ರಿಪ್ಪನ್ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಅಭೀಷ್ಠವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪರಂಪರಾನುಗತವಾಗಿ ನೆರವೇರುವ ಶರನ್ನವರಾತ್ರಿ ಮತ್ತು ವಿಜಯದಶಮಿ ಪರ್ವ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಏರ್ಪಡಿಸಲಾಗಿದೆ.

ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವ, ಸಾನಿಧ್ಯ ಮತ್ತು ಉಪಸ್ಥಿತಿಯಲ್ಲಿ ವಿಶೇಷ ಪೂಜೆಗಳು, ಪ್ರತಿನಿತ್ಯ ಜಿನಸ್ತುತಿ-ಭಜನೆ-ಉತ್ಸವ-ಆರಾಧನೆಗಳು ನೆರವೇರಲಿವೆ.
ಸೆ. 22ರಂದು ಘಟಸ್ಥಾಪನೆ, ಸೆ. 29ರಂದು ಶ್ರೀ ಸರಸ್ವತಿ ಪೂಜೆ, ಸೆ. 30ರಂದು ಜೀವದಯಾಷ್ಟಮಿ, ಅ. 01 ರಂದು ಆಯುಧ ಪೂಜೆ ಮತ್ತು ಮಹಾನವಮಿ, ಅ. 02 ರಂದು ವಿಜಯದಶಮಿ ಉತ್ಸವ, ಶ್ರೀ ಮಹಾದೇವಿ ಪಲ್ಲಕ್ಕಿ ಉತ್ಸವ ಜರುಗಲಿದೆ.

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಪರಂಪರಾನುಗತ ಸಿಂಹಾಸನಾರೋಹಣ, ಶ್ರೀಗಳವರ ಪಾದಪೂಜೆ, ವಿಜಯದಶಮಿ ಪ್ರಯುಕ್ತ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ. ಅಂದು ಸಾಯಂಕಾಲ ಬನ್ನಿ ಮಂಟಪದಲ್ಲಿ ವಿಶೇಷ ಪೂಜೆ ನೆರವೇರಲಿದ್ದು ಶ್ರೀಗಳವರು ಶ್ರೀಮಂತ್ರಾಕ್ಷತೆ ನೀಡಲಿರುವರು.

ಭಕ್ತವೃಂದದವರು ವಿಶೇಷ ಪೂಜೆಯನ್ನು ಶಮೀ ಪತ್ರದೊಂದಿಗೆ ಸಲ್ಲಿಸುವುದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಉಪಾಹಾರ, ಅನ್ನಪ್ರಸಾದ ಹಾಗೂ ಯಥೋಚಿತ ವಸತಿ ವ್ಯವಸ್ಥೆಗಾಗಿ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆಯೆಂದು ಶ್ರೀಮಠದ ಪ್ರಕಟನೆ ತಿಳಿಸಿದೆ.
ಹೊಂಬುಜದ ಅಧೀನ ಕ್ಷೇತ್ರಗಳಾದ ಶ್ರೀಕ್ಷೇತ್ರ ವರಂಗ, ಹಟ್ಟಿಯಂಗಡಿ ಜಿನಮಂದಿರಗಳಲ್ಲಿ ಸಂಪ್ರದಾಯದಂತೆ ವಿಶೇಷ ಪೂಜೆಗಳು, ಆರಾಧನೆ, ಉತ್ಸವಾದಿ ನೆರವೇರುವುದಾಗಿ ತಿಳಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.