ತೀರ್ಥಹಳ್ಳಿ: ಪಟ್ಟಣದ ಲೂರ್ದುಮಾತೆಯ ದೇವಾಲಯದ 125ನೇ ಜ್ಯೂಬಿಲಿ ವರ್ಷಾಚರಣೆಯ ಅಂಗವಾಗಿ ಲೂರ್ದುಮಾತೆಯ ದೇವಾಲಯದ ಆವರಣದಲ್ಲಿ ದೇವಾಲಯದ ‘ಕ್ಯಾಥೋಲಿಕ್ ಅಸೋಸಿಯೇಷನ್’ ಸಂಘಟನೆ ಹಾಗೂ ‘ಮಹಿಳಾ ಮತ್ತು ಆರೋಗ್ಯ ಆಯೋಗ’ ಗಳು ತೀರ್ಥಹಳ್ಳಿ ‘ರೋಟರಿ ಸಂಸ್ಥೆ’ ಯ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಗಿ ನಡೆಯಿತು.
ಈ ಶಿಬಿರದ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ವೈದ್ಯರ ಸೇವೆಯನ್ನು ಶ್ಲಾಘಿಸಿ, ಈ ಸಮಯದಲ್ಲಿ ತೀರ್ಥಹಳ್ಳಿಯಲ್ಲಿ ಒಂದು ಕೌಟುಂಬಿಕ ಆಪ್ತ ಸಮಾಲೋಚನೆ ಕೇಂದ್ರದ ಸ್ಥಾಪನೆಯ ಅಗತ್ಯದ ಕುರಿತು ಪ್ರಾಸ್ತಾಪಿಸಿದರು.

ಉದ್ಘಾಟನಾ ಕಾರ್ಯಕ್ರಮ ಅತಿಥಿಗಳಾಗಿ ಮಾತನಾಡಿದ ಪಟ್ಟಣ ಪಂಚಾಯತ್ ಅಧ್ಯಕ್ಷ ರೆಹಮತುಲ್ಲಾ ಅಸಾದಿ ಮಾನವ ನಿರ್ಮಿತ ಯಾವುದೇ ಅತ್ಯಾಧುನಿಕ ಉಪಕರಣಗಳು ಕೂಡ ಮಾನವನ ದೇಹದಲ್ಲಿದ ಅಂಗಾಂಗಗಳಿಗೆ ಸಾಟಿಯಾಗಲು ಸಾಧ್ಯವಿಲ್ಲ. ಇಂತಹ ಅಂಗಾಂಗಗಳ ಅರೋಗ್ಯ ಕಾಪಾಡಿಕೊಳ್ಳುವುದು ಇಂದಿನ ಪ್ರಥಮ ಆದ್ಯತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೂರ್ದುಮಾತೆ ದೇವಾಲಯದ ಗುರುಗಳಾದ ವಂ.ಫಾ|| ವೀರೇಶ್ ವಿಕ್ಟರ್ ಮೊರಾಸ್ ಮಾತನಾಡಿ, ಮನುಷ್ಯನಿಗೆ ಎಷ್ಟು ಹಣವಿದ್ದರೂ ಅರೋಗ್ಯವಿಲ್ಲದಿದ್ದರೆ ಎಲ್ಲವೂ ವ್ಯರ್ಥ, ಇಂದಿನ ಆರೋಗ್ಯ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.
ತೀರ್ಥಹಳ್ಳಿ ರೋಟರಿ ಸಂಸ್ಥೆ ಅಧ್ಯಕ್ಷರಾದ ಭರತ್ ಕುಮಾರ್, ರೋಟರಿ ಅನಿಲ್ ಕುಮಾರ್, ಪ.ಪಂ.ಉಪಾಧ್ಯಕ್ಷೆ ಗೀತಾ ರಮೇಶ್, ಕ್ಯಾಥೊಲಿಕ್ ಅಸೋಸಿಯೇಷನ್ ಪದಾಧಿಕಾರಿಗಳು, ಮುಂತಾದವರಿದ್ದರು.
ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ವಿವಿಧ ವಿಭಾಗದ ತಜ್ಞ ವೈದ್ಯರು ಶಿಬಿರದ ಯಶಸ್ವಿಗೆ ಸಹಕರಿಸಿದರು ಹಾಗೂ ಈ ಶಿಬಿರದಲ್ಲಿ ತೀರ್ಥಹಳ್ಳಿ ‘ಮಿಲಾಗ್ರಿಸ್ ಕೋ-ಅಪರೇಟಿವ್ ಬ್ಯಾಂಕ್’ನ ವತಿಯಿಂದ ಆರೋಗ್ಯ ಕಾರ್ಡ್ ನೋಂದಣಿ ಹಾಗೂ ನವೀಕರಣ ಮಾಡಿಸಲಾಯಿತು.