ಶಿವಮೊಗ್ಗ:ಚಿತ್ರರಂಗದ ಹಿರಿಯ ನಟ ಡಾ.ರಾಜ್ ಕುಮಾರ್ ಅವರ ಸೊಸೆ ಹಾಗೂ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಇನ್ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಘೋಷಣೆ ಮಾಡಿದ್ದಾರೆ.
ಶನಿವಾರ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ ಗೀತಾ ಶಿವರಾಜ್ ಕುಮಾರ್ ಅವರು ಮಾತನಾಡಿ, “ನಾನು ಇನ್ನು ಮುಂದೆ ಶಿವಮೊಗ್ಗದಿಂದಲೂ ಬೇರೆಡೆಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ, ಚುನಾವಣಾ ರಾಜಕೀಯದಲ್ಲಿ ಸ್ಪರ್ಧಿಸದಿದ್ದರೂ ಪಕ್ಷ ಸಂಘಟನೆಯಲ್ಲಿ ಸದಾ ನಿಮ್ಮೊಂದಿಗೇ ಇರುತ್ತೇನೆ. ಯಾವಾಗ ಕರೆದರೂ ಬಂದು ಕೆಲಸ ಮಾಡುವೆ,” ಎಂದು ಹೇಳಿದರು.
ಅವರು ಮುಂದುವರಿದು, “ಶ್ವೇತಾ ಬಂಡಿ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿರುವುದರಿಂದಲೇ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ನನ್ನ ಚುನಾವಣಾ ಪ್ರಚಾರದ ವೇಳೆಯಲ್ಲೂ ಶ್ರಮಿಸಿದ್ದರು. ಅವರಿಗೆ ಅಭಿನಂದನೆಗಳು. ಇಂತಹ ನಾಯಕತ್ವದಿಂದ ಮಹಿಳಾ ಕಾಂಗ್ರೆಸ್ ಸಂಘಟನೆ ಬಲವಾಗಿ ಬೆಳೆಯಲಿ,” ಎಂದು ಶುಭಹಾರೈಸಿದರು.
ಸಭೆಯಲ್ಲಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್ ಅವರು ಮಹಿಳೆಯರ ಶಕ್ತಿಯ ಕುರಿತು ಪ್ರಸ್ತಾಪಿಸಿ, “ಮಹಿಳೆಯರು ಅಬಲೆಯರಲ್ಲ. ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಕೊಂಡರೆ ನಿಜವಾದ ಬಲವಾಗಿ ಪರಿಣಮಿಸುತ್ತಾರೆ,” ಎಂದು ಸಲಹೆ ನೀಡಿದರು.
ಈ ಮೂಲಕ, ದೀರ್ಘಕಾಲದಿಂದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಗೀತಾ ಶಿವರಾಜ್ ಕುಮಾರ್ ಅವರು ಚುನಾವಣಾ ಸ್ಪರ್ಧೆಯಿಂದ ದೂರವಿದ್ದು, ಸಂಘಟನಾತ್ಮಕ ರಾಜಕೀಯಕ್ಕೆ ಮಾತ್ರ ಸೀಮಿತವಾಗುವ ಸೂಚನೆ ನೀಡಿದ್ದಾರೆ.