ಹೊಸನಗರ ; ಇಲ್ಲಿನ ಆರ್ಯ ಈಡಿಗ ಸಂಘದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ 95ರ ಇಳಿ ವಯಸ್ಸಿನ ಮಾಜಿ ಶಾಸಕ ಸಂಘದ ಕಚೇರಿ ಎದುರು ಕೈಗೊಂಡಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ನಿಟ್ಟೂರು ಶ್ರೀ ನಾರಾಯಣ ಗುರು ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾನಂದ ಸ್ವಾಮಿಗಳು ಮಧ್ಯಸ್ಥಿಕೆಯಲ್ಲಿ ಹಲವು ಷರತ್ತುಗಳಿಗೆ ಒಪ್ಪಿ ಗುರುವಾರ ಮಧ್ಯಾಹ್ನ ಎಳನೀರು ಸೇವಿಸುವ ಮೂಲಕ ಅಂತ್ಯಗೊಳಿಸಿದರು.

ವಿಷಯ ತಿಳಿದು ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜೆಡಿಎಸ್ ಮುಖಂಡ ಚಾಬುಸಾಬ್, ಸಮಾಜವಾದಿ ಮುಖಂಡ ಕಲ್ಲೂರು ಮೇಘರಾಜ್, ಪ್ರಮುಖರಾದ ಟಿ.ಡಿ.ಮೇಘರಾಜ್, ಪ್ರಶಾಂತ್ ಕೆ.ಜಿ. ಶಿವಪ್ಪ, ಉಮೇಶ್ ಕಂಚುಗಾರ್, ದೀವರ ಯುವ ವೇದಿಕೆ ಸದಸ್ಯರು, ದೀವರ ಹಿತರಕ್ಷಣಾ ವೇದಿಕೆ ಸದಸ್ಯರು ಸೇರಿದಂತೆ ಅನೇಕರು ಉಪವಾಸ ನಿರತ ಸ್ವಾಮಿರಾವ್ ಅವರನ್ನು ಸಂತೈಸಲು ಯತ್ನಿಸಿದರು. ಪಟ್ಟು ಬಿಡದ ಸ್ವಾಮಿರಾವ್, ಸಂಘದ ಆಡಳಿತ ಮಂಡಳಿಯ ಸಾಮೂಹಿಕ ರಾಜೀನಾಮೆ ಹಾಗೂ ಲೆಕ್ಕಪತ್ರ ಸಲ್ಲಿಕೆಗೆ ಒತ್ತಾಯ ನಿರಂತರವಾಗಿತ್ತು. ಶ್ರೀಗಳ ಮಧ್ಯ ಪ್ರವೇಶದಿಂದ ಪ್ರತಿಭಟನೆ ಸುಖಾಂತ್ಯ ಕಂಡಿತು.

