ಬಾಳೆಹೊನ್ನೂರು

ಧರ್ಮಸ್ಥಳ ಪ್ರಕರಣ ಕುರಿತು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಂಚಪೀಠಗಳ ಅಸಮಾಧಾನ | ನೈಜ ಆರೋಪಿಗಳ ಪತ್ತೆಗೆ ಆಗ್ರಹ

ಬಾಳೆಹೊನ್ನೂರು ; ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪಂಚಪೀಠಗಳ ಜಗದ್ಗುರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು, ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, ಶ್ರೀ ಕೇದಾರ ಭೀಮಾಶಂಕರ ಜಗದ್ಗುರುಗಳು, ಶ್ರೀಶೈಲ ಡಾ.ಚನ್ನಸಿದ್ಧರಾಮ ಜಗದ್ಗುರುಗಳು, ಶ್ರೀ ಕಾಶೀ ಡಾ.ಚಂದ್ರಶೇಖರ ಜಗದ್ಗುರುಗಳು, ನೂತನ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಧರ್ಮ ಕ್ಷೇತ್ರಗಳು ತಮ್ಮದೇ ಆದ ಸಂಸ್ಕೃತಿ ಮತ್ತು ಪರಂಪರೆಯನ್ನು ಅನುಸರಿಸುತ್ತವೆ. ಅಂತಹ ಧರ್ಮ ಕ್ಷೇತ್ರಗಳಲ್ಲಿ ರಾಜಕೀಯವನ್ನು ಬೆರೆಸುವ ಕೆಲಸ ಯಾರೂ ಮಾಡಬಾರದು.

ಅನಾವಶ್ಯಕವಾಗಿ ಧರ್ಮಸ್ಥಳದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಭಕ್ತರ ಮತ್ತು ಸಮಾಜದ ಹಾಗೂ ಸರ್ಕಾರದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಸನಾತನ ಧರ್ಮ ತೇಜೋವಧೆಗೆ ಕಾಣದ ಕೈಗಳು ಹುನ್ನಾರ ನಡೆಸಿವೆ. ಸರ್ಕಾರ ರಚನೆ ಮಾಡಿರುವ ವಿಶೇಷ ತನಿಖಾ ಸಂಸ್ಥೆಯು ಮೇಲ್ನೋಟಕ್ಕೆ ಆರೋಪಿಗಳಾಗಿರುವವರ ವಿಚಾರಣೆ ನಡೆಸುತ್ತಿದ್ದು, ಈ ಒಟ್ಟಾರೆ ಪ್ರಕರಣದ ಹಿಂದಿನ ಸೂತ್ರಧಾರಿಗಳನ್ನು ಪತ್ತೆಹಚ್ಚಿ ಆದಷ್ಟು ಬೇಗ ಅವರಿಗೆ ಶಿಕ್ಷೆ ನೀಡುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.

ನಾಡಿನಲ್ಲಿರುವ ಅನೇಕ ಮಠ-ಮಂದಿರಗಳು ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಾಚೀನ ಕಾಲದಿಂದಲೂ ಕಾರ್ಯ ನಿರ್ವಹಿಸಿಕೊಂಡು ಬಂದಿವೆ. ಅಂತೆಯೇ ಧರ್ಮಸ್ಥಳ ಕ್ಷೇತ್ರ ಶತಮಾನಗಳ ಇತಿಹಾಸ ಹೊಂದಿದ್ದು ನಾಡಿಗೆ ವಿಶೇಷ ಕೊಡುಗೆ ನೀಡಿದೆ. ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಕಳೆದ 50 ವರ್ಷಗಳಿಂದ ಧರ್ಮ ಸಂಸ್ಕೃತಿ ಪುನುರುತ್ಥಾನಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.

ಇಂತಹ ಕ್ಷೇತ್ರದ ಮೇಲೆ ಬಂದಿರುವ ಆರೋಪಗಳು ಮುಕ್ತವಾಗಿ ಆದಷ್ಟು ಬೇಗ ಮೊದಲಿನಂತೆ ಎಲ್ಲ ಸಾಮಾಜಿಕ ಕಾರ್ಯಗಳು ಮುಂದುವರೆಯುವಂತಾಗಲಿ ಎಂದು ಹಾರೈಸಿರುವ ಜಗದ್ಗುರು, ಪಂಚಪೀಠಾಧೀಶ್ವರರು ಹಿಂದೂ ಸಂಸ್ಕೃತಿಯ ಬಗ್ಗೆ ಇತ್ತೀಚಿಗೆ ಕೆಲವು ನಾಸ್ತಿಕರು ಅಲ್ಲಲ್ಲಿ ವಾತಾವರಣ ಕಲುಷಿತಗೊಳಿಸುವ ಕೆಲಸ ಮಾಡುತ್ತಿದ್ದಾರೆ ಅಂತವರನ್ನು ಗುರುತಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಇದೇ ವೇಳೆ ಆಗ್ರಹಿಸಿದ್ದಾರೆ.

Leave a Comment