗ್ರಾಮ ಪಂಚಾಯಿತ್ ಸದಸ್ಯರು ಮತ್ತು ಪೊಲೀಸ್ ಅರಣ್ಯ ಮತ್ತು ಪಶು ಇಲಾಖೆಯ ಸಿಬ್ಬಂದಿವರ್ಗ ಹಾಜರಿದ್ದರು.