ರಿಪ್ಪನ್ಪೇಟೆ ; ಭಾರತದಲ್ಲಿ ಹಲವು ಜಾತಿ, ಮತ, ಭಾಷೆ, ಪ್ರದೇಶ, ವಿವಿಧ ಸಂಸ್ಕೃತಿಗಳಿದ್ದರೂ ಕೆಲವು ನಿಗದಿತ ಹಬ್ಬ ಹರಿದಿನಗಳ ಮೂಲಕ ಏಕತೆಯನ್ನು ಸಾಧಿಸುವ ಪರಿಪಾಠವನ್ನು ನಮ್ಮ ಋಷಿ-ಮುನಿಗಳು ಹಾಕಿಕೊಟ್ಟಿದ್ದಾರೆ. ಅನೇಕತೆಯಲ್ಲಿ ಏಕತೆ ಸಾಧಿಸುವುದೇ ನಿಜವಾದ ಸಂಕ್ರಾಂತಿ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಸಮಾರೋಪ ಮತ್ತು ಸಂಕ್ರಾಂತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಂಕ್ರಾಂತಿ ಹಬ್ಬದಂದು ಸಮುದ್ರ ಸ್ನಾನ, ಸಂಗಮ ಸ್ನಾನಗಳನ್ನು ಮಾಡಬೇಕೆಂಬ ನಿಯಮವಿದೆ. ಸಂಗಮ ಸ್ನಾನದ ಸಾಂಕೇತಿಕ ಅರ್ಥ ದೇಶ, ಧರ್ಮಕ್ಕಾಗಿ ಎಲ್ಲರೂ ಒಂದಾಗಿ ಹೋಗುವುದು ಎಂದರ್ಥ. ನದಿಗಳು ಭಿನ್ನ ಪ್ರದೇಶದಲ್ಲಿ ಹುಟ್ಟಿದರೂ ನಿಗದಿತ ಸ್ಥಳದಲ್ಲಿ ಸೇರಿದ ಮೇಲೆ ಅವು ಸಾಗರವನ್ನು ಸೇರುವವರೆಗೆ ಎಂದಿಗೂ ಮತ್ತೆ ಬೇರೆ ಆಗದಂತೆ ಕೂಡಿಕೊಂಡೇ ಹರಿಯುತ್ತವೆ. ಇಂತಹ ಏಕತೆಯನ್ನು ಮೈಗೂಡಿಸಿಕೊಳ್ಳುವುದಕ್ಕಾಗಿಯೇ ಸಂಗಮ ಸ್ನಾನ ಮಾಡುವ ಪದ್ದತಿ ರೂಢಿಗೆ ಬಂದಿದೆ. ಇಂದು ಕೋಣಂದೂರು ಮಠದಲ್ಲಿ ಕೂಡಾ ಭಕ್ತರ ಸಂಗಮ ಸ್ನಾನವನ್ನು ಮಾಡಿದ್ದಾರೆ. ಅದು ಹೇಗೆಂದರೆ ಇಲ್ಲಿರುವ ಹತ್ತಾರು ಶಿವಾಚಾರ್ಯರು ಒಂದೊಂದು ನದಿಗಳಿದ್ದಂತೆ ಅವರೆಲ್ಲರೂ ಕೂಡಿ ಸಮುದ್ರದೋಪಾದಿಯಲ್ಲಿ ಆಗಮಿಸಿರುವ ಜಗದ್ಗುರುಗಳ ಸಾನ್ನಧ್ಯವನ್ನು ಸೇರಿದ್ದಾರೆ. ಇಲ್ಲಿ ದೊರೆತ ಜ್ಞಾನ ಗಂಗೆಯಲ್ಲಿ ಮಿಂದು ನೀವೆಲ್ಲಾ ಜೀವನದಲ್ಲಿ ದೇಶ, ಧರ್ಮಕ್ಕಾಗಿ ಒಂದಾಗಿ ಸಾಗುವಂತೆ ಜಗದ್ಗುರುಗಳು ಭಕ್ತರಿಗೆ ಕರೆ ನೀಡಿದರು.
ಸಮಾರಂಭಕ್ಕೂ ಮುನ್ನ ಕಾಶೀ ಜಗದ್ಗುರುಗಳು ನಡೆಸಿದ ಸಾರ್ವಜನಿಕ ಇಷ್ಟಲಿಂಗ ಮಹಾಪೂಜೆಯಲ್ಲಿ ಭಕ್ತರು ಪಾಲ್ಗೊಂಡು ಗುರುಗಳ ಪಾದಪೂಜೆ ನೆರವೇರಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.

ಸಮಾರಂಭದಲ್ಲಿ ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಕ್ಯಾಸನೂರು, ಬನವಾಸಿ ಮತ್ತಿತರ ಮಠಗಳ ಶ್ರೀಗಳು, ಶಾಸಕ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉದ್ಯಮಿ ಕೆ.ಆರ್.ಪ್ರಕಾಶ್, ಹಾರೋಹಿತ್ತಲು ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





