ಮಕ್ಕಳಿಗೆ ಸಂಸ್ಕಾರಯುತ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರಿಗೆ ಶಾಸಕ ಆರಗ ಜ್ಞಾನೇಂದ್ರ ಕರೆ
ರಿಪ್ಪನ್ಪೇಟೆ : ಮಕ್ಕಳಿಗೆ ಸಂಸ್ಕಾರಯುತ ಹಾಗೂ ಗುಣಾತ್ಮಕ ಶಿಕ್ಷಣ ನೀಡಿದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯವೆಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆನೆಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕೊಠಡಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮುಗ್ದ ಮನಸ್ಸಿನಲ್ಲಿ ಚಂಚಲತೆಯಿರುತ್ತದೆ. ಅವರುಗಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ ಬೆಳೆಸಿದರೆ ಉತ್ತಮ ವ್ಯಕ್ತಿತ್ವದ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವೆಂದರು.
ಶಿಕ್ಷಣ ಇಲ್ಲದವರು ಜೀವನದಲ್ಲಿ ಮಹಾಸಾಧನೆ ಮಾಡಿದ್ದಾರೆ. ಇದಕ್ಕೆ ಕಾರಣ ವಿವೇಕ ನಮ್ಮ ಉತ್ತಮ ನಡವಳಿಕೆಯಿಂದ ಜಗತ್ತನ್ನು ಗೆಲ್ಲಬಹುದು. ಹಾಗೆ ನಮ್ಮ ಎಲ್ಲಾ ಆಲೋಚನೆಗಳು ಉಪಯೋಗಕ್ಕೆ ಬರುವುದಿಲ್ಲ. ಸನ್ನಡತೆ ಸಮಾಜಮುಖಿ ಕಾರ್ಯಗಳೊಂದಿಗೆ ಒಳ್ಳೆಯ ಯೋಚನೆಗಳನ್ನು ಮಕ್ಕಳಲ್ಲಿ ಬೆಳೆಸಿದಾಗ ಉತ್ತಮ ನಾಗರೀಕರನ್ನಾಗಿಸಲು ಸಾಧ್ಯವೆಂದರು.
ಎಸ್.ಡಿ.ಎಂ.ಸಿ.ಆಧ್ಯಕ್ಷ ಸುರೇಶ್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ವೆಂಕಟೇಶ್, ಸದಸ್ಯರಾದ ಶ್ವೇತಾ, ರಾಜಶೇಖರ್, ರಾಘವೇಂದ್ರ ನಾಯ್ಕ್, ಪಲ್ಲವಿ, ಎಸ್.ಡಿ.ಎಂ.ಸಿ.ಸದಸ್ಯರುಗಳು, ಪೋಷಕ ವರ್ಗ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.